Asianet Suvarna News Asianet Suvarna News

ಭಾರತದ ಮೇಲೆ ಚೀನಾ ‘ಡಿಜಿಟಲ್‌ ದಾಳಿ’: ಗಡಿಯಲ್ಲಿ ಭಾರೀ ಸೇನೆ ನಿಯೋಜನೆ ಚಿತ್ರ ಪ್ರಕಟ!

* ಅರುಣಾಚಲ ಪ್ರದೇಶದ ಮೇಲೆ ಸೇನಾ ದಾಳಿಯ ಎಚ್ಚರಿಕೆ

* ಭಾರತದ ಗಡಿಯಲ್ಲಿ ಭಾರೀ ಸೇನೆ ನಿಯೋಜನೆ ಚಿತ್ರ ಪ್ರಕಟ

* ವೆರಿಫೈಡ್‌, ಅನ್‌ವೆರಿಫೈಡ್‌ ಟ್ವೀಟರ್‌ ಖಾತೆಗಳಿಂದ ಎಚ್ಚರಿಕೆ

* ಭಾರತದಿಂದಲೂ ಅರುಣಾಚಲ ಪ್ರದೇಶ ಗಡಿಯಲ್ಲಿ ಹೈಅಲರ್ಟ್‌

China Uses Twitter to Threaten Military Action in Arunachal Pradesh Troops on High Alert pod
Author
Bangalore, First Published Nov 9, 2021, 7:49 AM IST

ನವದೆಹಲಿ(ನ.09): ಗಡಿಯಲ್ಲಿ (Border) ಸದಾ ಭಾರತದ ಜೊತೆ ಕ್ಯಾತೆ ತೆಗೆಯುವ ಚೀನಾ (China), ಇದೀಗ ಭಾರತದ ವಿರುದ್ಧ ಡಿಜಿಟಲ್‌ ದಾಳಿ (Digital Attack) ಆರಂಭಿಸಿದೆ. ಭಾರತದ ಅವಿಭಾಜ್ಯ ಅಂಗವಾದ ಅರುಣಾಚಲ ಪ್ರದೇಶದ (Arunachal Pradesh) ಮೇಲೆ ದಾಳಿ ನಡೆಸುವುದಾಗಿ ಟ್ವೀಟರ್‌ ಪೋಸ್ಟ್‌ಗಳ ಮೂಲಕ ಭಾರತಕ್ಕೆ (India) ಚೀನಾ ಎಚ್ಚರಿಕೆ ನೀಡಲಾಗಿದೆ. ಅರುಣಾಚಲ ಪ್ರದೇಶದ ತನ್ನ ದೇಶದ ಭಾಗ ಎಂದು ಹಿಂದಿನಿಂದಲೂ ಚೀನಾ ವೃಥಾ ವಾದ ಮಾಡಿಕೊಂಡೇ ಬರುತ್ತಿದೆ. ಹೀಗಾಗಿಯೇ ಉದ್ದೇಶಪೂರ್ವಕವಾಗಿ ಆ ರಾಜ್ಯವನ್ನೇ ಗುರಿಯಾಗಿಸಿ ಟ್ವೀಟರ್‌ನಲ್ಲಿ (Twitter) ಭಾರೀ ಪ್ರಮಾಣದ ಪೋಸ್ಟ್‌ಗಳನ್ನು ಮಾಡಲಾಗಿದೆ.

ಸೋಮವಾರ ಹಲವಾರು ವೆರಿಫೈಡ್‌ (Verified) ಮತ್ತು ಅನ್‌ವೆರಿಫೈಡ್‌ ಟ್ವೀಟರ್‌ ಖಾತೆಗಳ ಮೂಲಕ ಇಂಥ ಎಚ್ಚರಿಕೆ ನೀಡಲಾಗಿದೆ. ಇಂಥ ಎಚ್ಚರಿಕೆಗಳಲ್ಲಿ ಅರುಣಾಚಲಪ್ರದೇಶದ ಗಡಿಯಲ್ಲಿ ಭಾರೀ ಪ್ರಮಾಣದ ಸೇನೆ ನಿಯೋಜಿಸಿರುವ ಹಳೆಯ ಫೋಟೋ ಮತ್ತು ವಿಡಿಯೋಗಳನ್ನು ಹರಿಯಬಿಡಲಾಗಿದೆ. ಚೀನಾದಲ್ಲಿ ಟ್ವೀಟರ್‌ಗೆ ನಿಷೇಧವಿದ್ದರೂ, ಚೀನಾ ಮೂಲದ ವ್ಯಕ್ತಿಗಳಿಂದ ಇಂಥ ಬೆದರಿಕೆ ಪೋಸ್ಟ್‌ಗಳನ್ನು ಹಾಕಿಸಿರುವುದು ಭಾರೀ ಅಚ್ಚರಿಗೆ ಕಾರಣವಾಗಿದೆ.

ಕಳೆದ ಕೆಲ ತಿಂಗಳನಿಂದ ಚೀನಾ, ಟಿಬೆಟ್‌ನಲ್ಲಿ ದೊಡ್ಡ ಮಟ್ಟದ ಸಮರಾಭ್ಯಾಸ ನಡೆಸುತ್ತಿದೆ. ಜೊತೆಗೆ ಲಡಾಖ್‌ನಲ್ಲಿ ಹಲವು ತಿಂಗಳ ಕಾಲ ಭಾರತದ ಜೊತೆಗೆ ಕಾಲು ಕೆರೆದು ಜಗಳ ಮಾಡಿತ್ತು. ಅದರ ಬೆನ್ನಲ್ಲೇ ಈ ಹೊಸ ಬೆಳವಣಿಗೆ ನಡೆದಿರುವ ಹಿನ್ನೆಲೆಯಲ್ಲಿ ಅರುಣಾಚಲ ಮತ್ತು ಲಡಾಖ್‌ ಗಡಿ ಪ್ರದೇಶದಲ್ಲಿ ಭಾರತ ಕೂಡಾ ಹೈಅಲರ್ಟ್‌ ಘೋಷಿಸಿದ್ದು, ತನ್ನ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ ಎನ್ನಲಾಗಿದೆ.

ಅರುಣಾಚಲದಲ್ಲಿ ತಲೆ ಎತ್ತಿದೆ ಚೀನಾದ 100 ಮನೆಗಳ ಹಳ್ಳಿ

ಭಾರತದ ಜತೆ ಕಾಲು ಕೆರೆದು ಕಾದಾಟಕ್ಕೆ ಇಳಿಸುವ ನೆರೆಯ ಚೀನಾ ಅರುಣಾಚಲ ಪ್ರದೇಶ ರಾಜ್ಯದೊಳಗೆ 100 ಮನೆಗಳನ್ನು ಹೊಂದಿದ ಗ್ರಾಮವೊಂದನ್ನು ನಿರ್ಮಾಣ ಮಾಡಿದೆ ಎಂದು ಅಮೆರಿಕದ ಭದ್ರತಾ ಇಲಾಖೆ ಹೇಳಿದೆ.

ಅಮೆರಿಕದ ಭದ್ರತಾ ಇಲಾಖೆಯ ವರದಿಯ ‘ಚೀನಾ-ಭಾರತ ಗಡಿ ಬಿಕ್ಕಟ್ಟು’ ಅಧ್ಯಾಯದಲ್ಲಿ, ‘2020ರ ವೇಳೆಗೆ ಚೀನಾದ ಪೀಪಲ್‌ ರಿಪಬ್ಲಿಕ್‌ ಸರ್ಕಾರವು, ಟಿಬೆಟ್‌ ಸ್ವಾಯತ್ತ ಪ್ರಾಂತ್ಯದ ವಿವಾದಿತ ಪ್ರದೇಶ ಮತ್ತು ಭಾರತದ ಅವಿಭಾಜ್ಯ ಅಂಗ ಅರುಣಾಚಲ ಪ್ರದೇಶದ ಪೂರ್ವ ಸೆಕ್ಟರ್‌ನ ವಾಸ್ತವ ಗಡಿ ರೇಖೆಯ ನಡುವೆ 100 ಮನೆಗಳನ್ನು ಒಳಗೊಂಡ ಗ್ರಾಮವೊಂದನ್ನು ನಿರ್ಮಾಣ ಮಾಡಿದೆ’ ಎಂದು ಹೇಳಿದೆ.

ಒಂದು ದಶಕಕ್ಕಿಂತಲೂ ಹೆಚ್ಚಿನ ಅವಧಿಯಿಂದ ಚೀನಾ ಈ ಭಾಗದಲ್ಲಿ ಸಣ್ಣ ಸೇನಾ ತುಕಡಿಯನ್ನು ನಿಯೋಜಿಸಿತ್ತು. ಆದರೆ 2020ರಲ್ಲಿ ಗ್ರಾಮ ಅಭಿವೃದ್ಧಿಪಡಿಸಿದ ಬಳಿಕ ಚೀನಾ, ರಸ್ತೆ ನಿರ್ಮಾಣ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಯೋಜನೆಗಳನ್ನು ಕೈಗೊಳ್ಳುತ್ತಿದೆ. ತನ್ಮೂಲಕ ಭಾರತದ ಗಡಿಯೊಳಗೆ ಚೀನಾ ಹಿಂದೆಂದಿಗಿಂತಲೂ ತನ್ನ ಇರುವಿಕೆಯನ್ನು ಹೆಚ್ಚು ಸಕ್ರಿಯಗೊಳಿಸಿದೆ. ಹೀಗಾಗಿ ಪರಿಸ್ಥಿತಿ ತೀರ ಭಿನ್ನವಾಗಿದೆ. ಗಡಿ ಬಿಕ್ಕಟ್ಟು ಕುರಿತಾಗಿ ಭಾರತ-ಚೀನಾ ಮಧ್ಯೆ ಸರಣಿ ಮಾತುಕತೆಗಳು ನಡೆದಿವೆ. ಆದಾಗ್ಯೂ, ತನ್ನ ಚತುರತೆಯಿಂದಾಗಿ ಗಡಿ ವಾಸ್ತವ ಪ್ರದೇಶದಲ್ಲಿ ತನ್ನ ಚಟುವಟಿಕೆಗಳನ್ನು ಮುಂದುವರಿಸುತ್ತಿದೆ

ಮೋದಿ ಕ್ಷಮೆ ಯಾಚಿಸಲಿ

ಅರುಣಾಚಲ ಪ್ರದೇಶದ (Arunachal Pradesh) ಗಡಿಯಿಂದ 4.5 ಕಿ.ಮೀ. ಒಳಗೆ ನುಸುಳಿ 100 ಮನೆಗಳ ಹಳ್ಳಿಯನ್ನು ಚೀನಾ (China) ನಿರ್ಮಿಸಿದೆ ಎಂಬ ಅಮೆರಿಕದ ರಕ್ಷಣಾ ಸಚಿವಾಲಯದ ವರದಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಚೀನಾಕ್ಕೆ ನೀಡಿದ್ದ ‘ಕ್ಲೀನ್‌ಚಿಟ್‌’ ವಾಪಸ್‌ ಪಡೆಯಬೇಕು ಹಾಗೂ ದೇಶವನ್ನು ದಾರಿತಪ್ಪಿಸಿದ್ದಕ್ಕಾಗಿ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್‌ ಪಕ್ಷ ಆಗ್ರಹಿಸಿದೆ.

17 ತಿಂಗಳ ಹಿಂದೆಯೇ ಅರುಣಾಚಲದ ಬಿಜೆಪಿ ಸಂಸದ ತಪಿರ್‌ ಗಾವ್‌ ಅವರು ಚೀನಾದವರು ಭಾರತದ ಗಡಿಯೊಳಕ್ಕೆ ನುಸುಳಿದ್ದಾರೆಂದು ಪ್ರಧಾನಿಗೆ ಪತ್ರ ಬರೆದಿದ್ದರು. ಆದರೆ, ಪ್ರಧಾನಿ ಮತ್ತು ಗೃಹ ಸಚಿವರು (Home Minister) ಅದನ್ನು ಅಲ್ಲಗಳೆದು ಚೀನಾಕ್ಕೆ ಕ್ಲೀನ್‌ಚಿಟ್‌ ನೀಡಿದ್ದರು. ಅದು ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯ. ಏಕೆಂದರೆ, ಅವರಿಬ್ಬರ ಹೇಳಿಕೆಯನ್ನೇ ಚೀನಾ ತನ್ನ ತಪ್ಪು ಮುಚ್ಚಿಕೊಳ್ಳಲು ಜಗತ್ತಿನಾದ್ಯಂತ ಉಲ್ಲೇಖಿಸುತ್ತಿದೆ ಎಂದು ಕಾಂಗ್ರೆಸ್ ದೂರಿದೆ.

Follow Us:
Download App:
  • android
  • ios