Asianet Suvarna News Asianet Suvarna News

'ಕಾಂಗ್ರೆಸ್ಸಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ'

ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಶಾಸಕ ಎ.ಎಸ್‌.ಪಾಟೀಲ (ನಡಹಳ್ಳಿ)| ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 2009ರಲ್ಲಿ ನೆರೆ ಪ್ರವಾಹಕ್ಕೆ ತುತ್ತಾದಾಗ ಯಡಿಯೂರಪ್ಪನವರು ಹಲವು ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸುವಂತಹ ಕೆಲಸ ಮಾಡಿದ್ದಾರೆ| ಏಳು ದಶಕಗಳವರೆಗೆ ಆಡಳಿತದಲ್ಲಿದ್ದ ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗಬೇಕು| 

Congress Leaders Should be Introspection:MLA AS Patil Nadahalli
Author
Bengaluru, First Published Oct 9, 2019, 11:07 AM IST

ತಾಳಿಕೋಟೆ(ಅ.9): ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 2009ರಲ್ಲಿ ನೆರೆ ಪ್ರವಾಹಕ್ಕೆ ತುತ್ತಾದಾಗ ಯಡಿಯೂರಪ್ಪನವರು ಹಡಗಿನಾಳ, ಬೋಳವಾಡ, ಬೂದಿಹಾಳ, ಸಾತಿಹಾಳ, ನಾಗರಾಳ ಡೋಣ, ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸುವಂತಹ ಕೆಲಸ ಮಾಡಿದ್ದಾರೆ. ಏಳು ದಶಕಗಳವರೆಗೆ ಆಡಳಿತದಲ್ಲಿದ್ದ ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗಬೇಕು ಎಂದು ಶಾಸಕ ಎ.ಎಸ್‌.ಪಾಟೀಲ(ನಡಹಳ್ಳಿ) ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏಳು ದಶಕಗಳಲ್ಲಿ ಒಂದೇ ಒಂದು ಹಳ್ಳಿ ಸ್ಥಳಾಂತರ ಮಾಡಿರುವುದನ್ನು ತೋರಿಸಲಿ. ಕೇವಲ ಬೊಗಳೆ ಹೇಳಿಕೆಗಳ ಮೂಲಕ ಚರ್ಚೆ ಮಾಡಲು ಹೊರಟಿರುವ ಕಾಂಗ್ರೆಸ್ಸಿಗರು ತಮ್ಮ 7 ದಶಕಗಳ ನೆರೆಪ್ರವಾಹಕ್ಕೆ ಕೊಡುಗೆ ಏನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ನೆರೆ ಪ್ರವಾಹ ಎಂಬುದು ಈ ವರ್ಷಕ್ಕೆ ಸೀಮಿತವಾಗಿಲ್ಲ 7 ದಶಕಗಳಿಂದ ನೆರೆ ಪ್ರವಾಹ ಎದುರಿಸಿದ್ದೇವೆ. 60 ವರ್ಷಗಳಿಂದ ಕೇಂದ್ರದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ಸಿಗರು ನೆರೆ ಪರಿಹಾರ ರಾಜ್ಯಕ್ಕೆ ಎಷ್ಟುಕೊಟ್ಟಿದ್ದಾರೆ ಮತ್ತು ಒಂದೇ ಒಂದು ಹಳ್ಳಿ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಿದ್ದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನೆರೆ ಬಂದಾಗೊಮ್ಮೆ ರಾಜ್ಯಕ್ಕೆ 200 ಕೋಟಿ, 300 ಕೋಟಿ, ಕೊನೆಯದಾಗಿ 400 ಕೋಟಿ ಕೊಟ್ಟದಾಖಲೆ ಇದೆ. ಆದರೆ ಈ ವರ್ಷ ನೆರೆ ಬಂದ ಪ್ರದೇಶದ ಪ್ರತಿಯೊಂದು ಮನೆಯ ಕುಟುಂಬದವರಿಗೆ ರಾಜ್ಯ ಸರ್ಕಾರ ತಕ್ಷಣ 10 ಸಾವಿರ ನೀಡಿದೆ ಮತ್ತು ಹಾನಿಯಾದ ಮನೆಯ ದುರಸ್ತಿಗೆ 1 ಲಕ್ಷ, ಸಂಪೂರ್ಣ ಬಿದ್ದ ಮನೆ ಕಟ್ಟಿಸಿಕೊಳ್ಳಲು 5 ಲಕ್ಷ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಕೇಂದ್ರದಿಂದ ಪ್ರತಿ ಬಾರಿಯೂ ನೆರೆ ಪರಿಹಾರ ಗಮನಿಸಿದರೆ ರಾಜ್ಯದಲ್ಲಿಯ ವಾಸ್ತವ ಸಂಗತಿಯ ವರದಿ ತರಿಸಿಕೊಂಡು 7 ದಶಕಗಳಲ್ಲಿ ಕೊಡಲಾರದಂತಹ ಹಣವನ್ನು ಪ್ರಧಾನಿ ಮೋದಿ 1200 ಕೋಟಿ ಬಿಡುಗಡೆ ಮಾಡಿ ಕರ್ನಾಟಕ ಜನರ ಮೇಲಿನ ಪ್ರೀತಿ ತೋರಿದ್ದಾರೆ ಎಂದು ಶ್ಲಾಘಿಸಿದರು.

ನೆರೆ ಮತ್ತು ಬರ ಎಂಬುದು ಕೇವಲ ಈ ವರ್ಷಕ್ಕೆ ಮಾತ್ರ ಸೀಮೀತವಾದುದ್ದಲ್ಲ. ಅದು ಸುಮಾರು 7 ದಶಕಗಳಿಂದ ಆವರಿಸುತ್ತಾ ಬಂದಿದ್ದಾಗಿದೆ. ಈ ವಿಚಾರವಾಗಿ ಯಾವ ಯಾವ ಸರ್ಕಾರಗಳು ಆಡಳಿತದಲ್ಲಿದ್ದಾಗ ಎಷ್ಟು ಸ್ಪಂದಿಸುತ್ತಾ ಬಂದಿವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.

2004 ಹಾಗೂ 2009ರಲ್ಲಿಯೂ ಇಂತಹ ನೆರೆ ಪ್ರವಾಹ ಮತ್ತು ಬರ ಎದುರಿಸಿದ್ದೇವೆ. ಆ ಸಮಯದಲ್ಲಿ ಕೇಂದ್ರದಲ್ಲಿ ಮನಮೋಹನಸಿಂಗ್‌ ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗ ಕೇವಲ 300 ಕೋಟಿ ಪರಿಹಾರ ರಾಜ್ಯಕ್ಕೆ ನೀಡಿದ್ದಾರೆ. ಆದರೆ 2009ರಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿಯ ಮುಖ್ಯಮಂತ್ರಿ ಯಡಿಯೂರಪ್ಪ ನೆರೆ ಬಂದ 160 ಗ್ರಾಮ ಸ್ಥಳಾಂತರಿಸಿ ಪುನರ್ವಸತಿ ಗ್ರಾಮಗಳನ್ನಾಗಿ ನಿರ್ಮಾಣ ಮಾಡಿ ಅವರಿಗೆ ಮೂಲಭೂತ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ ಎಂದರು.
ಸಿಎಂ ಯಡಿಯೂರಪ್ಪ ಮೊನ್ನೆ ಆಲಮಟ್ಟಿಯಲ್ಲಿ ಬಾಗಿನ ಅರ್ಪಣೆಗೆ ಬಂದಾಗ 3ನೇ ಹಂತದ ನೀರಾವರಿ ಯೋಜನೆಗಳ ಕಾರ್ಯಗತಕ್ಕೆ ಪ್ರತಿವರ್ಷ 20 ಸಾವಿರ ಕೋಟಿ ಬಜೆಟ್‌ನಲ್ಲಿ ತೆಗೆದಿಟ್ಟು ಕಾರ್ಯಗತಗೊಳಿಸುತ್ತೇನೆ ಎಂದು ಈ ಭಾಗದ ಜನರಲ್ಲಿಯಲ್ಲಿ ಆಶಾಭಾವನೆ ಮೂಡಿಸಿದ್ದಾರೆ ಎಂದರು.

2009ರಲ್ಲಿ ಹೊಸಪೇಟೆಯಿಂದ-ಕೂಡಲಸಂಗಮದ ವರೆಗೆ ಪಾದಯಾತ್ರೆ ಮಾಡಿದ ಕಾಂಗ್ರೆಸ್‌ ನಾಯಕರು ಗುಡಿಯಲ್ಲಿ ಟೆಂಗಿನಕಾಯಿ ಇಟ್ಟು ಆಣೆ ಪ್ರಮಾಣ ಮಾಡಿ ಈ ಭಾಗದ ನೀರಾವರಿ ಯೋಜನೆಗೆ ಪ್ರತಿವರ್ಷ 10 ಸಾವಿರ ಕೋಟಿ ಕೊಡ್ತೇವೆ ಎಂದು ಹೇಳಿ ಈ ಭಾಗದ ಜನರಿಗೆ ವಂಚಿಸಿರುವುದು ಈ ಭಾಗದ ಜನರು ಇನ್ನೂ ಮರೆತ್ತಿಲ್ಲ ಎಂದರು.

ಬ್ರಿಜೇಶಕುಮಾರ ವರದಿ ಬಂದ ಮೇಲೆ ಕೃಷ್ಣಾಕೊಳ್ಳದ ನೀರಾವರಿ ಯೋಜನೆಗಳಿಗೆ ಮಂಜೂರಾತಿ ಕೊಟ್ಟು ಚಿಮ್ಮಲಗಿ ಮತ್ತು ಮುಳವಾಡ ಏತ ನೀರಾವರಿ ಯೋಜನೆಗಳಿಗೆ ಬಜೆಟ್‌ನಲ್ಲಿ ಮಂಜೂರಾತಿ ನೀಡಿ 2012 ರಲ್ಲಿ ಚಿಮ್ಮಲಗಿಗೆ .800 ಕೋಟಿ, ಮುಳವಾಡಕ್ಕೆ 1000 ಕೋಟಿ ಅಪೂ›ವಲ್‌ ನೀಡಿ ನೀರಾವರಿ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದು ಯಡಿಯೂರಪ್ಪನವರ ಸರ್ಕಾರವಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಆಡಳಿತಾತ್ಮಕ ಮಂಜೂರಾತಿ ಸಿಕ್ತು. ಸದಾನಂದ ಗೌಡ್ರು ಮುಖ್ಯಮಂತ್ರಿಯಾದಾಗ ಆರ್ಥಿಕ ಅನುಮೋದನೆ ಕೊಟ್ಟು ಟೆಂಡರ್‌ ಕರೆದು ಭೂಮಿಪೂಜೆ ನೆರವೇರಿಸಿದರು ಎಂದರು.

ಈಗ ಯಾರಾರ‍ಯರೋ ಭಗೀರಥರಾಗುತ್ತಿದ್ದಾರೆ:

ಈಗ ಯಾರಾರ‍ಯರೋ ಭಗೀರಥರಾಗುತ್ತಿದ್ದಾರೆ. ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗೆ ಅನುಮೊದನೆ ಕೊಟ್ಟವರಾರ‍ಯರು? ಅದಕ್ಕೆ ಹಣ ಬಿಡುಗಡೆ ಮಾಡಿದವರಾರ‍ಯರು? ನಿಜವಾದ ಭಗೀರಥರಾರ‍ಯರು? ಎಂಬುದು ಇಲ್ಲಿಯ ಜನಕ್ಕೆ ಗೊತ್ತಿದೆ. ಹಿಂದಿನ ಸರ್ಕಾರದಲ್ಲಿ ನಮ್ಮ ಜಿಲ್ಲೆಯವರೇ ನೀರಾವರಿ ಸಚಿವರಾಗಿದ್ದರು. ನಾರಾಯಣಪೂರ ಜಲಾಶಯದ ಹಿನ್ನೀರಿನಿಂದ ಪ್ರತಿವರ್ಷವೂ ಗ್ರಾಮಗಳು ಮುಳಗಡೆಯಾಗುತ್ತವೆ. ಆ ಪ್ರದೇಶಕ್ಕೆ ಒಂದು ದಿನವೂ ಭೇಟಿ ಕೊಟ್ಟು ಜನರ ಕಷ್ಟಕೇಳಲಿಲ್ಲ. 1 ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಗಬೇನಾಳ, ಬಿಜ್ಜೂರ ಪಂಚಾಯ್ತಿಗಳಲ್ಲಿಯ 16 ಗ್ರಾಮಗಳು ಬಾಧಿತವಾಗಿವೆ. ಆ ಗ್ರಾಮಗಳಿಗೆ ಇಲ್ಲಿಯವರೆಗೂ ಮೂಲಭೂತ ಸೌಕರ್ಯಗಳಿಲ್ಲ. 25 ವರ್ಷ ಅಲ್ಲಿಯ ಜನರು ಆಶೀರ್ವಾದ ಮಾಡಿದ್ದರು. ನಮ್ಮ ಜಿಲ್ಲೆಯವರೇ ನೀರಾವರಿ ಸಚಿವರಾಗಿದ್ದಾಗಲೂ ಒಂದು ದಿನವೂ ಬದುಕಿದ್ದಾರಾ? ಸತ್ತಿದ್ದಾರಾ? ಎಂದು ನೋಡಲಾಕ ಹೋಗಲಿಲ್ಲ. ಈಗ ಯಡಿಯೂರಪ್ಪನವರ ರಾಜೀನಾಮೆ ಕೇಳ್ತಾರೆ ಎಂದು ಪರೋಕ್ಷವಾಗಿ ಕಿಡಿಕಾರಿದರು.
 

Follow Us:
Download App:
  • android
  • ios