Asianet Suvarna News Asianet Suvarna News

ಇಂಡಿ ಜಿಲ್ಲೆಗಾಗಿ ಪಣ ತೊಟ್ಟಿರುವ ಶಾಸಕ ಯಶವಂತರಾಯ ಗೌಡ ಪಾಟೀಲ

ಇಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿಸಲು ತಾಲೂಕಿನಾದ್ಯಂತ ಹೋರಾಟದ ಕಿಚ್ಚು ಹೊತ್ತಿಸಿ, ಅದಕ್ಕೊಂದು ಸ್ವರೂಪ ನೀಡುವ ನಿಟ್ಟಿನಲ್ಲಿ ಸತತ ಪ್ರಯತ್ನಿಸುತ್ತಿರುವ ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ| 30 ವರ್ಷಗಳವರೆಗೆ ನಿಂತಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಆಯ್ಕೆಯಾದ ಮೇಲೆ ಪುನಾರಂಭಿಸಿ ರೈತರ ಆಸ್ತಿಯನ್ನಾಗಿ ಮಾಡಿಯೇ ತೀರುತ್ತೇನೆ ಎಂದು ಜನತೆಗೆ ಭರವಸೆ ನೀಡುವ ಜತೆಗೆ ಶಪಥ ಮಾಡಿದ್ದರು| ಅದರಂತೆ ಕೊಟ್ಟ ಭರವಸೆ ಈಡೇರಿಸಲು ಬೇತಾಳನಂತೆ ಬೆನ್ನುಹತ್ತಿ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿಯೇ ಬಿಟ್ಟರು|

MLA Yashvantaraya Gouda Patil Main Aim to Creation of Indi District
Author
Bengaluru, First Published Oct 10, 2019, 11:10 AM IST

ಖಾಜು ಸಿಂಗೆಗೋಳ 

ಇಂಡಿ(ಅ.10): ಇಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿಸಲು ತಾಲೂಕಿನಾದ್ಯಂತ ಹೋರಾಟದ ಕಿಚ್ಚು ಹೊತ್ತಿಸಿ, ಅದಕ್ಕೊಂದು ಸ್ವರೂಪ ನೀಡುವ ನಿಟ್ಟಿನಲ್ಲಿ ಸತತ ಪ್ರಯತ್ನಿಸುತ್ತಿರುವ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯ ಗೌಡ ಪಾಟೀಲ ಗುರಿ ತಲುಪುವವರೆಗೂ ಬಿಡದ ಛಲಗಾರರಾಗಿದ್ದಾರೆ. 

ಉದಾಹರಣೆ ಎಂಬಂತೆ, ಬಾರಾಕಮಾನದಂತೆ 30 ವರ್ಷಗಳವರೆಗೆ ನಿಂತಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಆಯ್ಕೆಯಾದ ಮೇಲೆ ಪುನಾರಂಭಿಸಿ ರೈತರ ಆಸ್ತಿಯನ್ನಾಗಿ ಮಾಡಿಯೇ ತೀರುತ್ತೇನೆ ಎಂದು ಜನತೆಗೆ ಭರವಸೆ ನೀಡುವ ಜತೆಗೆ ಶಪಥ ಮಾಡಿದ್ದರು. ಅದರಂತೆ ಕೊಟ್ಟ ಭರವಸೆ ಈಡೇರಿಸಲು ಬೇತಾಳನಂತೆ ಬೆನ್ನುಹತ್ತಿ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿಯೇ ಬಿಟ್ಟರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಂಡಿ-ಸಿಂದಗಿ ಭಾಗದ ಕಬ್ಬು ಬೆಳೆಗಾರರಿಗೆ ಅನುಕೂಲ ಕಲ್ಪಿಸಿಯೇ ಬಿಟ್ಟರು. ಅದೆ ರೀತಿಯಾಗಿ ಪ್ರಚಲಿತ ದಿನದಲ್ಲಿ ಇಂಡಿ ಜಿಲ್ಲಾ ಕೇಂದ್ರವಾಗಬೇಕು. ಜಿಲ್ಲಾ ಕೇಂದ್ರವಾಗುವಾಗ ಇಂಡಿಗೆ ಅನ್ಯಾಯವಾದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು ಹೇಳಿ ಮತ್ತೊಂದು ಗುರಿಯತ್ತ ಚಿತ್ತ ಹರಿಸಿದ್ದು, ಇದು ಜನರಲ್ಲಿ ಅಚಲ ಆಶಾಭಾವ ಮೂಡಿಸಿದೆ. 

ಶೈಕ್ಷಣಿಕ ಕ್ರಾಂತಿ ಮಾಡಿದ ಮೊದಲ ಶಾಸಕ 

ಲಿಂಬೆಯ ನಾಡು, ಬರದ ಬೀಡು ಎಂಬ ಶಿರೋ ನಾಮೆ ಹೊತ್ತುಕೊಂಡಿರುವ ಇಂಡಿ ಮತಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಮೊದಲ ಶಾಸಕ ಎಂಬ ಹೆಸರು ಪಡೆದುಕೊಂಡಿದ್ದಾರೆ. ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳು ಜೋಳಿಗೆಯ ಮೂಲಕ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದರೆ, ರಾಜಕೀಯ ಚಾಣಾಕ್ಷತೆಯಿಂದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹತ್ತಿರದ ಶಾಸಕರಾಗಿ ಮತಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಶೈಕ್ಷಣಿಕ ಪ್ರಗತಿ ಸಾಧಿಸಿದ್ದಾರೆ. ಸ್ವಾತಂತ್ರ್ಯ ನಂತರದಲ್ಲಿ ತಾಲೂಕು ಕೇಂದ್ರದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಇಲ್ಲದ ತಾಲೂಕು ಇಂಡಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವುದನ್ನು ಶಾಸಕ ಯಶವಂತರಾಯಗೌಡ ಪಾಟೀಲ ಅವರ ಅವಧಿಯಲ್ಲಿ 70 ವರ್ಷದ ಕನಸಿನ ಕೂಸಾದ ಸರ್ಕಾರಿ ಪಿಯು ಕಾಲೇಜು ದೊರೆತಿರುವುದು ಹೆಮ್ಮೆಯ ಸಂಗತಿ. 

ಶರಣ ಸಂಪ್ರದಾಯ ಕುಟುಂಬದಿಂದ ಬಂದಿರುವ ಶಾಸಕ ಯಶವಂತರಾಯಗೌಡ ಪಾಟೀಲರು, ಸಾಮಾಜಿಕ ನ್ಯಾಯದಡಿಯಲ್ಲಿ ಸರ್ವರು ನಮ್ಮವರು ಎನ್ನುವ ಬಸವಣ್ಣನವರ ತತ್ವದ ಹಾದಿಯಲ್ಲಿ ಅಭಿವೃದ್ಧಿ ಪಥದಲ್ಲಿ ನಡೆದಿದ್ದಾರೆ. ಬಡವರು, ಹಿಂದುಳಿದವರು, ಶೋಷಣೆಗೆ ಒಳಗಾದವರು, ನೊಂದವರ ಬಗ್ಗೆ ಸದಾ ಕಳಕಳಿ ಹೊಂದಿರುವ ಇವರ ತಂದೆ ದಿ.ವಿಠಲಗೌಡ ಪಾಟೀಲ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ. 

ಭೀಮಾತೀರ ಪುಣ್ಯವಂತರ ನಾಡು

ಭೀಮಾತೀರ ಹಂತಕರ ನಾಡು ಎಂಬ ಶಿರೋನಾಮೆಯನ್ನು ಅಳಿಸಿ, ಭೀಮಾತೀರ ಪುಣ್ಯವಂತರ ನಾಡು, ಶರಣರು, ಸಂತರು, ಚಿಂತಕರು, ಮಹಾನ್ ನಾಯಕರ ಬೀಡು ಎಂಬುದನ್ನು ಅಭಿವೃದ್ಧಿ ಮಂತ್ರದ ಮೂಲಕ ತೋರಿಸಿಕೊಡುವುದರಲ್ಲಿ ಶ್ರಮಿಸುತ್ತಿದ್ದಾರೆ. ಜಾತ್ಯತೀತ, ಪಕ್ಷಾತೀತ ವ್ಯಕ್ತಿತ್ವ ಹೊಂದಿದ ಹೃದಯ ಶ್ರೀಮಂತಿಕೆ ಹೊಂದಿದವರು. ಮತಕ್ಷೇತ್ರದಲ್ಲಿ ಸದಾ ಅಭಿವೃದ್ಧಿ ಚಿಂತನೆಯನ್ನು ಮೊಳಗಿಸುತ್ತ ಹಿಂದೆಂದೂ ಮಾಡದ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸಿದ್ದಾರೆ.

10 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣ

10 ಕೋಟಿ ವೆಚ್ಚದಲ್ಲಿ ಉತ್ತರ ಕರ್ನಾಟಕದಲ್ಲಿಯೇ ಪ್ರಥಮವಾಗಿರುವಂತೆ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿದ್ದಾರೆ. ತಾಲೂಕು ಕ್ರೀಡಾಂಗಣ, ಪ್ರತಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕಗಳು, ಬಹುಹಳ್ಳಿ ಕುಡಿಯುವ ನೀರಿನ ಯೋಜನೆ, ಕೆರೆ ತುಂಬಿಸುವ ಯೋಜನೆ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಮೂಲಕ ಮತಕ್ಷೇತ್ರದ ಗ್ರಾಮಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ಅವಿರತ ಹೋರಾಟ ಮಾಡಿದ್ದಾರೆ. 

ಇಂಡಿ ಪಟ್ಟಣದಲ್ಲಿ ಸುಮಾರು 10 ವರ್ಷಗಳಿಂದ ಆರಂಭವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ವಂತ ಕಟ್ಟಡ ಇಲ್ಲದೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿತ್ತು. ಶಾಸಕರಾದ ಮೇಲೆ ಈ ಕಾಲೇಜಿಗೆ 2 ಎಕರೆ, ಆದರ್ಶ ವಿದ್ಯಾಲಯಕ್ಕೆ 2 ಎಕರೆ, ಸರ್ಕಾರಿ ಐಟಿಐ ಕಾಲೇಜಿಗೆ 2, ಉರ್ದು ಪ್ರೌಢಶಾಲೆ, ಅಲ್ಪಸಂಖ್ಯಾತರ ವಸತಿ ನಿಲಯಕ್ಕೆ ನಿವೇಶನ (ಜಾಗ) ಒದಗಿಸಿ, ಶೈಕ್ಷಣಿಕ ಪ್ರೇಮ ಮೆರೆದಿದ್ದಾರೆ. ಝಳಕಿಯಲ್ಲಿ ಪಾಲಿಟೆಕ್ನಿಕ್, ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜುಗಳಿಗೆ ಹಾಗೂ ನಿವೇಶನ ದೊರಕಿಸಿ, ಕಟ್ಟಡ ನಿರ್ಮಿಸಲು ಶ್ರಮಿಸಿದ್ದಾರೆ. 

24/7 ಶುದ್ಧ ಕುಡಿಯುವ ನೀರಿನ ಯೊಜನೆ 

ಹೆಲಿಪ್ಯಾಡ್, ನಗರಾಭಿವೃದ್ಧಿ, ಬಾಂದಾರ್, ಮುಖ್ಯ ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಲಿಂಬೆ ಅಭಿವೃದ್ಧಿ ಮಂಡಳಿ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆಯ ಡಿಡಿ 2, ಗ್ರಾಮೀಣ ಪೊಲೀಸ್ ಠಾಣೆ, ನಿವೇಶನ ರಹಿತ ಬಡವರಿಗೆ ನಿವೇಶನ, ಖೇಡಗಿ, ಹಿರೇಮಸಳಿ ಗ್ರಾಮದ ಬಳಿ 110 ವಿದ್ಯುತ್ ವಿತರಣಾ ಉಪಕೇಂದ್ರ, ತಲಾ ಒಂದು ಕೋಟಿ ವೆಚ್ಚ ದಲ್ಲಿ ಅಂಬೇಡ್ಕರ, ದಿ. ದೇವರಾಜ ಅರಸ, ಸೇವಾಲಾಲ ಭವನ ಹಾಗೂ ಬಾಬು ಜಗಜೀವನರಾಮ, ವಾಲ್ಮೀಕಿ, ಹರಳಯ್ಯ, ಕನಕ ಭವನಗಳು ಹೀಗೆ ತಾಲೂಕಿನಲ್ಲಿ ಆಗಬೇಕಾಗಿದ್ದ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸಿದ್ದಾರೆ. ಇಂಡಿ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಭೀಮಾನದಿಯಿಂದ 24/7 ಶುದ್ಧ ಕುಡಿಯುವ ನೀರಿನ ಯೊಜನೆ ಜಾರಿಗೊಳಿಸಿದ್ದು, ಜನವರಿ ಮೊದಲ ವಾರದಲ್ಲ ಲೋಕಾರ್ಪಣೆಗೊಳ್ಳುತ್ತದೆ. 

ಈ ಬಗ್ಗೆ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ ಅವರು, ಇಂಡಿ ಬದುಕಿನಲ್ಲಿ ದೊರೆಯುವ ಯಶಸ್ಸು, ಕೀರ್ತಿಗಳಿಗೆ ಅವಕಾಶ ಮತ್ತು ಅದೃಷ್ಟ ಮಾತ್ರ ಕಾರಣವಾಗಿರುವುದಿಲ್ಲ. ಅದರ ಹಿಂದೆ ನಿರಂತರ ಪ್ರಯತ್ನ, ಏಕಾಗ್ರತೆ, ಪೂರ್ಣ ಮನಸ್ಸಿನಿಂದ ಕಾರ್ಯನಿರ್ವಹಿಸುವ ಬುದ್ಧಿ ಇವುಗಳೂ ಪ್ರಮುಖವಾಗಿರುತ್ತದೆ. ನನ್ನ ಯಶಸ್ಸು ಹಾಗೂ ಕ್ಷೇತ್ರದ ಅಭಿವೃದ್ಧಿಯ ಹಿಂದೆ ಕ್ಷೇತ್ರದ ಮತದಾರರ ಆಶೀರ್ವಾದ ಅಡಗಿದೆ. ಇಂಡಿ ತಾಲೂಕಿನ ಜನತೆ ಹಾಗೂ ಶರಣರ ಆಶೀರ್ವಾದ ಇರುವವರೆಗೆ ಜನಸೇವೆಯಲ್ಲಿ ಮುನ್ನುಗ್ಗುತ್ತೇನೆ ಎಂದು ಹೇಳಿದ್ದಾರೆ. 

Follow Us:
Download App:
  • android
  • ios