ಭಾರತದ ರಾಷ್ಟ್ರಧ್ವಜ ಕೆಳಗಿಳಿಸಿದ ಓರ್ವನ ಬಂಧನ: ಇನ್ನಷ್ಟು ದೊಡ್ಡ ರಾಷ್ಟ್ರಧ್ವಜ ಹಾರಿಸಿದ ದೂತಾವಾಸ
ಬ್ರಿಟನ್ನ ಭಾರತೀಯ ರಾಯಭಾರ ಕಚೇರಿ ಮೇಲಿನ ರಾಷ್ಟ್ರಧ್ವಜ ಕೆಳಗಿಳಿಸಿ ಖಲಿಸ್ತಾನಿ ಧ್ವಜ ಹಾರಿಸುವ ಯತ್ನ ಮಾಡಿದ ದುಷ್ಕರ್ಮಿಗಳ ಪೈಕಿ ಒಬ್ಬನನ್ನು ಸೋಮವಾರ ಬಂಧಿಸಲಾಗಿದೆ.
ಲಂಡನ್/ನವದೆಹಲಿ: ಬ್ರಿಟನ್ನ ಭಾರತೀಯ ರಾಯಭಾರ ಕಚೇರಿ ಮೇಲಿನ ರಾಷ್ಟ್ರಧ್ವಜ ಕೆಳಗಿಳಿಸಿ ಖಲಿಸ್ತಾನಿ ಧ್ವಜ ಹಾರಿಸುವ ಯತ್ನ ಮಾಡಿದ ದುಷ್ಕರ್ಮಿಗಳ ಪೈಕಿ ಒಬ್ಬನನ್ನು ಸೋಮವಾರ ಬಂಧಿಸಲಾಗಿದೆ. ಇದರ ನಡುವೆ, ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಬ್ರಿಟನ್ ಸರ್ಕಾರ ಭಾರತಕ್ಕೆ ಆಗ್ರಹಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬ್ರಿಟನ್ ಸರ್ಕಾರ, ‘ಈ ಘಟನೆ ನಮ್ಮನ್ನು ಅವಾಕ್ಕಾಗಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಭಾರತೀಯ ರಾಯಭಾರ ಕಚೇರಿಗೆ (indian embassy office) ಸಕಲ ಭದ್ರತೆ ನೀಡಲಾಗುವುದು’ ಎಂದು ಹೇಳಿದೆ.
ಭಾನುವಾರ ಖಲಿಸ್ತಾನ್ ದೇಶ ಪರ ಹೋರಾಟಗಾರರು (pro-Khalistan fighters) ರಾಯಭಾರ ಕಚೇರಿಗೆ ನುಗ್ಗಿ ಖಲಿಸ್ತಾನ್ ಧ್ವಜ ಹಾರಿಸುವ ವಿಫಲ ಯತ್ನ ನಡೆಸಿದ್ದರು. ಅಲ್ಲದೆ, ಕಿಟಕಿ ಗಾಜು ಒಡೆದಿದ್ದರು. ಈ ವೇಳೆ ಇಬ್ಬರು ಭದ್ರತಾ ಸಿಬ್ಬಂದಿಗಳಿಗೆ ಗಾಯಗಳಾಗಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತೀಯ ವಿದೇಶಾಂಗ ಇಲಾಖೆ, ಬ್ರಿಟನ್ನಲ್ಲಿ ಭಾರತೀಯರಿಗೆ ಹಾಗೂ ಭಾರತ ರಾಯಭಾರ ಕಚೇರಿಗಳಿಗೆ ರಕ್ಷಣೆ ನೀಡಬೇಕು ಹಾಗೂ ದುಷ್ಕರ್ಮಿಗಳ ಹೆಡೆಮುರಿ ಕಟ್ಟಬೇಕು ಎಂದು ಆಗ್ರಹಿಸಿದೆ.
ಇದಕ್ಕೆ ಬ್ರಿಟನ್ ವಿದೇಶಾಂಗ ಸಚಿವ ಲಾರ್ಡ್ ತಾರೀಖ್ ಅನ್ವರ್ (British Foreign Minister Lord Tariq Anwar) ಪ್ರತಿಕ್ರಿಯಿಸಿ, ನನಗೆ ಈ ಘಟನೆಯಿದ ಆಘಾತವಾಗಿದೆ. ಭಾರತೀಯ ದೂತಾವಾಸಕ್ಕೆ ಸಕಲ ಭದ್ರತೆ ನೀಡಲಾಗುವುದು ಎಂದಿದ್ದಾರೆ. ಲಂಡನ್ ಮೇಯರ್ ಸಾದಿಕ್ ಖಾನ್ ( London Mayor Sadiq Khan), ಇಂಥ ವರ್ತನೆಗೆ ಬ್ರಿಟನ್ನಲ್ಲಿ ಅವಕಾಶವಿಲ್ಲ’ ಎಂದಿದ್ದರೆ, ಭಾರತದಲ್ಲಿನ ಬ್ರಿಟನ್ ರಾಯಭಾರಿ ಅಲೆಕ್ಸ್ ವಿಲ್ಲಿಸ್ (Alex Willis) ‘ಸ್ವೀಕಾರಾರ್ಹವಲ್ಲದ ನಡೆ ಇದು’ ಎಂದಿದ್ದಾರೆ.
3 ದೇಶಗಳಲ್ಲಿ ಖಲಿಸ್ತಾನಿ ಉಗ್ರರ ದುಷ್ಕೃತ್ಯ: ಬ್ರಿಟನ್, ಅಮೆರಿಕ, ಆಸ್ಪ್ರೇಲಿಯಾದಲ್ಲೂ ಭಾರತ ವಿರೋಧಿ ಕೃತ್ಯ
ಹಾರಾಡಿತು ಇನ್ನಷ್ಟುದೊಡ್ಡ ರಾಷ್ಟ್ರಧ್ವಜ:
ಭಾರತದ ರಾಷ್ಟ್ರಧ್ವಜ ಕೆಳಗಿಳಿಸುವ ಯತ್ನದ ಬೆನ್ನಲ್ಲೇ ಸೋಮವಾರ ಈವರಗೆ ಇದ್ದ ಧ್ವಜಕ್ಕಿಂತ ಇನ್ನೂ ದೊಡ್ಡ ಪ್ರಮಾಣದ ತಿರಂಗಾ ಹಾರಿಸಲಾಗಿದೆ ಎಂದು ಭಾರತೀಯ ಹೈಕಮಿಷನರ್ ಕಚೇರಿ ಅಧಿಕಾರಿಗಳು ಹೇಳಿದ್ದಾರೆ. ಇತ್ತೀಚೆಗಷ್ಟೇ ಕೆನಡಾ ಹಾಗೂ ಆಸ್ಪ್ರೇಲಿಯಾದಲ್ಲಿಯೂ ಖಲಿಸ್ತಾನಿ ಬೆಂಬಲಿಗರು ಹಿಂದೂ ದೇಗುಲಗಳ ಮೇಲೆ ದ್ವೇಷದ ಬರಹ ಬರೆದಿದ್ದರು. ಜೊತೆಗೆ ಮೆಲ್ಬರ್ನ್ನಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿನ ಧ್ವಜ ಇಳಿಸಿ ದುಷ್ಕೃತ್ಯ ಮರೆದಿದ್ದರು.
ಲಂಡನ್ ಮಾಜಿ ಮೇಯರ್ ನೀರಜ್ ಆಕ್ಷೇಪ
ಲಂಡನ್: ಇಲ್ಲಿನ ಭಾರತೀಯ ರಾಯಭಾರ ಕಚೇರಿ ಕಟ್ಟಡದಲ್ಲಿದ್ದ ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ಖಲಿಸ್ತಾನಿ ಧ್ವಜ ಹಾರಿಸಿದ ಖಲಿಸ್ತಾನಿಪರ ಬೆಂಬಲಿಗರ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಲಂಡನ್ನಿನ ಮಾಜಿ ಮೇಯರ್ ಹಾಗೂ ಕನ್ನಡಿಗರೂ ಆದ ಡಾ. ನೀರಜ್ ಪಾಟೀಲ್ (Dr. Neeraj Patil), ‘ಇದು ಹಿಂದೂ ಮತ್ತು ಸಿಖ್ರ ನಡುವೆ ವೈಷಮ್ಯ ಸೃಷ್ಟಿಸುವ ಕುತಂತ್ರವಾಗಿದೆ. ಲಂಡನ್ ರಾಯಭಾರ ಕಚೇರಿಯಲ್ಲಿ ನಡೆದ ಘಟನೆ ಸಮಾಜಘಾತಕ ಕೃತ್ಯವಾಗಿದೆ. ಹಿಂದೂಗಳು ಮತ್ತು ಸಿಖ್ ಸಮುದಾಯಗಳ ನಡುವಿನ ಶಾಂತಿ ಸಹಬಾಳ್ವೆಯ ಸಂಬಂಧವನ್ನು ಕೆಡಿಸುವ ಈ ಶಕ್ತಿಗಳ ಪ್ರಯತ್ನ ಫಲಿಸದು’ ಎಂದು ಕಿಡಿಕಾರಿದ್ದಾರೆ.
ಅಮೆರಿಕದಲ್ಲೂ ರಾಯಭಾರ ಕಚೇರಿ ಮೇಲಿ ಖಲಿಸ್ತಾನಿಗಳ ದಾಳಿ, ಭಾರತ ಖಂಡನೆ!