ಸುಳ್ಳಿನ ಕಂತೆ ಇಟ್ಟು ಮಾನ ಕಳೆದುಕೊಂಡ ಪಾಕ್, ಲಾಡೆನ್ ನೆನಪು ಮಾಡಿದ ಭಾರತ!
ಮತ್ತೆ ಪಾಕಿಸ್ತಾನದ ಮೊಂಡಾಟ/ ಭಾರತವೇ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆಯಂತೆ/ ವಿಶ್ವಸಂಸ್ಥೆ ಬಳಿ ಸುಳ್ಳಿನ ಕಂತೆ/ ಸರಿಯಾದ ತಿರುಗೇಟು ನೀಡಿದ ಭಾರತ
ವಿಶ್ವಸಂಸ್ಥೆ, (ನ 25) ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯಾ ಗುಟೆರಸ್ ಅವರಿಗೆ 'ಸುಳ್ಳುಗಳ ಕಂತೆ'ಯನ್ನೇ ನೀಡಿರುವ ಪಾಕಿಸ್ತಾನಕ್ಕೆ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲ್ಯಾಡನ್ ಹಲವು ವರ್ಷಗಳ ಕಾಲ ಅಡಗಿಕುಳಿತು ಹತ್ಯೆಗೀಡಾದ ಅಬೋಟಾಬಾದ್ ನಿಮಗೆ ನೆನಪಿದೇಯಾ ಎಂದು ಭಾರತ ಪ್ರಶ್ನೆ ಮಾಡಿದೆ.
ಪಾಕಿಸ್ತಾನದ ರಾಯಭಾರಿಯು ನೀಡಿರುವ ಮಾಹಿತಿಗಳೆಲ್ಲ ಸುಳ್ಳಿನ ಕಂತೆಯಾಗಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ರಾಯಭಾರಿ ಟಿ.ಎಸ್. ತ್ರಿಮೂರ್ತಿ ಹೇಳಿದ್ದಾರೆ.
ಮುಂಬೈ ದಾಳಿಕೋರನ ಪರಿಸ್ಥಿತಿ ಏನಾಯಿತು?
ನಕಲಿ ದಾಖಲೆ ಸೃಷ್ಟಿಮಾಡಿ ಮತ್ತು ಸುಳ್ಳು ಆರೋಪ ಮಾಡುವುದು ಪಾಕಿಸ್ತಾನಕ್ಕೆ ಹೊಸತಲ್ಲ. ವಿಶ್ವಸಂಸ್ಥೆಯೇ ಗುರುತಿಸಿರುವಂತೆ ಅತಿಹೆಚ್ಚು ಭಯೋತ್ಪಾದಕರು ಮತ್ತು ಸಂಘಟನೆಗಳು ಪಾಕಿಸ್ತಾನದಲ್ಲಿಯೇ ಇವೆ. ಅಬೋಟಾಬಾದ್ ನಗರವನ್ನು ಒಮ್ಮೆ ನೆನಪಿಸಿಕೊಳ್ಳಿ' ಎಂದು ಅವರು ಟ್ವೀಟ್ ಮೂಲಕ ತ್ರಿಮೂರ್ತಿ ತಿರುಗೇಟು ನೀಡಿದ್ದಾರೆ.
ಇಸ್ಲಾಮಾಬಾದಿನ ವಿಶ್ವಸಂಸ್ಥೆಯ ರಾಯಭಾರಿ ಮುನೀರ್ ಅಕ್ರಮ್ ಅವರು ಗುಟೆರಸ್ ಜತೆಗಿನ ಭೇಟಿ ವೇಳೆ ಭಾರತದ ಮೇಲೆಯೂ ಆರೋಪ ಮಾಡುವಂತಹ ಮಾಹಿತಿ ಹಸ್ತಾಂತರಿಸಿದ್ದರು. ಇದಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ.
ಭಯೋತ್ಪಾದನೆಗೆ ಭಾರತವೇ ಕುಮ್ಮಕ್ಕು ನೀಡುತ್ತಿದೆ ಎಂಬ ಆರೋಪ ಮಾಡಿದ್ದ ಪಾಕಿಸ್ತಾನ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ ಕಳೆದುಕೊಂಡಿದೆ.