ಭಾರತದ ದಕ್ಷಿಣ ಗಡಿಗೂ ಚೀನಾ ಪ್ರವೇಶ: ಲಂಕಾ ಈ ನಡೆಯಿಂದ ಆತಂಕ!
* ಭಾರತದ ದಕ್ಷಿಣ ಗಡಿಗೂ ಚೀನಾ ಪ್ರವೇಶ!
* ವಿವಾದಿತ ಕೊಲಂಬೋ ಬಂದರು ನಗರಿ ಸ್ಥಾಪನೆಗೆ ಲಂಕಾ ಅಸ್ತು
* ಈ ಮೂಲಕ ಇಲ್ಲಿಗೆ ಚೀನಾದ ನೇರ ಬಂಡವಾಳ ಹರಿವು
* ಕನ್ಯಾಕುಮಾರಿಯಿಂದ ಕೇವಲ 290 ಕಿ.ಮೀ. ದೂರದಲ್ಲಿ ನಿರ್ಮಾಣ
* ಇದೇ ಬಂದರನ್ನು ತನ್ನ ‘ವ್ಯೂಹಾತ್ಮಕ ನೆಲೆ’ ವಿಸ್ತರಿಸಲು ಚೀನಾ ಬಳಸಬಹುದು
* ಶ್ರೀಲಂಕಾದ ಈ ನಡೆಯಿಂದ ಭಾರತಕ್ಕೆ ಆತಂಕ
ಕೊಲಂಬೋ(ಮೇ.27): ಚೀನಾದ ನೇರ ಬಂಡವಾಳ ಹರಿವಿಗೆ ಕಾರಣವಾಗಲಿರುವ ವಿವಾದಾತ್ಮಕ ‘ಕೊಲಂಬೋ ಬಂದರು ನಗರಿ ಮಸೂದೆ’ಗೆ ಶ್ರೀಲಂಕಾ ಸಂಸತ್ತು ಅನುಮೋದನೆ ನೀಡಿದೆ. ದೇಶದ ಸಾರ್ವಭೌಮತೆಗೆ ಈ ಮಸೂದೆ ಎರವಾಗಲಿದೆ ಎಂದು ಶ್ರೀಲಂಕಾದಲ್ಲಿನ ವಿಪಕ್ಷಗಳು, ಪರಿಸರವಾದಿಗಳು ಹಾಗೂ ನಾಗರಿಕ ಸಂಘಟನೆಗಳ ವಿರೋಧದ ಹೊರತಾಗಿಯೂ ಇದಕ್ಕೆ ಅಂಗೀಕಾರ ದೊರಕಿದೆ. ಇದರೊಂದಿಗೆ ಕೊಲಂಬೋಗೆ ಹೊಂದಿಕೊಂಡಿರುವ ಹಂಬಂತೋಟದ 269 ಹೆಕ್ಟೇರ್ ಪ್ರದೇಶವು ‘ಬಂದರು ನಗರಿ’ಯಾಗಿ ಮಾರ್ಪಡಲಿದ್ದು, ಇಲ್ಲಿ ಚೀನಾದ ನೇರ ಬಂಡವಾಳ ಹರಿದುಬರಲಿದೆ.
10 ದಶಲಕ್ಷ ವರ್ಷ ಹಳೆಯ ಪಳೆಯುಳಿಕೆಗಳು ಪತ್ತೆ..!
‘ಕೊಲಂಬೋ ಬಂದರು ನಗರಿ’ ಸ್ಥಾಪನೆಗೆ ಶ್ರೀಲಂಕಾ ಸಂಸತ್ತಿನ 225 ಸಂಸದರಲ್ಲಿ 149 ಸದಸ್ಯರು ಬೆಂಬಲ ಸೂಚಿಸಿದ್ದು, ಭಾರಿ ಬಹುಮತದಿಂದ ಅಂಗೀಕಾರಗೊಂಡಿದೆ. ಈ ಪ್ರಕಾರ, ವಿದೇಶಿ ಬಂಡವಾಳ ಇಲ್ಲಿಗೆ ಹರಿದುಬರಲಿದೆ. ಈ 1.4 ಶತಕೋಟಿ ಡಾಲರ್ ಬಂಡವಾಳದ ಮೂಲಕ ವಿವಿಧ ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ.
‘ಇಲ್ಲಿ 2 ಲಕ್ಷ ಉದ್ಯೋಗಗಳು ಮುಂದಿನ 5 ವರ್ಷದಲ್ಲಿ ಸೃಷ್ಟಿಯಾಗಲಿವೆ ಹಾಗೂ ಹೆಚ್ಚು ಉದ್ಯೋಗಗಳು ಲಂಕನ್ನರಿಗೇ ಲಭಿಸಲಿವೆ. ಕೊಲಂಬೋ ದಕ್ಷಿಣ ಏಷ್ಯಾದ ಬಹುದೊಡ್ಡ ಸೇವಾ ತಾಣವಾಗಿ ಮಾರ್ಪಡಲಿದೆ’ ಎಂದು ಪ್ರಧಾನಿ ಮಹಿಂದ ರಾಜಪಕ್ಸೆ ಹೇಳಿಕೊಂಡಿದ್ದಾರೆ.
ಚೀನಾ ಲ್ಯಾಬ್ನಿಂದ ಕೊರೋನ ಸ್ಫೋಟ; ಸಂಶೋಧಕರು ಆಸ್ಪತ್ರೆ ದಾಖಲಾಗಿದ್ದ ಮಾಹಿತಿ ಬಹಿರಂಗ!
ಭಾರತಕ್ಕೆ ಏಕೆ ಆತಂಕ?
ಭಾರತದಿಂದ ಶ್ರೀಲಂಕಾ ಅತಿ ಹತ್ತಿರದಲ್ಲಿದ್ದು, ಕನ್ಯಾಕುಮಾರಿಯಿಂದ ಕೇವಲ 290 ಕಿ.ಮೀ. ದೂರದಲ್ಲಿ ಯೋಜನೆ ಕೈಗೂಡುತ್ತಿದೆ. ಇದನ್ನೇ ಚೀನಾ ದುರುಪಯೋಗ ಮಾಡಿಕೊಂಡು, ಬಂದರು ನಗರಿ ಸ್ಥಾಪನೆ ನೆಪದಲ್ಲಿ ತನ್ನ ವ್ಯೂಹಾತ್ಮಕ ಜಾಲವನ್ನು ಶ್ರೀಲಂಕಾಗೂ ವಿಸ್ತರಿಸಬಹುದು ಎಂಬ ಆತಂಕ ಭಾರತದ್ದು. ಈಗಾಗಲೇ ಟಿಬೆಟ್ ಹಾಗೂ ಪಾಕಿಸ್ತಾನದಲ್ಲಿ ಚೀನಾ ತನ್ನ ಕಬಂಧಬಾಹುವನ್ನು ಚಾಚಿ ಆತಂಕ ಉಂಟುಮಾಡಿದೆ. ಜೊತೆಗೆ ಈ ಬಂದು ನಗರಿ, 269 ಹೆಕ್ಟೇರ್ ವಿಶೇಷ ಆರ್ಥಿಕ ವಲಯವಾಗಿ ಮಾರ್ಪಾಡಾಗಲಿದೆ. ಇದರ ಆಡಳಿತ ನಡೆಸಲು ಪ್ರತ್ಯೇಕ ಆಯೋಗ ರಚನೆಯಾಗಲಿದೆ. ಯಾವುದಾದರೂ ನೋಂದಾಯಿತ ವಿದೇಶಿ ಕರೆನ್ಸಿ ಬಳಸಿ ಈ ಬಂದರು ನಗರಿಯಲ್ಲಿ ವ್ಯಾಪಾರ ವಹಿವಾಟು ನಡೆಸಬಹುದಾಗಿದೆ. ಅರ್ಥಾತ್ ಚೀನೀಯರು ಈ ಪ್ರದೇಶದಲ್ಲಿ ನೇರ ಬಂಡವಾಳ ಹೂಡಿ ತಮ್ಮದೇ ಪರೋಕ್ಷ ‘ರಾಜ್ಯಭಾರ’ ಮಾಡಬಹುದಾಗಿದೆ. ಈವರೆಗೂ ಈ ಪ್ರದೇಶವು ಶ್ರೀಲಂಕಾ ಬಂದರು ಪ್ರಾಧಿಕಾರದ ಅಧೀನದಲ್ಲಿ ಇತ್ತು.