ಶಿಯಾ ಸಮುದಾಯದ ಹಾಗೂ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆಗೆ ಕರ್ನಾಟಕ, ಕಾಶ್ಮೀರ, ಕೇರಳ ಸೇರಿ ಭಾರತದಾದ್ಯಂತ ಭಾನುವಾರ ಭಾರೀ ಆಕ್ರೋಶ ವ್ಯಕ್ತವಾಗಿದೆ.ಲಕ್ಷಾಂತರ ಸಂಖ್ಯೆಯಲ್ಲಿ ಶಿಯಾ ಮುಸ್ಲಿಮರು ಬೀದಿಗಿಳಿದು ಹೋರಾಟ ನಡೆಸಿ ಅಮೆರಿಕ ಮತ್ತು ಇಸ್ರೇಲ್‌ ವಿರುದ್ಧ ಘೋಷಣೆ ಕೂಗಿದ್ದಾರೆ.

ನವದೆಹಲಿ: ಶಿಯಾ ಸಮುದಾಯದ ಹಾಗೂ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆಗೆ ಕರ್ನಾಟಕ, ಕಾಶ್ಮೀರ, ಕೇರಳ ಸೇರಿ ಭಾರತದಾದ್ಯಂತ ಭಾನುವಾರ ಭಾರೀ ಆಕ್ರೋಶ ವ್ಯಕ್ತವಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಶಿಯಾ ಮುಸ್ಲಿಮರು ಬೀದಿಗಿಳಿದು ಹೋರಾಟ ನಡೆಸಿ ಅಮೆರಿಕ ಮತ್ತು ಇಸ್ರೇಲ್‌ ವಿರುದ್ಧ ಘೋಷಣೆ ಕೂಗಿದ್ದಾರೆ. ಅಲ್ಲದೆ ದೇಶವ್ಯಾಪಿ ಇರುವ ಹಲವು ಮುಸ್ಲಿಂ ಸಂಘಟನೆಗಳು 1- 3 ದಿನಗಳವರೆಗೆ ಶೋಕಾಚರಣೆಗೆ ಕರೆ ನೀಡಿವೆ.

Add Asianetnews Kannada as a Preferred SourcegooglePreferred

ಜೊತೆಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಹಲವು ರಾಜಕೀಯ ನಾಯಕರು, ಇರಾನ್ ಮೇಲಿನ ಅಮೆರಿಕ ದಾಳಿ, ಖಮೇನಿ ಹತ್ಯೆಯನ್ನು ಕಟುನುಡಿಗಳಲ್ಲಿ ಖಂಡಿಸಿದ್ದಾರೆ.

ಕಾಶ್ಮೀರದಲ್ಲಿ ಭುಗಿಲೆದ್ದ ಆಕ್ರೋಶ:

15 ಲಕ್ಷಕ್ಕೂ ಹೆಚ್ಚು ಶಿಯಾ ಮುಸ್ಲಿಮರು ಇರುವ ಕಾಶ್ಮೀರದಲ್ಲಿ ಭಾನುವಾರ ಭಾರೀ ಆಕ್ರೋಶ ವ್ಯಕ್ತವಾಗಿದೆ. ರಾಜಧಾನಿ ಶ್ರೀನಗರ, ಬುದ್ಗಾಂ, ಬಂಡಿಪೊರ, ಅನಂತ್‌ನಾಗ್‌, ಪುಲ್ವಾಮಾ ಸೇರಿದಂತೆ ಬಹುತೇಕ ಕಡೆ ಜನಸಮೂಹ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದೆ. ಪ್ರತಿಭಟನೆ ವೇಳೆ ಎದೆ ಬಡಿದುಕೊಂಡು ಅಮೆರಿಕ ಮತ್ತು ಇಸ್ರೇಲ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ:

ಕರ್ನಾಟಕದ ಚಿಕ್ಕಾಬಳ್ಳಾಪುರ ಜಿಲ್ಲೆಯ ಅಲೀಪುರಕ್ಕೆ ಖಮೇನಿ ಒಮ್ಮೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಮತ್ತು ಸ್ಥಳೀಯ ಶಿಯಾ ಮುಸ್ಲಿಮರು ಇರಾನ್ ಜೊತೆ ಹೆಚ್ಚಿನ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಖಮೇನಿ ಹತ್ಯೆಗೆ ಕಂಬನಿ ಮಿಡಿದರು. ಜೊತೆಗೆ ಸ್ಥಳೀಯರು ಅಂಗಡಿ ಮುಂಗಟ್ಟುಗಳನ್ನು ಮೌನಾಚರಣೆ ನಡೆಸಿದರು. ಬೆಂಗಳೂರು ಸೇರಿ ವಿವಿಧ ಕಡೆ ಪ್ರತಿಭಟನೆಗಳು ನಡೆದವು.

ಯುಪಿ:

ಉತ್ತರಪ್ರದೇಶದ ಲಖನೌನಲ್ಲಿ ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳು ಕಿಡಿಕಾರಿದ್ದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮತ್ತು ಪ್ರಾರ್ಥನಾ ಸಭೆಗಳನ್ನು ಆಯೋಜಿಸಿದ್ದವು.

ಮತ್ತೊಂದೆಡೆ ಪಂಜಾಬ್‌ನ ಲುಧಿಯಾನದಲ್ಲಿ ಶಾಹಿ ಇಮಾಮ್ ಮೌಲಾನಾ ಮೊಹಮ್ಮದ್ ಉಸ್ಮಾನ್ ರಹಮಾನಿ ಲುಧಿಯಾನ್ವಿ ನೇತೃತ್ವದಲ್ಲಿ ಫೀಲ್ಡ್‌ ಗಂಜ್‌ ಮಸೀದಿಯ ಹೊರಗೆ ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಮುಸ್ಲಿಮರ ಭಾಗವಹಿಸುವಿಕೆಯಲ್ಲಿ ಪ್ರತಿಭಟನೆ ನಡೆದಿದೆ.

ಉಳಿದಂತೆ ಕೇರಳ, ತಮಿಳುನಾಡು, ತೆಲಂಗಾಂಣ, ಆಂಧ್ರಪ್ರದೇಶ, ರಾಜಧಾನಿ ದೆಹಲಿ, ಪಶ್ಚಿಮ ಬಂಗಾಳದ ಹಲವು ಕಡೆ ಶಿಯಾ ಮುಸ್ಲಿಮರು ಬೀದಿಗಿಳಿದು ಹೋರಾಟ ನಡೆಸಿದರು.