ಇಂದಿನಿಂದ ಮಾನವನ ಮೇಲೆ ಕೊರೋನಾ ಲಸಿಕೆ ಪ್ರಯೋಗ| ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ ತಯಾರಿಸಿರುವ ಲಸಿಕೆ| ಯಶ ಕಂಡರೆ ರೋಗ ತಡೆವ ಲಸಿಕೆ ಸೆಪ್ಟೆಂಬರಲ್ಲಿ ಮಾರುಕಟ್ಟೆಗೆ

ಲಂಡನ್‌(ಏ.23): ವಿಶ್ವದಲ್ಲಿ 25 ಲಕ್ಷಕ್ಕೂ ಹೆಚ್ಚು ಜನರಿಗೆ ತಗುಲಿ, 1.75 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿಪಡೆದಿರುವ ಕೊರೋನಾ ಸೋಂಕಿಗೆ ಔಷಧ ಕಂಡುಹಿಡಿಯಲು ವಿಶ್ವ ಮಟ್ಟದಲ್ಲಿ ಭಾರೀ ಪ್ರಯತ್ನ ನಡೆಯುತ್ತಿರುವ ಹೊತ್ತಿನಲ್ಲೇ, ಬಹು ನಿರೀಕ್ಷಿತ ಔಷಧವೊಂದು ಗುರುವಾರದಿಂದ ಮಾನವ ಪ್ರಯೋಗಕ್ಕೆ ಒಳಪಡುತ್ತಿದೆ. ಬ್ರಿಟನ್ನಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ ಸಿಎಚ್‌ಎಡಿಒಎಕ್ಸ್‌1 ಹೆಸರಿನ ಲಸಿಕೆಯನ್ನು ಗುರುವಾರದಿಂದ ಮನುಷ್ಯನ ಮೇಲೆ ಪ್ರಯೋಗಿಸಲಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"

ಕೊರೋನಾ ವೈರಸ್‌ ಸೋಂಕು ತಗಲದಂತೆ ತಡೆಯುವ ಲಸಿಕೆ ಇದಾಗಿದ್ದು, ಇದನ್ನು ಪ್ರಯೋಗಿಸಲು ಈಗಾಗಲೇ 500 ಸ್ವಯಂಸೇವಕರನ್ನು ನೇಮಿಸಿಕೊಳ್ಳಲಾಗಿದೆ. ಪ್ರಯೋಗ ಯಶಸ್ವಿಯಾದರೆ ಸೆಪ್ಟೆಂಬರ್‌ ವೇಳೆಗೆ ಲಸಿಕೆಯ ಲಕ್ಷಾಂತರ ಡೋಸ್‌ಗಳು ಮಾರುಕಟ್ಟೆಗೆ ಬರಲಿವೆ ಎಂದು ಬ್ರಿಟನ್ನಿನ ಆರೋಗ್ಯ ಸಚಿವರು ಹಾಗೂ ವಿಜ್ಞಾನಿಗಳು ತಿಳಿಸಿದ್ದಾರೆ.

ಲಸಿಕೆ ಕಂಡುಹಿಡಿಯುವ ವರೆಗೆ ಲಾಕ್‌ಡೌನ್, ಕಠಿಣ ನಿರ್ಧಾರ ತೆಗೆದುಕೊಂಡ ಬ್ರಿಟನ್ ಆರೋಗ್ಯ ಸಚಿವ!

ಹಳೆ ಮದ್ದು:

ಆಕ್ಸ್‌ಫರ್ಡ್‌ ವಿವಿ ವಿಜ್ಞಾನಿಗಳು ಈಗ ಕಂಡುಹಿಡಿದಿರುವ ಔಷಧವು ಕೊರೋನಾಗೆಂದು ಸಿದ್ಧಪಡಿಸಿದ್ದಲ್ಲ. ಕೊರೋನಾ ಮಾದರಿಯ ವೈರಸ್‌ ಅನ್ನೇ ಬಳಸಿಕೊಂಡು ವಿಜ್ಞಾನಿಗಳು ಬಹಳ ಸಮಯದಿಂದ ನಿಗೂಢ ರೋಗಕ್ಕೆ ಔಷಧ ಸಿದ್ಧಪಡಿಸುವಲ್ಲಿ ನಿರತರಾಗಿದ್ದರು. ಆದರೆ ಇದೀಗ ಕೊರೋನಾ ವ್ಯಾಪಕಗೊಂಡ ಹಿನ್ನೆಲೆಯಲ್ಲಿ ಅದನ್ನೇ ಇದೀಗ ಕೊರೋನಾಗೆ ಮದ್ದು ಕಂಡುಹಿಡಿಯಲು ಪರಿವರ್ತಿಸಿಕೊಂಡಿದ್ದಾರೆ.

ಸೂಪರ್‌ಫಾಸ್ಟ್‌:

ಸಾಮಾನ್ಯವಾಗಿ ಯಾವುದೇ ಹೊಸ ಲಸಿಕೆ ಮಾರುಕಟ್ಟೆಗೆ ಬರುವುದಕ್ಕೆ ಅದನ್ನು ಕಂಡುಹಿಡಿದ ನಂತರ 12ರಿಂದ 18 ತಿಂಗಳು ಬೇಕಾಗುತ್ತದೆ. ಆದರೆ, ಆಕ್ಸ್‌ಫರ್ಡ್‌ ವಿಜ್ಞಾನಿಗಳು ಕಂಡುಹಿಡಿದಿರುವುದು ಸೂಪರ್‌ಫಾಸ್ಟ್‌ ಲಸಿಕೆ ಎಂದು ಬ್ರಿಟನ್‌ ಸರ್ಕಾರ ಹೇಳಿಕೊಂಡಿದೆ. ಈ ಪ್ರಯೋಗಕ್ಕೆ ಸ್ವತಃ ಬ್ರಿಟನ್‌ ಸರ್ಕಾರವೇ ಕೆಲ ತಿಂಗಳ ಹಿಂದೆ 20 ಕೋಟಿ ರು. ನೆರವು ನೀಡಿತ್ತು.

'6 ದಿನ'ದ ಸೀಕ್ರೆಟ್: ಚೀನಾ ಮಾಡಿದ ದೊಡ್ಡ ಎಡವಟ್ಟು ಬಹಿರಂಗ!

ಪ್ರಕ್ರಿಯೆ ಹೇಗೆ?

ಚಿಂಪಾಂಜಿಗಳಲ್ಲಿ ಸಾಮಾನ್ಯ ಶೀತಕ್ಕೆ ಕಾರಣವಾಗುವ ಅಡಿನೋವೈರಸ್‌ ಎಂಬ ವೈರಸ್‌ ಅನ್ನು ವಿಜ್ಞಾನಿಗಳ ತಂಡ, ಈ ಸಂಶೋಧನೆಗೆ ಬಳಸಿಕೊಂಡಿದೆ. ಈ ವೈರಸ್‌ ಕೂಡಾ ಕೊರೋನಾ ವೈರಸ್‌ ಮಾದರಿಯಲ್ಲಿ ತನ್ನ ಹೊರಮೈನಲ್ಲಿ ಮುಳ್ಳಿನಂಥ ಪ್ರೋಟೀನ್‌ಗಳನ್ನು ಹೊಂದಿದೆ. ಈ ಪ್ರೋಟಿನ್‌ಗಳನ್ನು ಅಗತ್ಯಕ್ಕೆ ತಕ್ಕಂತೆ ಆನುವಂಶಿಕವಾಗಿ ಬದಲಾವಣೆ ಮಾಡಲಾಗಿದ್ದು, ಇದೀಗ ಇದೀಗ ಆರೋಗ್ಯವಂತ ವ್ಯಕ್ತಿಗಳ ದೇಹಕ್ಕೆ ಲಸಿಕೆ ರೂಪದಲ್ಲಿ ನೀಡಲಾಗುವುದು. ಈ ಮೂಲಕ, ಮುಳ್ಳಿನಂಥ ಈ ವಸ್ತು ನಮ್ಮ ದೇಹದ ಮೇಲೆ ದಾಳಿಕೋರ ಎಂದು ನಮ್ಮ ಜೀವರಕ್ಷಕ ವ್ಯವಸ್ಥೆಗೆ ಅರಿವು ಮೂಡಿಸುವ ಕೆಲಸವನ್ನು ವಿಜ್ಞಾನಿಗಳ ತಂಡ ಮಾಡಲಿದೆ. ಒಂದು ವೇಳೆ ಈ ಸಂಜ್ಞೆಯನ್ನು ರೋಗಿಯ ಜೀವರಕ್ಷಕ ವ್ಯವಸ್ಥೆ ಅರಿತು, ನಿಧಾನವಾಗಿ ಆ್ಯಂಡಿಬಾಡಿಗಳನ್ನು ಉತ್ಪಾದಿಸಿದರೆ, ಲಸಿಕೆ ಯಶಸ್ವಿಯಾದಂತೆ.