ಭಾರತ ಧ್ವಜಕ್ಕೆ ಅಗೌರವ ತೋರಿ ಪೋಸ್ಟ್, ವಿವಾದ ಬಳಿಕ ಕ್ಷಮೆ ಯಾಚಿಸಿದ ಮಾಲ್ಡೀವ್ಸ್ ಮಾಜಿ ಸಚಿವೆ!
ಮಾಲ್ಡೀವ್ಸ್ ಹಾಗೂ ಭಾರತದ ಸಂಬಂಧ ಇನ್ನೇನು ಸರಿದಾರಿಗೆ ಬರಲಿದೆ ಅನ್ನುವಷ್ಟರಲ್ಲೇ ಮತ್ತೆ ಹಳ್ಳ ಹಿಡಿಯುವ ಲಕ್ಷಣ ಗೋಚರಿಸುತ್ತಿದೆ. ಇದೀಗ ಅಧ್ಯಕ್ಷ ಮುಯಿಜು ಸಂಪುಟದ ಸಚಿವೆ ಭಾರತದ ರಾಷ್ಟ್ರದ್ವಜಕ್ಕೆ ಅವಮಾನ ಮಾಡಿರುವುದು ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಈಗಾಗಲೇ ಅಮಾನತುಗೊಂಡಿರುವ ಸಚಿವೆ ಹೊಸ ವಿವಾದ ಬೆನ್ನಲ್ಲೇ ಕ್ಷಮೆ ಕೇಳಿದ್ದಾರೆ.
ಮಾಲ್ಡೀವ್ಸ್(ಏ.08) ಒಂದೆಡೆಯಿಂದ ಭಾರತದ ಸಹಾಯಹಸ್ತ ಚಾಚಿ ಮತ್ತೊಂದೆಡೆಯಿಂದ ಭಾರತದ ವಿರುದ್ದ ಮುಗಿ ಬೀಳುತ್ತಿರುವ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು ತಮ್ಮ ಚಾಳಿ ಮುಂದುವರಿಸಿದ್ದಾರೆ. ಬಿಕ್ಕಟ್ಟು ಸೃಷ್ಟಿಸಿ ದವಸ ಧಾನ್ಯ ಕಳುಹಿಸಿಕೊಡುವಂತೆ ಮಾಲ್ಡೀವ್ಸ್ ಮಾಡಿದ ಮನವಿ ಸ್ಪಂದಿಸಿದ ಭಾರತ ಧಾನ್ಯಗಳನ್ನು ಕಳುಹಿಸಿಕೊಟ್ಟಿತ್ತು. ಇತ್ತ ಮಾಲ್ಡೀವ್ಸ್ ಸಚಿವೆ ಮರಿಯಮ್ ಶಿಯುನಾ ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿ ಪೋಸ್ಟ್ ಹಾಕಿ ವಿವಾದಕ್ಕೆ ಗುರಿಯಾಗಿದ್ದಾರೆ. ಭಾರತದಲ್ಲಿನ ವಿರೋಧಕ್ಕಿಂತ ಮಾಲ್ಡೀವ್ಸ್ ವಿಪಕ್ಷಗಳು ಮುಯಿಜು ಸರ್ಕಾರದ ವಿರುದ್ದ ಮುಗಿಬಿದ್ದಿತ್ತು. ವಿವಾದ ಜೋರಾಗುತ್ತಿದ್ದಂತೆ ಸಚಿವೆ ಪೋಸ್ಟ್ ಡಿಲೀಟ್ ಮಾಡಿದ್ದರು. ಇದಕ್ಕೂ ಮೊದಲು ಭಾರತ, ಪ್ರಧಾನಿ ಮೋದಿ ಅವಮಮಾನಿಸಿ ಮುಯಿಜು ಸಂಪುಟದಿಂದ ಅಮಾನತುಗೊಂಡಿದ್ದಾರೆ. ಇದೀಗ ಎರಡನೇ ಬಾರಿಗೆ ಭಾರತಕ್ಕೆ ಅಗೌರವ ತೋರಿ ಕ್ಷಮೆ ಕೇಳಿದ್ದಾರೆ.
ಮಾಲ್ಡೀವ್ಸ್ ಸಂಸತ್ ಚುನಾವಣೆ ಸಮೀಪಿಸುತ್ತಿದೆ. ಅಧ್ಯಕ್ಷ ಮೊಹಮ್ಮದ್ ಮುಯಿಜು ಸರ್ಕಾರದ ಸಚಿವೆ ಮರಿಯನ್ ಭಾರಿ ಪ್ರಚಾರದಲ್ಲಿ ತೊಡಗಿದ್ದಾರೆ. ಭಾರತ ವಿರೋಧಿ ಅಲೆಯನ್ನು ಸೃಷ್ಟಿಸಿ ಮತ ಪಡೆಯಲು ಮುಂದಾಗಿರುವ ಮುಯಿಜು ಸರ್ಕಾರದ ಸಚಿವರು ಭಾರತ ವಿರೋಧಿ ಭಾಷಣಗಳನ್ನು ಮಾಡುತ್ತಿದ್ದಾರೆ. ಭಾರತದ ಧ್ವಜದ ಅಶೋಕ ಚಕ್ರವನ್ನು ಬಳಸಿ ಎಂಡಿಪಿ ಪಕ್ಷ ಈ ದಾಳಕ್ಕೆ ಬಲಿಯಾಗುತ್ತಿದೆ. ಮಾಲ್ಡೀವ್ಸ್ ಜನರೆ ನೀವು ಈ ದಾಳಕ್ಕೆ ಬಲಿಯಾಗಬೇಡಿ. ನೀವು ಪಿಪಿಎಂಪಿಎನ್ಸಿ ಪಕ್ಷಕ್ಕೆ ಮತ ನೀಡಿ ಎಂದು ಪೋಸ್ಟ್ ಮಾಡಿದ್ದಾರೆ.
ಚೀನಾಗೆ ಬೆಂಬಲಿಸಿ ಭಾರತದ ಬಳಿ ನೆರವಿಗೆ ಕೈ ಚಾಚಿದ ಮಾಲ್ಡೀವ್ಸ್: ಅಗತ್ಯ ವಸ್ತುಗಳ ಪೂರೈಕೆಗೆ ಭಾರತ ಒಪ್ಪಿಗೆ
ಈ ಪೋಸ್ಟ್ ಮೂಲಕ ಭಾರತದ ತಾಳಕ್ಕೆ ತಕ್ಕಂತೆ ಕುಣಿಯಬೇಡಿ. ಭಾರತದ ದಾಳಕ್ಕೆ ಬಿದ್ದು ಬಲಿಯಾಗಬೇಡಿ ಎಂದು ಪರೋಕ್ಷವಾಗಿ ಸೂಚಿಸಿದ್ದಾರೆ. ಭಾರತದ ಧ್ವಜ ಅಶೋಕ ಚಕ್ರ ಬಳಸಿರುವ ವಿರುದ್ಧ ಭಾರತೀಯರು ಆಕ್ರೋಶ ಹೊರಹಾಕಿದ್ದರು. ಇತ್ತ ಮಾಲ್ಡೀವ್ಸ್ ವಿಪಕ್ಷಗಳು ಮುಯಿಜು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿತ್ತು. ಭಾರತ ಕೂಡ ಆಕ್ರೋಶ ಹೊರಹಾಕಿತ್ತು.
ನಾನು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಾಕಿರುವ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟ್ನಿಂದ ಸೃಷ್ಟಿಯಾಗಿರುವ ಗೊಂದಲ, ವಿವಾದಕ್ಕೆ ನಾನು ಕ್ಷಮೆ ಕೋರುತಿದ್ದೇನೆ. ಮಾಲ್ಡೀವ್ಸ್ನ ವಿರೋಧ ಪಕ್ಷ ಎಂಡಿಪಿಯನ್ನು ಉದ್ದೇಶಿಸಿ ಹಾಕಿರುವ ಚಿತ್ರ ಭಾರತದ ಧ್ವಜ ಹೋಲುತ್ತಿದೆ ಅನ್ನೋದು ನಂತರ ನನ್ನ ಗಮನಕ್ಕೆ ಬಂದಿದೆ. ಇದು ಉದ್ದೇಶಪೂರ್ವಕವಲ್ಲ ಅನ್ನೋದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇನೆ. ಈ ಪೋಸ್ಟ್ನಿಂದ ಸೃಷ್ಟಿಯಾದ ವಿವಾದ, ತಪ್ಪು ಗ್ರಹಿಕೆಗೆ ನಾನು ವಿಷಾದಿಸುತ್ತೇನೆ. ಮಾಲ್ಡೀವ್ಸ್ ಭಾರತದ ಜೊತೆಗಿನ ಸಂಬಂಧವನ್ನು ಗೌರವಿಸುತ್ತದೆ. ಅತ್ಯುತ್ತಮ ದ್ವಿಪಕ್ಷೀಯ ಸಂಬಂಧ ಮುಂದವರಿಸಲು ಬಯಸುತ್ತದೆ. ಮುಂದಿನ ದಿನಗಳಲ್ಲಿ ಈ ರೀತಿಯ ತಪ್ಪುಗಳಿಂದ ಜಾಗರೂಕನಾಗಿರುತ್ತೇನೆ ಎಂದು ಮರಿಯಮ್ ಶಿಯುನಾ ಕ್ಷಮೆ ಕೋರಿದ್ದಾರೆ.
ಭಾರತದ ವಿರುದ್ದ ತೊಡೆತಟ್ಟಿ ಯೂಟರ್ನ್ ಹೊಡೆದ ಮಾಲ್ಡೀವ್ ಅಧ್ಯಕ್ಷ, ಸಾಲ ಮನ್ನಾಗೆ ಮನವಿ!