“ಲಾಯರ್ ಪ್ರಿನ್ಸೆಸ್” ಎಂದೇ ಜನಪ್ರಿಯರಾಗಿದ್ದ ಥಾಯ್ಲೆಂಡ್ ರಾಜಕುಮಾರಿ ಬಜ್ರಕಿಟಿಯಾಭಾ ಅವರು ಹೃದಯ ಸೋಂಕಿನಿಂದಾಗಿ ನಿಧನರಾಗಿದ್ದಾರೆ. ಅವರ ಅಕಾಲಿಕ ಮರಣವು ಥಾಯ್ಲೆಂಡ್ ರಾಜಮನೆತನದ ಉತ್ತರಾಧಿಕಾರದ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಥಾಯ್ಲೆಂಡ್‌ನಲ್ಲಿ “ಲಾಯರ್ ಪ್ರಿನ್ಸೆಸ್” ಎಂದೇ ಜನಪ್ರಿಯರಾಗಿದ್ದ ರಾಜಕುಮಾರಿ ಬಜ್ರಕಿಟಿಯಾಭಾ ನರೇಂದಿರಾ ದೇಬ್ಯಾವತಿ ಸಾವನ್ನಪ್ಪಿದ್ದಾರೆ. 47 ವರ್ಷಗಳ ರಾಜಕುಮಾರಿ, 2022ರ ಡಿಸೆಂಬರ್‌ನಲ್ಲಿ ಸಾಕು ನಾಯಿಗಳೊಂದಿಗೆ ವ್ಯಾಯಾಮ ಮಾಡುತ್ತಿದ್ದ ವೇಳೆ ಹಠಾತ್ತನೆ ಕುಸಿದು ಬಿದ್ದಿದ್ದರು. ಹೃದಯದಲ್ಲಿ ಉಂಟಾದ ಮೈಕೋಪ್ಲಾಸ್ಮಾ ಸೋಂಕಿನಿಂದ ತೀವ್ರ ಹೃದಯ ಬಡಿತದ ಅಸಮತೋಲನ ಉಂಟಾಗಿ ಅವರು ಪ್ರಜ್ಞಾಹೀನರಾಗಿದ್ದರು. ಬಳಿಕ ವೈದ್ಯರು ತೀವ್ರ ಚಿಕಿತ್ಸೆ ನೀಡಿದರೂ ಅವರಿಗೆ ಮತ್ತೆ ಪ್ರಜ್ಞೆ ಬಂದಿರಲಿಲ್ಲ. ಕೋವಾಕ್ಕೆ ಜಾರಿದ್ದ ಅವರು ಈಗ ಸಾವನ್ನಪ್ಪಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೈದ್ಯಕೀಯ ತಂಡ ಸಾಧ್ಯವಾದಷ್ಟು ಉತ್ತಮ ಮತ್ತು ತೀವ್ರ ಚಿಕಿತ್ಸೆಯನ್ನು ನೀಡಿತು. ಆದರೂ ಅವರ ಆರೋಗ್ಯ ಸ್ಥಿತಿ ಕ್ರಮೇಣ ಹದಗೆಡುತ್ತಲೇ ಹೋಯಿತು ಎಂದು ರಾಜಮನೆತನ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರಾಜಮನೆತನದ ಮುಂದಿನ ಉತ್ತರಾಧಿಕಾರ ಯಾರು ಎಂಬ ಚರ್ಚೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಘೋಷಣೆಯಾಗದ ಅಧಿಕೃತ ಉತ್ತರಾಧಿಕಾರಿ

2021ರಲ್ಲಿ ರಾಜ ವಜಿರಾಲೋಂಗ್ಕೋನ್ ಅವರು ತಮ್ಮ ಖಾಸಗಿ ಭದ್ರತಾ ಪಡೆಯ ಮುಖ್ಯಸ್ಥೆಯಾಗಿ ಬಜ್ರಕಿಟಿಯಾಭಾ ಅವರನ್ನು ನೇಮಿಸಿದ್ದರು. 2025ರಲ್ಲಿಯೂ ಆಸ್ಪತ್ರೆಯಲ್ಲಿದ್ದಾಗಲೇ ಅವರನ್ನು ರಾಜನ ವೈಯಕ್ತಿಕ ಭದ್ರತಾ ಕಮಾಂಡ್‌ನ ಉಪ ಕಮಾಂಡರ್ ಆಗಿ ನೇಮಿಸಲಾಗಿತ್ತು. ಅವರ ಆಡಳಿತಾತ್ಮಕ ಸಾಮರ್ಥ್ಯ ಮತ್ತು ರಾಜನ ವಿಶ್ವಾಸದಿಂದಾಗಿ ಭವಿಷ್ಯದ ಉತ್ತರಾಧಿಕಾರಿಯಾಗಿ ಅವರ ಹೆಸರನ್ನು ಹಲವು ಬಾರಿ ಚರ್ಚಿಸಲಾಗಿತ್ತು. ಆದರೆ, ಥಾಯ್ಲೆಂಡ್ ರಾಜ ಇನ್ನೂ ಅಧಿಕೃತ ಉತ್ತರಾಧಿಕಾರಿಯನ್ನು ಘೋಷಿಸಿಲ್ಲ.

ರಾಜಕುಮಾರಿ ಬಜ್ರಕಿಟಿಯಾಭಾ ನರೇಂದಿರಾ ದೇಬ್ಯಾವತಿ ಅವರು, ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದರು. ಅವರು ಥಾಯ್ಲೆಂಡ್‌ನಲ್ಲಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು.

ರಾಜಕುಮಾರಿ ಸಾಧನೆ

ನ್ಯೂಯಾರ್ಕ್‌ನಲ್ಲಿರುವ ಥಾಯ್ಲೆಂಡ್‌ನ ವಿಶ್ವಸಂಸ್ಥೆ ಪ್ರತಿನಿಧಿ ಕಚೇರಿಯಲ್ಲಿ ಕೆಲಸ ಮಾಡಿದ ಬಳಿಕ, ದೇಶಕ್ಕೆ ಮರಳಿ ಅಟಾರ್ನಿ ಜನರಲ್ ಕಚೇರಿಯಲ್ಲಿ ಕಾರ್ಯನಿರ್ವಹಿಸಿದರು. 2012ರಿಂದ 2014ರವರೆಗೆ ಆಸ್ಟ್ರಿಯಾದಲ್ಲಿನ ಥಾಯ್ಲೆಂಡ್ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಮಹಿಳಾ ಕೈದಿಗಳ ಕಲ್ಯಾಣ, ಕಾರಾಗೃಹ ಸುಧಾರಣೆ ಹಾಗೂ ಸಮಾಜದಲ್ಲಿ ಪುನರ್ವಸತಿ ಕುರಿತಾಗಿ ಅವರು ವಿಶೇಷ ಆಸಕ್ತಿ ತೋರಿದ್ದರು. ಮಹಿಳಾ ಕೈದಿಗಳ ಬದುಕು ಸುಧಾರಿಸಲು ‘ಕಮ್ಲಾಂಗ್‌ಜೈ’ ಯೋಜನೆಯನ್ನು ಆರಂಭಿಸಿದ್ದರು. ಅವರ ಪ್ರಯತ್ನದ ಫಲವಾಗಿ ಮಹಿಳಾ ಕೈದಿಗಳ ಹಕ್ಕುಗಳ ಕುರಿತ ‘ಬ್ಯಾಂಕಾಕ್ ರೂಲ್ಸ್’ ಅನ್ನು ವಿಶ್ವಸಂಸ್ಥೆ ಅಂಗೀಕರಿಸಿತ್ತು.

ಮಹಿಳೆಯೂ ಸಿಂಹಾಸನ ಏರಲು ಅವಕಾಶ

ಥಾಯ್ಲೆಂಡ್‌ನ ಸಾಂಪ್ರದಾಯಿಕ ಪದ್ಧತಿಯ ಪ್ರಕಾರ ಪುರುಷ ಉತ್ತರಾಧಿಕಾರಿಗೆ ಆದ್ಯತೆ ನೀಡಲಾಗುತ್ತದೆ. ಆದರೂ 1974ರ ಸಂವಿಧಾನ ತಿದ್ದುಪಡಿಯು ಮಹಿಳೆಯೂ ಸಿಂಹಾಸನ ಏರಲು ಅವಕಾಶ ಕಲ್ಪಿಸಿದೆ. ರಾಜಕುಮಾರಿ ಬಜ್ರಕಿಟಿಯಾಭಾ ಅವರ ಪಾರ್ಥಿವ ಶರೀರವನ್ನು ಬ್ಯಾಂಕಾಕ್‌ನ ಗ್ರ್ಯಾಂಡ್ ಪ್ಯಾಲೇಸ್ ಆವರಣದಲ್ಲಿರುವ ಪಿಮಾನ್ ರತ್ತಾಯ ಸಿಂಹಾಸನ ಭವನದಲ್ಲಿ ಇರಿಸಲಾಗುತ್ತಿದ್ದು, ರಾಜಮನೆತನದ ಅತ್ಯುನ್ನತ ಗೌರವಗಳೊಂದಿಗೆ ಅಂತ್ಯಕ್ರಿಯೆ ವಿಧಿವಿಧಾನಗಳು ನಡೆಯಲಿದೆಯ ಜೂನ್ 13ರಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.