ಕೆನಡಾದಲ್ಲಿ ಭಗವದ್ಗೀತಾ ಪಾರ್ಕ್ ಚಿಹ್ನೆ ಧ್ವಂಸ: ಭಾರತ ಖಂಡನೆ
ಕೆನಡಾದ ಬ್ರಾಂಪ್ಟನ್ನಲ್ಲಿ ಇತ್ತೀಚೆಗೆ ಅನಾವರಣಗೊಳಿಸಿದ ‘ಶ್ರೀ ಭಗವದ್ಗೀತಾ ಪಾರ್ಕ್’ ಅನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಭಾರತ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಟೊರೊಂಟೊ: ಕೆನಡಾದ ಬ್ರಾಂಪ್ಟನ್ನಲ್ಲಿ ಇತ್ತೀಚೆಗೆ ಅನಾವರಣಗೊಳಿಸಿದ ‘ಶ್ರೀ ಭಗವದ್ಗೀತಾ ಪಾರ್ಕ್’ ಅನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಭಾರತ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಮೊದಲಿಗೆ ಟ್ರೋಯರ್ಸ್ ಪಾರ್ಕ್ ಎನ್ನಲಾಗುತ್ತಿದ್ದ ಈ ಉದ್ಯಾನವನಕ್ಕೆ ಶ್ರೀ ಭಗವದ್ಗೀತಾ ಪಾರ್ಕ್ ಎಂದು ಮರುನಾಮಕರಣ ಮಾಡಿ, ಸೆ.28ರಂದು ಅನಾವರಣಗೊಳಿಸಲಾಗಿತ್ತು. ಆದರೆ ಭಾನುವಾರ ಕಿಡಿಗೇಡಿಗಳು ಪಾರ್ಕಿನ ಚಿಹ್ನೆಯನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ. ಕೆನಡಾದಲ್ಲಿ ದೇವಾಲಯವೊಂದಕ್ಕೆ ಹಾನಿ ಮಾಡಿದ ಮಾರನೇ ದಿನವೇ ಇಂತಹ ಘಟನೆ ವರದಿಯಾಗಿದ್ದು ಕಳವಳಕ್ಕೆ ಕಾರಣವಾಗಿದೆ.
ಈ ವಿಚಾರವನ್ನು ಬ್ರಾಂಪ್ಟನ್ (Brampton) ಮೇಯರ್ ಆಗಿರುವ ಪೆಟ್ರಿಕ್ ಬ್ರೌನ್ ಅವರು ಖಚಿತಪಡಿಸಿದ್ದಾರೆ. ಇಂತಹ ಕತ್ಯಗಳ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದೇವೆ. ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದು, ಪಾರ್ಕ್ ನಿರ್ವಹಣೆ ವಿಭಾಗದವರು ಧ್ವಂಸಗೊಂಡ ಚಿಹ್ನೆಯನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ಭಾರತದಿಂದ ಖಂಡನೆ:
ಈ ಹಿನ್ನೆಲೆಯಲ್ಲಿ ಕೆನಡಾದಲ್ಲಿರುವ ಭಾರತದ ಹೈಕಮಿಷನ್ (High Commission of India) ‘ಬ್ರಾಂಪ್ಟನ್ನ ದ್ವೇಷ ಕೃತ್ಯವನ್ನು ನಾವು ಕಂಡಿಸುತ್ತೇವೆ. ಕೆನಡಾದ (Canada) ಪೊಲೀಸ್ ಹಾಗೂ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ’ ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಇದರ ಬೆನ್ನಲ್ಲೇ ಕೆನಡಾ ಪೊಲೀಸರು ಪಾರ್ಕಿನ ಚಿಹ್ನೆಗೆ ಹಾನಿಯಾಗಿಲ್ಲ. ಅಲ್ಲಿ ರಿಪೇರಿ ಕಾರ್ಯ ನಡೆಯುತ್ತಿದೆ. ಶೀಘ್ರ ಶಾಶ್ವತವಾಗಿರುವ ಪಾರ್ಕ್ ಚಿಹ್ನೆ ಅಳವಡಿಸಲಾಗುವುದು ಎಂದಿದ್ದಾರೆ.