ಭೀಕರ ಭೂಕಂಪಕ್ಕೆ ತುತಾಗಿರುವ ಟರ್ಕಿಗೆ ಭಾರತವು 'ಆಪರೇಶನ್‌ ದೋಸ್ತ್' ಕಾರ್ಯಾಚರಣೆ ಮೂಲಕ ಪರಿಹಾರ ಸಾಮಗ್ರಿಗಳನ್ನು ಕಳಿಸಿ ಮಾನವೀಯತೆ ಮೆರೆಯುತ್ತಿರುವ ಬಗ್ಗೆ ಭಾರತದಲ್ಲಿನ ಟರ್ಕಿ ರಾಯಭಾರಿ ಫಿರಟ್‌ ಸುನೆಲ್‌ (Firat Sunel) ಧನ್ಯವಾದ ಅರ್ಪಿಸಿದ್ದಾರೆ.

ನವದೆಹಲಿ: ಭೀಕರ ಭೂಕಂಪಕ್ಕೆ ತುತಾಗಿರುವ ಟರ್ಕಿಗೆ ಭಾರತವು 'ಆಪರೇಶನ್‌ ದೋಸ್ತ್' ಕಾರ್ಯಾಚರಣೆ ಮೂಲಕ ಪರಿಹಾರ ಸಾಮಗ್ರಿಗಳನ್ನು ಕಳಿಸಿ ಮಾನವೀಯತೆ ಮೆರೆಯುತ್ತಿರುವ ಬಗ್ಗೆ ಭಾರತದಲ್ಲಿನ ಟರ್ಕಿ ರಾಯಭಾರಿ ಫಿರಟ್‌ ಸುನೆಲ್‌ (Firat Sunel) ಧನ್ಯವಾದ ಅರ್ಪಿಸಿದ್ದಾರೆ. ಭಾರತ ನಮಗೆ ನೀಡುವ ಒಂದು ಹಾಸಿಗೆ, ಹೊದಿಕೆ ಹಾಗೂ ಡೇರೆಗಳು ನಮಗೆ ತುಂಬ ಮೌಲ್ಯಯುತವಾಗಿದೆ. ಅವಶೇಷಗಳಡಿ ಸಿಲುಕಿರುವ ನೂರು ಸಾವಿರಾರು ಜನರಿಗೆ ಇದು ಅತಿ ಮುಖ್ಯವಾಗಿದೆ ಎಂದು ಸುನೆಲ್‌ ಟ್ವೀಟರ್‌ನಲ್ಲಿ ಧನ್ಯವಾದ ಹೇಳಿದ್ದಾರೆ. ಅಲ್ಲದೇ ಆಪರೇಷನ್‌ ದೋಸ್ತ್ (Operation Dost) ಭಾರತ ಹಾಗೂ ಟರ್ಕಿ ನಡುವಿನ ಸ್ನೇಹವನ್ನು ಮತ್ತಷ್ಟು ವೃದ್ಧಿಸಿದೆ ಎಂದಿದ್ದಾರೆ. ಭಾನುವಾರ ಆಪರೇಶನ್‌ ದೋಸ್ತ್‌ನ 7ನೇ ವಿಮಾನವು ಭಾರತದಿಂದ 23 ಟನ್‌ ಪರಿಹಾರ ಸಾಮಗ್ರಿಗಳನ್ನು ಹೊತ್ತು ಸಿರಿಯಾದ (Syria) ಡಮಾಸ್ಕಸ್‌ (Damascus) ತಲುಪಿತ್ತು.

Add Asianetnews Kannada as a Preferred SourcegooglePreferred

ಸಾವಿನ ಸಂಖ್ಯೆ 35 ಸಾವಿರಕ್ಕೆ ಏರಿಕೆ

ಇಸ್ತಾಂಬುಲ್‌: ಕಳೆದ ಸೋಮವಾರ ಟರ್ಕಿ ಮತ್ತು ಸಿರಿಯಾಗಳಲ್ಲಿ ಸಂಭವಿಸಿದ 7.8 ತೀವ್ರತೆಯ ಭಾರೀ ಭೂಕಂಪಕ್ಕೆ (earthquake) ಈವರೆಗೆ ಮೃತಪಟ್ಟವರ ಸಂಖ್ಯೆ 35,224 ಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ 31,643 ಹಾಗೂ ಸಿರಿಯಾದಲ್ಲಿ 3,581 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1939ರಲ್ಲಿ ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ 32,700 ಜನರು ಸಾವನ್ನಪ್ಪಿದ್ದರು. ಅದನ್ನು ಹೊರತುಪಡಿಸಿದರೆ ಈಗಿನದ್ದೇ ಅತಿದೊಡ್ಡ ದುರಂತವಾಗಿದೆ. ಸಾವಿನ ಸಂಖ್ಯೆ ಏರುತ್ತಿರುವುದನ್ನು ನೋಡಿದರೆ, 1939ರ ಅಂಕಿ-ಅಂಶಗಳನ್ನು ಟರ್ಕಿ ಭೂಕಂಪ ಮೀರಿಸಬಹುದು ಎಂದು ವಿಶ್ಲೇಷಿಸಲಾಗಿದೆ.

ಟರ್ಕಿ ಜನರಿಗೆ ಭಾರತದ ಸೇನಾ ಆಸ್ಪತ್ರೆಯೇ ಸಂಜೀವಿನಿ: ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 50000?

ಈ ನಡುವೆ ಶುಕ್ರವಾರದ ಬಳಿಕ ಆಂತರಿಕ ಯುದ್ಧಪೀಡಿತ ಸಿರಿಯಾದಲ್ಲಿ ಸಾವಿನ ಸಂಖ್ಯೆ ಪರಿಷ್ಕರಣೆ ಮಾಡಿಲ್ಲ. ಸರ್ಕಾರದ ಹಿಡಿತದಲ್ಲಿರುವ ಸುಮಾರ 1400 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹೀಗಾಗಿ 4,500ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ ಎನ್ನಲಾಗಿದೆ. ವಿಶ್ವಸಂಸ್ಥೆ ಭಾನುವಾರ ಸಾವಿನ ಸಂಖ್ಯೆ 50 ಸಾವಿರಕ್ಕೂ ಹೆಚ್ಚಾಗಬಹುದು ಎಂದು ಅಂದಾಜಿಸಿತ್ತು.

4.7 ತೀವ್ರತೆಯ ಮತ್ತೊಂದು ಭೂಕಂಪ:

ಸದ್ಯದ ಭೂಕಂಪದಿಂದ ಚೇತರಿಸಿಕೊಳ್ಳುವ ಮೊದಲೇ ಟರ್ಕಿಯ ದಕ್ಷಿಣದಲ್ಲಿರುವ ಕಹ್ರಮನ್ಮರಸ್‌ (Kahramanmaras) ನಗರದಲ್ಲಿ ಭಾನುವಾರ 3 ಸೆಕೆಂಡ್‌ಗಳ ಕಾಲ 4.7 ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ ಹೆಚ್ಚಿನ ಹಾನಿ ವರದಿಯಾಗಿಲ್ಲ.

 170 ತಾಸು ಅವಶೇಷದಲ್ಲಿ ಜೀವಿಸಿದ ತಾಯಿ, ಮಗಳು!

ಅಂಟಾಕ್ಯಾ: ಟರ್ಕಿಯಲ್ಲಿ ಭೂಕಂಪ ಸಂಭವಿಸಿದ ಒಂದು ವಾರದ ನಂತರ ಬರೋಬ್ಬರಿ 170 ಗಂಟೆಗಳ ಕಾಲ ಕುಸಿದ ಕಟ್ಟಡದಡಿ ಸಿಲುಕಿದ್ದ ಸಿಬೆಲ್‌ ಯಾಯಾ (40) ಎಂಬ ಮಹಿಳೆಯನ್ನು ರಕ್ಷಣಾ ಸಿಬ್ಬಂದಿಗಳು ಜೀವಂತವಾಗಿ ರಕ್ಷಿಸಿರುವ ಘಟನೆ ಸೋಮವಾರ ಟರ್ಕಿಯ ಗಾಜಿಯಾಂಟೆಪ್‌ನಲ್ಲಿ ನಡೆದಿದೆ. ಇದೇ ರೀತಿಯಾಗಿ ಟರ್ಕಿಯ ಕಹ್ರಮನ್ಮರಸ್‌ನಲ್ಲಿ ತಾಯಿ, ಮಗಳು ಹಾಗೂ ಒಂದು ಮಗುವನ್ನು ಸುರಕ್ಷಿತವಾಗಿ ಸೋಮವಾರ ಅವಶೇಷಗಳಿಂದ ಹೊರತೆಗೆಯಲಾಗಿದೆ.

ಟರ್ಕಿಯಲ್ಲಿ 300 ಕಿ.ಮಿ.ಉದ್ದದ ಬಿರುಕು: ಸಿರಿಯಾದಲ್ಲಿ 53 ಲಕ್ಷ ಜನ ನಿರಾಶ್ರಿತ

163 ಗಂಟೆ ಸಿಲುಕಿದ್ದ 7ರ ಬಾಲಕ 62ರ ವೃದ್ಧೆಯ ರಕ್ಷಣೆ

ಅಂಕಾರ: ಟರ್ಕಿಯಲ್ಲಿ ಭೀಕರ ಭೂಕಂಪ ಸಂಭವಿಸಿದ ಬಳಿಕ 163 ಗಂಟೆಗಳ ಕಾಲ ಅವಶೇಷದಡಿಯಲ್ಲಿ ಸಿಕ್ಕಿಬಿದ್ದಿದ್ದ 7 ವರ್ಷದ ಬಾಲಕ ಹಾಗೂ 62 ವರ್ಷದ ವೃದ್ಧೆಯನ್ನು ಪವಾಡ ಸದೃಶ ರೀತಿಯಲ್ಲಿ ರಕ್ಷಿಸಲಾಗಿದೆ. ರಕ್ಷಣಾ ಸಿಬ್ಬಂದಿಗಳು ಕುಸಿದ ಕಟ್ಟಡಗಳ ಅವಶೇಷಗಳಲ್ಲಿ ಸುರಂಗ ಕೊರೆದು ಇವರನ್ನು ರಕ್ಷಿಸಿದ್ದಾರೆ. ಮುಸ್ತಫಾ (7) (Mustafa) ಎಂಬ ಬಾಲಕನನ್ನು ಟರ್ಕಿಯ ಹಟಾಯ್‌ನಲ್ಲಿ ರಕ್ಷಿಸಲಾಗಿದ್ದು, ನಾಫಿಜೆ ಯಿಲ್ಮಾಜ್‌ (62) (Nafije Yilmaz)ಎಂಬ ವೃದ್ಧೆಯನ್ನು ಹಟಾಯ್‌ನ ನುರ್ದಗಿಯಲ್ಲಿ ಭಾನುವಾರ ಮಧ್ಯರಾತ್ರಿ ರಕ್ಷಿಸಲಾಗಿದೆ. ರಕ್ಷಣೆಗೆ ತೆವಳಿಕೊಂಡು ಹೋಗುತ್ತಿರುವ ವೀಡೀಯೋವನ್ನು ಬ್ರಿಟಿಷ್‌ ಶೋಧ ತಂಡದ ಸಿಬ್ಬಂದಿಯೊಬ್ಬರು ಹಂಚಿಕೊಂಡಿದ್ದಾರೆ. ಸಂತ್ರಸ್ತರನ್ನು ಜೀವಂತವಾಗಿ ಹೊರತೆಗೆಯುವ ಉದ್ದೇಶದಿಂದ ರಕ್ಷಣಾ ತಂಡಗಳು 24 ಗಂಟೆಯೂ ಕಾರ್ಯಾಚರಣೆ ನಡೆಸಿವೆ.