ಬ್ಯಾರೇಜ್‌ ಕಮ್‌ ಬ್ರಿಡ್ಜ್‌ ಜಲಾವೃತ್ತ| ರಸ್ತೆ ಸಂಚಾರ ಮತ್ತೆ ಸಂಪೂರ್ಣ ಸ್ಥಗಿತ| ಜನ ಜನುವಾರುಗಳು ತೊಂದರೆ| ಮಹಾರಾಷ್ಟ್ರದ ಉಜನಿ ಜಲಾಶಯದಿಂದ 1.16 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ| ತುಂಬಿ ತುಳುಕುತ್ತಿರುವ ಭೀಮೆಯ ಒಡಲು| 

ಮೋರಟಗಿ(ಅ.26): ಸಮೀಪದ ಬಗಲೂರ ಮತ್ತು ಅಫಜಲಪೂರ ತಾಲೂಕಿನ ಘತ್ತರಗಿ ಗ್ರಾಮದ ನಡುವೆ ನಿರ್ಮಿಸಲಾದ ಬ್ಯಾರೇಜ್‌ ಕಮ್‌ ಬ್ರಿಡ್ಜ್‌ ಶುಕ್ರ​ವಾರ ಜಲಾವೃತ್ತವಾಗಿದ್ದು ರಸ್ತೆ ಸಂಚಾರ ಮತ್ತೆ ಸಂಪೂರ್ಣ ಸ್ಥಗಿತವಾಗಿ ಜನ ಜನುವಾರುಗಳು ತೊಂದರೆ ಅನುಭವಿಸುವಂತಾಗಿದೆ.

Add Asianetnews Kannada as a Preferred SourcegooglePreferred

ಮಹಾರಾಷ್ಟ್ರದ ಉಜನಿ ಜಲಾಶಯದಿಂದ 1.16 ಲಕ್ಷ ಕ್ಯುಸೆಕ್‌ ನೀರು ಹರಿಬಿಟ್ಟಿದ್ದರಿಂದ ಮತ್ತೆ ಭೀಮೆಯ ಒಡಲು ತುಂಬಿ ತುಳುಕುತ್ತಿದೆ. ಕಳೆದ ಆಗ​ಸ್ಟ್‌​ನಲ್ಲಿ ಮಹಾರಾಷ್ಟ್ರದಲ್ಲೆಡೆ ಭಾರಿ ಮಳೆಯಾಗಿದ್ದರಿಂದ ನದಿ ಪಕ್ಕದಲ್ಲಿರುವ ಹೊಲಗದ್ದೆಗಳಲ್ಲಿನ ಬೆಳೆಗಳು ಸಂಪೂರ್ಣ ನಾಶವಾಗಿದ್ದವು, ಪಂಪಸೆಟ್‌ ಎಂಜಿ​ನ್‌​, ಮೋಟಾರ್‌ಗಳು ಮಾಯವಾಗಿದ್ದವು. ಅಲ್ಲದೆ ಶಿರಸಗಿ ಹಾವಳಗಿ ಸೇರಿ ನದಿ ಪಕ್ಕದಲ್ಲಿರುವ ಊರು ಒಳಗಡೆ ನೀರು ಸೇರಿ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯ​ಸ್ತ​ವಾ​ಗಿತ್ತು. ಈಗಲೂ ಅಂತಹದ್ದೇ ಸಂದರ್ಭ ಬಂದೊದಗಿದೆ. ಆದ್ದ​ರಿಂದ ಜಿಲ್ಲಾಡಳಿತ ಎಚ್ಚೆತ್ತು ಕ್ರಮ ಜರುಗಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರತಿ ಅಮಾವಾಸ್ಯೆಗೆ ಮಹಾರಾಷ್ಟ್ರ, ಆಂ​ಧ್ರಪ್ರದೇಶ, ಕರ್ನಾಟಕ ಸೇರಿದಂತೆ ಜನಸಾಗರ ಹರಿದು ಬಂದು ಘತ್ತರಗಿ ಭಾಗ್ಯವಂತಿ ದೇವಿ ದರ್ಶನ ಪಡೆದು ಪಾವನರಾಗುತ್ತಾರೆ. ಆದರೆ ರಾಜ್ಯದಲ್ಲಿ ಅತೀ ವಿಜೃಂಭಣೆಯಿಂದ ಆಚರಿಸುವ ದೀಪಾವಳಿ ಅಮಾವಾಸ್ಯೆಗೆ ಸಹಸ್ರಾರು ಜನಸಾಗರ ಗತ್ತರಗಿ ಭಾಗ್ಯವಂತಿದೇವಿ ದರ್ಶನಕ್ಕೆ ಆಗಮಿಸುವ ಸನ್ನಿಹಿತ​ವಿದ್ದು ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದಾದರೆ ದೇವಿಯ ದರ್ಶನ ಸುಗಮವಾಗಿ ನಡೆ​ಯ​ಲಿದೆ ಎಂದು ಭಕ್ತರು ಹೇಳಿದ್ದಾರೆ. 

ಮಹಾರಾಷ್ಟ್ರದ ಉಜನಿ ಜಲಾಶಯದಿಂದ 1.16 ಲಕ್ಷ ಕ್ಯುಸೆಕ್‌ ನೀರು ಹರಿ ಬಿಟ್ಟಿದ್ದು, ರಾತ್ರಿ ಮಳೆಯಗುವ ಸಂಭವವಿದ್ದು ಮತ್ತೆ ನೀರು ಹರಿಬಿಡುವ ಸಾಧ್ಯತೆವಿದೆ. ಸಾರ್ವಜನಿಕರನ್ನು ಎಚ್ಚರಿಸಲು ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಸಿಂದಗಿ ತಹಸೀಲ್ದಾರ ಬಿ.ಎಸ್‌. ಕಡಕಬಾವಿ ಅವರು ಹೇಳಿದ್ದಾರೆ.