ಶ್ರೀರಾಮ ನೇಪಾಳಕ್ಕೆ ಸೇರಿವನಾಗಿದ್ದು, ನಕಲಿ ಅಯೋಧ್ಯೆಯನ್ನು ಸೃಷ್ಟಿಸಿದ ಭಾರತವು ಸಾಂಸ್ಕೃತಿಕ ಮತ್ತು ಐತಿಹಾಸಿಕ ವಸ್ತುಸ್ಥಿತಿಯನ್ನು ತಿರುಚಿದೆ ಎಂದು ನೇಪಾಳ ಪ್ರಧಾನಿ ಓಲಿ ಶರ್ಮಾ ಹೇಳಿದ್ದರು. ಇದರ ಬೆನ್ನಲ್ಲೇ ಪುರಾತತ್ವ ಇಲಾಖೆ ಥೋರಿಯಲ್ಲಿ ಅಧ್ಯಯನ ಮತ್ತು ಉತ್ಖನನ ನಡೆಸಲು ಉದ್ದೇಶಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಕಾಠ್ಮಂಡು(ಜು.17): ಶ್ರೀರಾಮ ಭಾರತದ ಅಯೋಧ್ಯೆಯಲ್ಲಿ ಜನಿಸಿಲ್ಲ. ಬದಲಾಗಿ ನೇಪಾಳದ ಥೋರಿ ಎಂಬ ಪ್ರದೇಶದಲ್ಲಿ ಜನನವಾಗಿತ್ತು ಎಂಬ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಹೇಳಿಕೆ ಬೆನ್ನಲ್ಲೇ, ನೇಪಾಳದ ಪುರಾತತ್ವ ಇಲಾಖೆಯು, ಓಲಿ ಹೇಳಿಕೆ ನಿಜವೇ ಎಂಬುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಿಂದ ಇಲಾಖೆ ಥೋರಿಯಲ್ಲಿ ಅಧ್ಯಯನ ಮತ್ತು ಉತ್ಖನನ ನಡೆಸಲು ಉದ್ದೇಶಿಸಿದೆ.

Add Asianetnews Kannada as a Preferred SourcegooglePreferred

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಓಲಿ, ಶ್ರೀ ರಾಮನ ನಿಜವಾದ ಜನ್ಮಸ್ಥಳ ನೇಪಾಳದಲ್ಲಿದೆಯೇ ಹೊರತು ಭಾರತದಲ್ಲಿಲ್ಲ. ಶ್ರೀರಾಮ ಹುಟ್ಟಿದ ಅಯೋಧ್ಯೆ ವಾಸ್ತವವಾಗಿ ನೇಪಾಳದ ಬಿರಗುಂಜ್‌ ನಗರದ ಪಶ್ಚಿಮ ಭಾಗದಲ್ಲಿರುವ ಥೋರಿ ಬಳಿಯಿದೆ. ಆದರೆ, ನಕಲಿ ಅಯೋಧ್ಯೆಯನ್ನು ಸೃಷ್ಟಿಸಿದ ಭಾರತವು ಸಾಂಸ್ಕೃತಿಕ ಮತ್ತು ಐತಿಹಾಸಿಕ ವಸ್ತುಸ್ಥಿತಿಯನ್ನು ತಿರುಚಿದೆ.

'ಶ್ರೀರಾಮ ಭಾರತೀಯನಲ್ಲ, ಭಾರತದಿಂದ ನಕಲಿ ಅಯೋಧ್ಯೆ ಸೃಷ್ಟಿ'

ನೇಪಾಳದ ಜನಕಪುರದಲ್ಲಿ ಸೀತೆ ಜನಿಸಿದಂತೆ ಶ್ರೀರಾಮ ಕೂಡಾ ನೇಪಾಳದ ಅಯೋಧ್ಯೆಯಲ್ಲೇ ಜನಿಸಿದ್ದು. ಭಾರತ ತನ್ನ ದೇಶದಲ್ಲಿದೆ ಎನ್ನುತ್ತಿರುವ ಅಯೋಧ್ಯೆಯಿಂದ ನೇಪಾಳದ ಜನಕಪುರಿಯವರೆಗೆ ರಾಜನೊಬ್ಬ ಬಂದು ವಿವಾಹವಾಗುವುದು ಸಾಧ್ಯವೇ ಇಲ್ಲ. ಏಕೆಂದರೆ ರಾಮಾಯಣ ಕಾಲದಲ್ಲಿ ಈಗಿನಂತೆ ಸಂವಹನ ವ್ಯವಸ್ಥೆ ಇರಲಿಲ್ಲ ಎಂದು ಓಲಿ ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದರು.

ಆದರೆ ಅವರ ಹೇಳಿಕೆಗೆ ನೇಪಾಳದಲ್ಲೇ ಭಾರೀ ಟೀಕೆ ವ್ಯಕ್ತವಾಗಿತ್ತು. ನೇಪಾಳ ರಾಜಕೀಯ ನಾಯಕರು ಓಲಿ ಹೇಳಿಕೆ ಅವಾಸ್ತವಿಕ ಮತ್ತು ಸಂವೇದನಾ ರಹಿತವಾದದ್ದು ಎಂದು ಕಿಡಿಕಾರಿದ್ದರು. ಇದರ ಹೊರತಾಗಿಯೂ ನೇಪಾಳದ ಪುರಾತತ್ವ ಇಲಾಖೆಯು, ಓಲಿ ಹೇಳಿಕೆ ನಿಜವೇ ಎಂಬುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಿಂದ ಇಲಾಖೆ ಥೋರಿಯಲ್ಲಿ ಅಧ್ಯಯನ ಮತ್ತು ಉತ್ಖನನ ನಡೆಸಲು ಉದ್ದೇಶಿಸಿದೆ.