ಭಾರತೀಯರ ಪಾಲಿಗೆ ಮಹತ್ವದ ಬೆಳವಣಿಗೆಯಲ್ಲಿ, ಬೆಳಕಿನ ಹಬ್ಬ ದೀಪಾವಳಿಗೆ ಯುನೆಸ್ಕೋದ ಅಮೂರ್ತ ಮಾನವ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಕೊಡಲಾಗಿದೆ. ಕೆಂಪುಕೋಟೆಯಲ್ಲಿ ಬುಧವಾರ ನಡೆದ ಯುನೆಸ್ಕೋ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ನವದೆಹಲಿ : ಭಾರತೀಯರ ಪಾಲಿಗೆ ಮಹತ್ವದ ಬೆಳವಣಿಗೆಯಲ್ಲಿ, ಬೆಳಕಿನ ಹಬ್ಬ ದೀಪಾವಳಿಗೆ ಯುನೆಸ್ಕೋದ ಅಮೂರ್ತ ಮಾನವ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಕೊಡಲಾಗಿದೆ. ಕೆಂಪುಕೋಟೆಯಲ್ಲಿ ಬುಧವಾರ ನಡೆದ ಯುನೆಸ್ಕೋ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಈ ಪಟ್ಟಿಗೆ ಸೇರ್ಪಡೆಗೊಂಡ ಭಾರತದ 16ನೇ ಪರಂಪರೆಯಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿಯೂ ಅಭಿನಂದನೆ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಅಂತರ್‌ಸರ್ಕಾರಿ ಸಮಿತಿಯ (ಐಸಿಎಚ್‌) 20ನೇ ಅಧಿವೇಶನದಲ್ಲಿ ದೀಪಾವಳಿಗೆ ಈ ಸ್ಥಾನಮಾನ ನೀಡಲಾಗಿದೆ. ದೀಪಾವಳಿಗೆ ಮಾನ್ಯತೆ ನೀಡುವಂತೆ ಯುನೆಸ್ಕೋಗೆ ಭಾರತ 2023ರಲ್ಲಿ ಶಿಫಾರಸು ಮಾಡಿತ್ತು. ಈಗಾಗಲೇ ಕುಂಭಮೇಳ, ಕೋಲ್ಕತ್ತಾದ ದುರ್ಗಾ ಪೂಜೆ, ಗುಜರಾತ್‌ನ ಗರ್ಬಾ ನೃತ್ಯ, ಯೋಗ, ವೇದ ಪಠಣ ಮತ್ತು ರಾಮಲೀಲಾವನ್ನು ಯುನೆಸ್ಕೋ ಗುರುತಿಸಿದೆ.

ಇಂಡೋನೇಷ್ಯಾ, ಮಲೇಷ್ಯಾ, ಗಯಾನಾ, ಅಮೆರಿಕದ ಹಲವು ರಾಜ್ಯಗಳು ಈಗಾಗಲೇ ಈಗಾಗಲೇ ದೀಪಾವಳಿಯನ್ನು ಗುರುತಿಸಿ, ಸರ್ಕಾರಿ ರಜೆ ನೀಡುತ್ತಿವೆ.

ಘೋಷಣೆಯ ಮಹತ್ವವೇನು?

ಯುನೆಸ್ಕೋ ಗುರುತಿಸುವಿಕೆಯಿಂದ ದೀಪಾವಳಿ ಕೇವಲ ಭಾರತದ ಅಥವಾ ಹಿಂದೂಗಳ ಹಬ್ಬವಾಗಿ ಉಳಿಯದೆ, ಜಾಗತಿಕ ಗುರುತಿಸುವಿಕೆಯನ್ನು ಪಡೆಯುತ್ತದೆ. ದೇಶದಲ್ಲಿ ನಡೆಯುವ ಬೃಹತ್‌ ದೀಪೋತ್ಸವಗಳು ವಿದೇಶಿಗರನ್ನು ಆಕರ್ಷಿಸುತ್ತದೆ. ಇದರಿಂದ ಪ್ರವಾಸೋದ್ಯಮವೂ ಬೆಳೆಯುತ್ತದೆ. ಹಬ್ಬದ ವೇಳೆ ಬಳಸುವ ಕರಕುಶಲ ವಸ್ತುಗಳು, ಧರಿಸುವ ಸಾಂಪ್ರದಾಯಿಕ ಬಟ್ಟೆಗಳು, ಸಿಹಿತಿಂಡಿಗಳೂ ಮುನ್ನೆಲೆಗೆ ಬರುತ್ತವೆ.

ದೀಪಾವಳಿಗೆ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ

ದೀಪಾವಳಿ ಹಬ್ಬವು ನಮ್ಮ ಸಂಸ್ಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದು, ನಾಗರೀಕತೆಯ ಆತ್ಮವಾಗಿದೆ. ಅದನ್ನೀಗ ಉನೆಸ್ಕೋದ ಅಮೂರ್ತ ಪರಂಪರೆಯ ಪಟ್ಟಿಗೆ ಸೇರಿಸಲಾಗಿರುವುದು, ಹಬ್ಬಕ್ಕೆ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ತಂದುಕೊಡುತ್ತದೆ. ಪ್ರಭು ಶ್ರೀ ರಾಮನ ಆದರ್ಶಗಳು ನಮಗೆ ಶಾಶ್ವತವಾಗಿ ಮಾರ್ಗದರ್ಶನ ನೀಡುತ್ತಿರಲಿ.

-ನರೇಂದ್ರ ಮೋದಿ, ಪ್ರಧಾನಿ

ಪ್ರತಿಯೊಬ್ಬ ಭಾರತೀಯನಿಗೆ, ದೀಪಾವಳಿಯು ಭಾವನಾತ್ಮಕ ಹಬ್ಬವಾಗಿದೆ. ತಲೆಮಾರುಗಳಿಂದ ಆಚರಿಸಿಕೊಂಡು ಬರಲಾಗಿರುವ ಇದನ್ನು ಜನ ಅನುಭವಿಸಿ, ಬದುಕುತ್ತಾರೆ. ಯುನೆಸ್ಕೋ ಮಾನ್ಯತೆಯು ಈ ಪರಂಪರೆಯನ್ನು ಜೀವಂತವಾಗಿ ಮುಂದುವರೆಸಿಕೊಂಡು ಹೋಗಲು ನಮಗೆ ಸಿಕ್ಕ ಜವಾಬ್ದಾರಿ.

ಗಜೇಂದ್ರ ಸಿಂಗ್‌ ಶೆಖಾವತ್‌, ಕೇಂದ್ರ ಸಾಂಸ್ಕೃತಿಕ ಸಚಿವ

ಮೋದಿಯ ಉತ್ತರಾಧಿಕಾರಿ ಯಾರೆಂಬ ನಿರ್ಧಾರ ಬಿಜೆಪಿ, ಮೋದಿಯದ್ದು: ಭಾಗವತ್‌

ಚೆನ್ನೈ: ‘ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ ಯಾರಾಗುತ್ತಾರೆ ಎಂಬುದನ್ನು ಬಿಜೆಪಿ ಪಕ್ಷ ಮತ್ತು ಸ್ವತಃ ಮೋದಿಯವರೇ ನಿರ್ಧರಿಸುತ್ತಾರೆ’ ಎಂದು ಆರ್‌ಎಸ್‌ಎಸ್‌ನ ಸರಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದ್ದಾರೆ. ಈ ಮೂಲಕ, ಉತ್ತರಾಧಿಕಾರ ನಿರ್ಧಾರದಲ್ಲಿ ಸಂಘದ ಪಾತ್ರವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ‘ತಾವು ಮೋದಿಯವರ ಉತ್ತರಾಧಿಕಾರಿ ಅಗುತ್ತೀರಾ?’ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಭಾಗವತ್‌, ‘ಮೋದಿ ಬಳಿಕ ಯಾರು ಪ್ರಧಾನಿ ಆಗುತ್ತಾರೆ ಎಂಬ ಬಗ್ಗೆ ಪಕ್ಷ ಹಾಗೂ ಮೋದಿಯವರೇ ನಿರ್ಧಾರ ಕೈಗೊಳ್ಳುತ್ತಾರೆ’ ಎಂದರು.