ಇನ್ನು 7 ವರ್ಷಗಳಲ್ಲಿ ಮಾನವನಿಗೆ ಅಮರತ್ವ ದೊರಕಲಿದೆ ಎಂದು ಗೂಗಲ್‌ ಮಾಜಿ ಎಂಜಿನಿಯರ್‌, ಖ್ಯಾತ ಟೆಕ್ಕಿ ರೇ ಕುಜ್‌ರ್‍ವೀಲ್‌ ಭವಿಷ್ಯ ನುಡಿದಿದ್ದಾರೆ. 2045ರ ವೇಳೆಗೆ ಮಾನವ, ಯಂತ್ರಗಳ ಬುದ್ದಿಮತ್ತೆ ವಿಲೀನವಾಗಿ ಏಕತ್ವ ರಚನೆಯಾಗಲಿದೆ ಎಂದೂ ಹೇಳಲಾಗಿದೆ. 

ನವದೆಹಲಿ (ಏಪ್ರಿಲ್ 3, 2023): ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು ಮನುಕುಲಕ್ಕೆ ಅಪಾಯ ತಂದೊಡ್ಡಲಿವೆ. ಹೀಗಾಗಿ ಕನಿಷ್ಠ ಮುಂದಿನ 6 ತಿಂಗಳ ಕಾಲ ಅವುಗಳ ಮೇಲಿನ ಹೊಸ ಪ್ರಯೋಗಕ್ಕೆ ತಡೆ ಹೇರಬೇಕು ಎಂಬ ಜಾಗತಿಕ ಒತ್ತಾಯದ ನಡುವೆಯೇ, ತಂತ್ರಜ್ಞಾನದ ನೆರವಿನಿಂದಿಗೆ ಮಾನವ ಇನ್ನು ಕೇವಲ 7 ವರ್ಷಗಳಲ್ಲಿ ಅಮರತ್ವ ಪಡೆದುಕೊಳ್ಳಲಿದ್ದಾನೆ. ಜೊತೆಗೆ 2045ರ ವೇಳೆಗೆ ಮಾನವ ಮತ್ತು ಯಂತ್ರಗಳ ಬುದ್ದಿಮತ್ತೆ ವಿಲೀನದೊಂದಿಗೆ ಏಕತ್ವ ರಚನೆಯಾಗಿದೆ ಎಂದು ಗೂಗಲ್‌ನ ಮಾಜಿ ಎಂಜಿನಿಯರ್‌ ರೇ ಕುಜ್‌ರ್‍ವೀಲ್‌ (75) ಭವಿಷ್ಯ ನುಡಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭವಿಷ್ಯದ ತಂತ್ರಜ್ಞಾನಗಳು, ಸಾಧ್ಯತೆಗಳ ಕುರಿತು ರೇ ಈ ಹಿಂದೆ ಆಡಿದ್ದ ಹಲವು ಮಾತುಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. 1999ರಲ್ಲಿ ಮನುಷ್ಯರು ಮನೆಯ ಕಂಪ್ಯೂಟರ್‌ಗಳಿಂದಲೇ ತಮಗೆ ಬೇಕಾದ ರೀತಿಯಲ್ಲಿ ಬಟ್ಟೆಯನ್ನು ಡಿಸೈನ್‌ ಮಾಡಿಕೊಳ್ಳಬಹುದು, 2000ರ ವೇಳೆಗೆ ವಿಶ್ವದ ಪ್ರಸಿದ್ಧ ಚೆಸ್‌ ಆಟಗಾರರನ್ನು ಕಂಪ್ಯೂಟರ್‌ ಸೋಲಿಸಲಿದೆ ಎಂಬ ರೇ ಭವಿಷ್ಯಗಳು ನಿಜವಾಗಿವೆ. ರೇ ಅವರ ಹಿಂದಿನ ಹೇಳಿಕೆಗಳನ್ನು ಒಳಗೊಂಡ ವಿಡಿಯೋಗಳು ಇದೀಗ ಮತ್ತೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿವೆ.

ಇದನ್ನು ಓದಿ: AI ಬಗ್ಗೆ ಇರಲಿ ಎಚ್ಚರ: ಚಾಟ್‌ಜಿಪಿಟಿಯಂತಹ ಆ್ಯಪ್ ಗೀಳಿಗೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ..!

ರೇ ವಾದ ಏನು?:
2005ರಲ್ಲಿ ರೇ ಬರೆದಿದ್ದ ‘ದ ಸಿಂಗ್ಯುಲಾರಿಟಿ ಈಸ್‌ ನಿಯರ್‌’ ಪುಸ್ತಕದಲ್ಲಿ 2030ರ ವೇಳೆಗೆ ಮಾನವ ಅಮರತ್ವ ಪಡೆದುಕೊಳ್ಳಲಿದ್ದಾನೆ ಎಂದು ವಿವರಿಸಿದ್ದರು. ಅವರ ಲೆಕ್ಕಾಚಾರದ ಅನ್ವಯ, ಆನುವಂಶಿಕತೆ, ರೋಬೋಟಿಕ್ಸ್‌ ಮತ್ತು ನ್ಯಾನೋ ಟೆಕ್ನಾಲಜಿ ಕ್ಷೇತ್ರದಲ್ಲಿ ಸದ್ಯ ಆಗಿರುವ ಅತ್ಯಾಧುನಿಕ ಸಂಶೋಧನೆಗಳು ಮಾನವನ ಅಮರತ್ವಕ್ಕೆ ಕಾರಣವಾಗಲಿದೆ. ಅಂದರೆ ಹೊಸ ಮೈಕ್ರೋಸ್ಕೋಪಿಕ್‌ ರೋಬೋಟ್‌ಗಳನ್ನು ನಮ್ಮ ದೇಹದ ಸಣ್ಣ ಸಣ್ಣ ಜೀವಕೋಶಗಳ ಮಟ್ಟಕ್ಕೂ ರವಾನಿಸಿ ದೇಹಕ್ಕೆ ಆಗುವ ಮುಪ್ಪು ಮತ್ತು ಕಾಯಿಲೆಗಳನ್ನು ತಡೆಗಟ್ಟುವ ಕೆಲಸ ಆಗಲಿದೆ. ಜೊತೆಗೆ ನ್ಯಾನೋ ಟೆಕ್ನಾಲಜಿಯು, ಮಾನವ ತನಗೆ ಬೇಕಾದ ವಸ್ತುಗಳನ್ನು ಸೇವಿಸಿದ ಹೊರತಾಗಿಯೂ ತೆಳ್ಳಗೆ ಮತ್ತು ಶಕ್ತಿಶಾಲಿಯಾಗಿ ಜೀವಿಸಲು ಅವಕಾಶ ಮಾಡಿಕೊಡಲಿದೆ.

ಏಕತ್ವ:
ಇನ್ನು 2029ರ ವೇಳೆಗೆ ಕೃತಕ ಬುದ್ಧಿಮತ್ತೆಯು, ಮಾನವರ ಬುದ್ಧಿಮತ್ತೆಯನ್ನು ಮೀರಿಸಲಿದೆ. 2045ರ ವೇಳೆಗೆ ಕೃತಕ ಬುದ್ಧಿಮತ್ತೆ ಮತ್ತು ಮಾನವರ ಬುದ್ದಿಮತ್ತೆ ವಿಲೀನವಾಗಿ ನಮ್ಮ ಬುದ್ಧಿಮತ್ತೆ ಶತಕೋಟಿ ಪಟ್ಟು ಹೆಚ್ಚುತ್ತದೆ. ಮಾನವ ಮತ್ತು ತಂತ್ರಜ್ಞಾನದ ವಿಲೀನವನ್ನು ನಾವು ಏಕತ್ವವೆಂದು ಪರಿಗಣಿಸಬಹುದು ಎಂದು ರೇ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿಗೆ ಕೋರ್ಟಲ್ಲಿ ChatGPT ಬಳಕೆ: ಜಾಮೀನು ತೀರ್ಪಿನ ವೇಳೆ ಕೃತಕ ಬುದ್ಧಿಮತ್ತೆ ಅಭಿಪ್ರಾಯ ಪಡೆದ ಹೈಕೋರ್ಟ್‌