ರಾಜಕೀಯ ಬದಿಗಿಟ್ಟು, ಭಾರತಕ್ಕೆ ನೆರವು ನೀಡಿ: ಪಾಕ್ ಜನತೆಯ ಮನವಿ!
ಭಾರತದಲ್ಲಿ ಕೊರೋನಾ ಹಾವಳಿ| ಆಕ್ಸಿಜನ್ ಇಲ್ಲದೇ ಜನರ ಪರದಾಟ| ಭಾರತದ ಪರಿಸ್ಥಿತಿಗೆ ಕಂಡು ಸಹಾಯ ಮಾಡಿ ಎಂದು ಪಾಕಿಸ್ತಾನ ಜನತೆಯ ಮೊರೆ| ಮಾನವೀಯತೆ ಎಲ್ಲಕ್ಕಿಂತ ಮೇಲು ಎಂದ ನೆಟ್ಟಿಗರು
ಇಸ್ಲಾಮಾಬಾದ್(ಏ.24): ಭಾರತದಲ್ಲಿ ಕೊರೋನಾ ಎರಡನೇ ಅಲೆ ಭಾರೀ ಅವಾಂತರ ಸೃಷ್ಟಿಸಿದೆ. ಪ್ರತಿ ದಿನ ಮೂರು ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದ್ದು, ಸಾವಿರಕ್ಕೂ ಅಧಿಕ ಮಂದಿ ಮೃತಪಡುತ್ತಿದ್ದಾರೆ. ಈ ನಡುವೆ ದೇಶದಲ್ಲಿ ಆಕ್ಸಜನ್ ಸೇರಿ, ವೈದ್ಯಕೀಯ ಸೌಲಭ್ಯಗಳ ಕೊರತೆ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ನೆರವು ನೀಡುವಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ಗೆ ಅಲ್ಲಿನ ಜನತೆ ಮನವಿ ಮಾಡಿದ್ದಾರೆ.
ಶುಕ್ರವಾರ ಈ ಅಭಿಯಾನ #IndiaNeedsOxygenನಡಿ ಪಾಕಿಸ್ತಾನ ಟ್ವಿಟರ್ನಲ್ಲಿ ಟ್ರೆಂಡ್ ಆಗಿತ್ತು. ಈ ಹ್ಯಾಷ್ ಟ್ಯಾಗ್ನಡಿ ಟ್ವೀಟ್ ಮಾಡಿದ್ದ ಪಾಕಿಸ್ತಾನಿಗರು ರಾಜಕೀಯ ಭಿನ್ನಮತ ಬದಿಗಿಟ್ಟು ಭಾರತಕ್ಕೆ ಮನೆರವು ನೀಡಿ ಹಾಗೂ ಇಂತಹ ಪರಿಸ್ಥಿತಿತಿಯಿಂದ ಮೇಲೆತ್ತಲು ಸಹಾಯ ಮಾಡಿ ಎಂದು ಪ್ರಧಾನಿ ಇಮ್ರಾನ್ ಖಾನ್ಗೆ ಮನವಿ ಮಾಡಿದ್ದಾರೆ.
ದೇಶದಲ್ಲಿ ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ 3.54 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಸತತ ಎರಡನೇ ದಿನ ವಿಶ್ವ ಮಟ್ಟದಲ್ಲೇ ದಾಖಲೆ ನಿರ್ಮಿಸಿದೆ. ಅಲ್ಲದೇ 2200 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇಂತಹ ಸ್ಥಿತಿಯಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಎದುರಾಗಿದ್ದು, ಆಕ್ಸಿಜನ್, ಔಷಧ ಇಲ್ಲದೇ ಅನೇಕ ಮಂದಿ ಆಸ್ಪತ್ರೆ ಹೊರಗೇ ನರಳಾಡುತ್ತಿದ್ದರೆ, ಮತ್ತೊಂದೆಡೆ ಸ್ಮಶಾನದೆದುರು ಮೃತದೇಹದೊಂದಿಗೆ ಕ್ಯೂ ನಿಂತಿರುವ ದೃಶ್ಯಗಳು.
ಈ ಎಲ್ಲಾ ಮನಕಲುಕಿಸುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿವೆ. ಹೀಗಿರುವಾಗ ಪಾಕಿಸ್ತಾನದಲ್ಲೂ ಈ ವಿಚಾರ ಚರ್ಚೆ ಹುಟ್ಟಿಸಿದ್ದು, ಅನೇಕ ಮಂದಿ ಟ್ವಿಟರ್ ಅಭಿಯಾನದ ಮೂಲಕ ಪ್ರಧಾನಿ ಬಳಿ ಭಾರತಕ್ಕೆ ಸಹಾಯ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವ್ಯಕ್ತಿಯೊಬ್ಬ ಮಾನವೀಯತೆ ಎಲ್ಲಕ್ಕಿಂತಲೂ ಮೇಲು. ಯಾರೂ ಇಲ್ಲಿ ನರಳಬಾರದು ಎಂದು ಬರೆದಿದ್ದಾರೆ.
ನಮ್ಮ ಮಧ್ಯೆ ಅದೆಷ್ಟೇ ಭಿನ್ನಾಭಿಪ್ರಾಯವಿದ್ದರೂ ಸರಿ, ಆದರೆ ಮಾನವೀಯತೆ ದೃಷ್ಟಿಯಿಂದ ನಾವೆಲ್ಲರೂ ಒಂದೇ. ಹೀಗಿರುವಾಗ ಭಾರತದಲ್ಲಿರುವ ಜನರ ಮೇಲೆ ಕರುಣೆ ತೋರುವಂತೆ ಅಲ್ಲಾಹುವಿನ ಬಳಿ ನಾವು ಪ್ರಾರ್ಥಿಸುತ್ತೇವೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.