Russia Ukraine War: ಉಕ್ರೇನ್ ತೊರೆಯಲು ಸಿಕ್ಕ ಸಿಕ್ಕ ವಾಹನ ಹತ್ತುತ್ತಿದ್ದಾರೆ ಕನ್ನಡಿಗರು!
*ಉಕ್ರೇನ್ ತೊರೆಯಲು ಸಿಕ್ಕ ಸಿಕ್ಕ ವಾಹನ ಹತ್ತುತ್ತಿದ್ದಾರೆ ಕನ್ನಡಿಗರು!
*ನವೀನ್ ದುರ್ಮರಣ ಬಳಿಕ ಜೀವಭಯದಲ್ಲಿ ವಿದ್ಯಾರ್ಥಿಗಳು
*ಆಗಿದ್ದಾಗಲೆಂದು ಗಡಿಯತ್ತ ಪಯಣ ಜತೆಗೆ ಆಹಾರ ಸಮಸ್ಯೆ
ಕೀವ್ (ಮಾ. 03:) ಯುದ್ಧಪೀಡಿತ ಉಕ್ರೇನ್ನ ಖಾರ್ಕೀವ್ನಲ್ಲಿ ಕಿರಿದಾದ ಬಂಕರ್ಗಳಲ್ಲಿ ಅನ್ನ, ಆಹಾರ ಇಲ್ಲದೆ ರಕ್ಷಣೆಗಾಗಿ ಎದುರು ನೋಡುತ್ತಿದ್ದ ಕರ್ನಾಟಕದ ಅನೇಕ ವಿದ್ಯಾರ್ಥಿಗಳೀಗ ದಿಢೀರ್ ರೈಲು, ಬಸ್ಸು ಸೇರಿ ಕಂಡ ಕಂಡ ವಾಹನಗಳನ್ನೇರಿ ಗಡಿಯತ್ತ ದೌಡಾಯಿಸುತ್ತಿದ್ದಾರೆ. ಹಾವೇರಿ ಮೂಲದ ನವೀನ್ ಸಾವು ಮತ್ತಷ್ಟುದಿಕ್ಕೆಡಿಸಿದ್ದು, ಭಯಭೀತರಾಗಿರುವ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಾಂಬ್, ಶೆಲ್ ದಾಳಿ ಆತಂಕದ ನಡುವೆಯೇ ತಾಯ್ನಾಡಿಗೆ ದಾಪುಗಾಲು ಹಾಕುತ್ತಿದ್ದಾರೆ. ಇಲ್ಲೇ ಇದ್ದರೆ ನವೀನ್ಗಾದ ಗತಿಯೇ ತಮಗಾಗಬಹುದು ಎಂಬ ಆತಂಕದಿಂದಲೇ ಹೊರಟು ನಿಂತಿದ್ದಾರೆ.
ಇದನ್ನೂ ಓದಿ: Russia Ukraine Crisis ಉಕ್ರೇನ್ನ ಪರಿಸ್ಥಿತಿಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ ಕನ್ನಡಿಗ
ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿ ವಿದ್ಯಾರ್ಥಿಯಾಗಿದ್ದ ನವೀನ್ ತನಗೆ ಹಾಗೂ ಸ್ನೇಹಿತರಿಗೆ ಆಹಾರ ತರಲೆಂದು ದಿನಸಿ ಅಂಗಡಿ ಮುಂದೆ ಸಾಲಿನಲ್ಲಿ ನಿಂತಿದ್ದಾಗ ರಷ್ಯಾದ ಶೆಲ್ ದಾಳಿಗೆ ಸಿಲುಕಿ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದರು. ಇದು ಯುದ್ಧಪೀಡಿತ ಪ್ರದೇಶವಾದ ಕೀವ್, ಖಾರ್ಕೀವ್ನಲ್ಲಿದ್ದ ಉಳಿದ ವಿದ್ಯಾರ್ಥಿಗಳಲ್ಲಿ ದಿಗ್ಭ್ರಮೆ ಮೂಡಿಸಿದೆ. ಇಲ್ಲೇ ಇದ್ದರೆ ನಾವೂ ಆಹಾರ, ನೀರಿಲ್ಲದೆ ಪರದಾಟ ಅನುಭವಿಸಿ ಕೊನೆಗೆ ನವೀನ್ ರೀತಿ ಸಾವು ಕಾಣಬಹುದು ಎಂಬ ಆತಂಕ ಅನೇಕರನ್ನು ಕಾಡಲು ಶುರುವಾಗಿದೆ.
ಹೀಗಾಗಿ ಕೀವ್ ಮತ್ತು ಖಾರ್ಕೀವ್ನಿಂದ ಅನೇಕರು ಬಸ್, ರೈಲು, ಖಾಸಗಿ ವಾಹನಗಳ ಮೂಲಕ ಗಡಿಯತ್ತ ಹೊರಟಿದ್ದಾರೆ. ಕಲಬುರಗಿಯಿಂದ ಏಳು, ದಕ್ಷಿಣ ಕನ್ನಡ, ಚಿತ್ರದುರ್ಗ, ಬಳ್ಳಾರಿಯಿಂದ ತಲಾ 4, ಮಂಡ್ಯ-2, ದಾವಣಗೆರೆ, ಚಾಮರಾಜನಗರರಿಂದ ತಲಾ ಒಬ್ಬರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ಹಾಲೆಂಡ್, ಹಂಗೇರಿ ಗಡಿಯತ್ತ ಹೊರಟಿದ್ದಾರೆ ಎನ್ನುವ ಮಾಹಿತಿ ಸದ್ಯಕ್ಕೆ ದೊರೆತಿದೆ.