ಇರಾನ್‌ನಲ್ಲಿ ತಮ್ಮ ವಿರುದ್ಧ ನಡಯುತ್ತಿರುವ ದಂಗೆ ಬಗ್ಗೆ ಎಚ್ಚರಿಕೆ ನೀಡಿರುವ ದೇಶದ ಪರಮೋಚ್ಚ ನಾಯಕ ಅಯತೋಲ್ಲಾ ಅಲಿ ಖಮೇನಿ, ‘ಗಲಭೆಕೋರರನ್ನು ಸುಮ್ಮನಾಗಿಸಬೇಕು ಹಾಗೂ ಅವರನ್ನು ಅವರ ಸ್ಥಾನದಲ್ಲಿ ಇರಿಸಬೇಕು’ ಎಂದು ಗುಡುಗಿದ್ದಾರೆ.

ದುಬೈ: ಇರಾನ್‌ನಲ್ಲಿ ತಮ್ಮ ವಿರುದ್ಧ ನಡಯುತ್ತಿರುವ ದಂಗೆ ಬಗ್ಗೆ ಎಚ್ಚರಿಕೆ ನೀಡಿರುವ ದೇಶದ ಪರಮೋಚ್ಚ ನಾಯಕ ಅಯತೋಲ್ಲಾ ಅಲಿ ಖಮೇನಿ, ‘ಗಲಭೆಕೋರರನ್ನು ಸುಮ್ಮನಾಗಿಸಬೇಕು ಹಾಗೂ ಅವರನ್ನು ಅವರ ಸ್ಥಾನದಲ್ಲಿ ಇರಿಸಬೇಕು’ ಎಂದು ಗುಡುಗಿದ್ದಾರೆ.

ಶನಿವಾರ ಮಾತನಾಡಿದ ಅವರು, ಗಲಭೆಗಳ ಬಗ್ಗೆ ಇದೇ ಮೊದಲ ಬಾರಿ ಪ್ರತಿಕ್ರಿಯೆ ನೀಡಿದರು. ಈಗಾಗಲೇ ಇರಾನ್‌ ದಂಗೆಯಲ್ಲಿ 10 ಪ್ರತಿಭಟನಾಕಾರರು ಅಸುನೀಗಿದ್ದಾರೆ. ಪ್ರತಿಭಟನಾಕಾರರನ್ನು ಕೊಂದರೆ ಹುಷಾರ್‌ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಕೂಡ ಗುಡುಗಿದ್ದರು.

ನಾಳೆ ಖಾಲಿದ್‌ ಸೇರಿ ದಿಲ್ಲಿ ಗಲಭೆ ಆರೋಪಿಗಳ ಜಾಮೀನು ತೀರ್ಪು ಪ್ರಕಟ

ನವದೆಹಲಿ: 2020ರ ದೆಹಲಿ ಗಲಭೆ ಪಿತೂರಿ ಪ್ರಕರಣದಲ್ಲಿ ಕಳೆದ 5 ವರ್ಷಗಳಿಂದ ಜೈಲಿನಲ್ಲಿರುವ ಉಮರ್‌ ಖಾಲಿದ್, ಶಾರ್ಜೀಲ್‌ ಇಮಾಮ್‌ ಹಾಗೂ ಇತರರ ಜಾಮೀನು ಅರ್ಜಿಗಳ ತೀರ್ಪನ್ನು ಸುಪ್ರೀಂ ಕೋರ್ಟ್‌ ಜ.5ಕ್ಕೆ ನಿಗದಿಪಡಿಸಿದೆ.ನ್ಯಾ. ಅರವಿಂದ್ ಕುಮಾರ್ ಹಾಗೂ ನ್ಯಾ. ಎನ್.ವಿ. ಅಂಜಾರಿಯಾ ಅವರ ದ್ವಿಸದಸ್ಯ ಪೀಠ ತೀರ್ಪು ಪ್ರಕಟಿಸಲಿದೆ.53 ಜನರ ಸಾವಿಗೆ ಕಾರಣವಾದ ದೆಹಲಿ ಗಲಭೆಯ ಪಿತೂರಿ ಆರೋಪದಲ್ಲಿ ಖಾಲಿದ್ ಹಾಗೂ ಇತರರನ್ನು ಬಂಧಿಸಿ ದೇಶದ್ರೋಹ ಕೇಸು ಹಾಕಲಾಗಿದೆ. ಇತ್ತೀಚೆಗಷ್ಟೇ ಇವರ ಬಿಡುಗಡೆ ಕೋರಿ ಅಮೆರಿಕದ 8 ಸಂಸದರು ಪತ್ರ ಬರೆದಿದ್ದರು. ನ್ಯೂಯಾರ್ಕ್‌ನ ಮೇಯರ್‌ ಝೊಹ್ರಾನ್ ಮಮ್ದಾನಿ ಖಾಲಿದ್‌ಗೆ ಪತ್ರ ಬರೆದಿದ್ದರು.

ಸೌದಿಗೆ ಯೆಮೆನ್‌ ಬಂಡುಕೋರರ ಸಡ್ಡು: ಪ್ರತ್ಯೇಕ ಸಂವಿಧಾನ ಘೋಷಣೆ

ಅಡೆನ್ (ಯೆಮೆನ್): ಯುಎಇ ಬೆಂಬಲಿತ ಯೆಮೆನ್‌ ಪ್ರತ್ಯೇಕತಾವಾದಿಗಳ ವಿರುದ್ಧ ಸೌದಿ ಅರೇಬಿಯಾ 2 ಬಾರಿ ದಾಳಿ ಮಾಡಿದ್ದರೂ ಅದಕ್ಕೆ ಜಗ್ಗದ ಬಂಡುಕೋರರು, ದಕ್ಷಿಣ ಯೆಮೆನ್‌ ಸ್ವತಂತ್ರ ರಾಷ್ಟ್ರಕ್ಕಾಗಿ ಪ್ರತ್ಯೇಕ ಸಂವಿಧಾನ ಘೋಷಿಸಿದ್ದಾರೆ.ದಕ್ಷಿಣ ಯೆಮೆನ್‌ ಸ್ಥಾಪನೆ ಮಾಡುವ ಇವರ ನಡೆಯ ವಿರುದ್ಧ ಸೌದಿ ಅರೇಬಿಯಾ ವಾಯುದಾಳಿ ಮಾಡಿತ್ತು. ಇದನ್ನು ನಿರ್ಲಕ್ಷಿಸಿರುವ ಬಂಡುಕೋರರು ಪ್ರತ್ಯೇಕ ಸಂಬೀಧಾನ ಘೋಷಿಸಿ ಯುದ್ಧಪೀಡಿತ ದೇಶದ ಇತರ ಬಣಗಳು ಈ ಕ್ರಮವನ್ನು ಒಪ್ಪಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇದರಿಂದ ಸಂಘರ್ಷ ಉಲ್ಬಣಿಸುವ ಸಾಧ್ಯತೆ ಇದೆ.

ಈ ನಡುವೆ ಸೌದಿ ದಾಳಿಯಿಂದ ವಿಚಲಿತ ಆಗಿರುವ ಯುಎಇ, ಯೆಮೆನ್‌ನಲ್ಲಿನ ತನ್ನೆಲ್ಲ ಪಡೆಗಳ ವಾಪಸಾತಿ ಘೋಷಿಸಿದೆ.

ಸಂದೇಶ್‌ಖಾಲಿಯಲ್ಲಿ ಮತ್ತೆ ಗಲಭೆ: 6 ಪೊಲೀಸರಿಗೆ ಗಾಯ, 9 ಮಂದಿ ವಶಕ್ಕೆ

ಕೋಲ್ಕತಾ: ಕಳೆದ ವರ್ಷ ಗಲಭೆಯಿಂದ ಕುಖ್ಯಾತಿ ಪಡೆದಿದ್ದ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಮತ್ತೆ ಉದ್ವಿಗ್ನವಾಗಿದೆ. ಪೊಲೀಸರು ಟಿಎಂಸಿ ಕಾರ್ಯಕರ್ತನ ಬಂಧನಕ್ಕೆ ಮುಂದಾದಾಗ ಹಿಂಸಾಚಾರ ನಡೆದಿದೆ. ಈ ವೇಳೆ ಗುಂಪೊಂದು ನಡೆಸಿದ ದಾಳಿಯಲ್ಲಿ ಆರು ಪೊಲೀಸರು ಗಾಯಗೊಂಡಿದ್ದು, ಪೊಲೀಸ್‌ ವಾಹನ ಜಖಂ ಆಗಿದೆ. ಮತ್ತೊಂದೆಡೆ ಪ್ರಕರಣದಲ್ಲಿ 9 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.ಮೀನು ಸಾಕಾಣಿಕೆ ಭೂಮಿ ಮತ್ತು ಜಲಮೂಲಗಳನ್ನು ಅಕ್ರಮಕ್ಕೆ ಬಳಸಿರುವ ಆರೋಪದಲ್ಲಿ ಸ್ಥಳೀಯ ಟಿಎಂಸಿ ಕಾರ್ಯಕರ್ತ ಮೂಸಾ ಮೊಲ್ಲಾ ಅವರನ್ನು ಬಂಧಿಸಲು ನಜತ್ ಪೊಲೀಸ್‌ ಠಾಣೆಯ ಸಿಬ್ಬಂದಿ ಸಂದೇಶಖಾಲಿಯ ಬೋರ್ಯಮುರಿ ಗ್ರಾಮಕ್ಕೆ ತೆರಳಿದ್ದರು. ಬಂಧಿಸಿ ಪೊಲೀಸ್‌ ವಾಹನದ ಬಳಿ ಕರೆತರುತ್ತಿದ್ದಂತೆ ಆತನ ಬೆಂಬಲಿಗರು ವಾಹನ ಅಡ್ಡಗಟ್ಟಿ ಕಲ್ಲು ತೂರಾಟ ನಡೆಸಿದ್ದಾರೆ. ಇದರ ಲಾಭ ಪಡೆದುಕೊಂಡ ಮೊಲ್ಲಾ ಪರಾರಿಯಾಗಿದ್ದಾನೆ

ಟಿಎಂಸಿಗೆ ಸಂಸದೆ ನೂರ್ ಶಾಕ್‌: ಕಾಂಗ್ರೆಸ್‌ ಸೇರ್ಪಡೆ

ನವದೆಹಲಿ: ಕೆಲ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ರಾಜ್ಯಸಭೆ ಸಂಸದೆ ಮೌಸಮ್‌ ನೂರ್‌(46) ಅವರು ಶನಿವಾರ ಕಾಂಗ್ರೆಸ್‌ಗೆ ಮರುಸೇರ್ಪಡೆಗೊಂಡಿದ್ದಾರೆ. ಚುನಾವಣೆಯಲ್ಲಿ ಇವರು ಮಾಲ್ದಾದಿಂದ ಸ್ಪರ್ಧಿಸುವ ನಿರೀಕ್ಷೆಯಿದ್ದು. ಟಿಎಂಸಿಗೆ ಶಾಕ್ ನೀಡಿದ್ದಾರೆ.ನೂರ್‌ ಅವರು ಕಾಂಗ್ರೆಸ್‌ ಪ್ರಧಾನ ಕಚೇರಿಯಲ್ಲಿ ಪಕ್ಷದ ನಾಯಕರಾದ ಜೈರಾಂ ರಮೇಶ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್‌ ಅಹ್ಮದ್‌ ಮೀರ್‌ ಹಾಗೂ ಪಿಸಿಸಿ ಅಧ್ಯಕ್ಷ ಶುಭಂಕರ್‌ ಸರ್ಕಾರ್‌ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರಿದರು.ತಾಯಿ ರೂಬಿ ನೂರ್‌ರ ನಿಧನಾನಂತರ 2009ರಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಪಾದಾರ್ಪಣೆ ಮಾಡುವ ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಮೌಸಮ್‌, 2009ರಿಂದ 2019ರ ವರೆಗೆ ನಿರಂತರ 2 ಬಾರಿ ಮಾಲ್ದಾದಿಂದ ಲೋಕಸಭೆಯ ಸದಸ್ಯೆಯಾಗಿದ್ದರು. 2019ರ ಜನವರಿಯಲ್ಲಿ ಟಿಎಂಸಿ ಸೇರಿದ್ದರು.