ಪರಿಷತ್ ಚುನಾವಣೆ: ಹೈಕಮಾಂಡ್ ಮಟ್ಟದಲ್ಲಿ SR ಪಾಟೀಲ್ ಪರ ಡಿಕೆಶಿ ಬ್ಯಾಟಿಂಗ್
ವಿಧಾನಪರಿಷತ್ತಿಗೆ ಹಿರಿಯ ನಾಯಕ ಎಸ್.ಆರ್. ಪಾಟೀಲ್ ಆಯ್ಕೆ ವಿಚಾರ ಡಿಕೆಶಿ-ಸಿದ್ದರಾಮಯ್ಯ ಬಣಗಳ ನಡುವೆ ಕಗ್ಗಂಟು ಸೃಷ್ಟಿಸಿದೆ.
ಬೆಂಗಳೂರು (ಮೇ.23): ವಿಧಾನಪರಿಷತ್ತಿಗೆ ಹಿರಿಯ ನಾಯಕ ಎಸ್.ಆರ್. ಪಾಟೀಲ್ ಆಯ್ಕೆ ವಿಚಾರ ಡಿಕೆಶಿ-ಸಿದ್ದರಾಮಯ್ಯ ಬಣಗಳ ನಡುವೆ ಕಗ್ಗಂಟು ಸೃಷ್ಟಿಸಿದೆ.
ಡಿ.ಕೆ. ಶಿವಕುಮಾರ್ ಅವರು ಉತ್ತರ ಕರ್ನಾಟಕದ ಹಿರಿಯ ನಾಯಕ ಎಸ್.ಆರ್.ಪಾಟೀಲ್ ಪರ ಲಾಬಿ ನಡೆಸಿರುವುದು ಹಾಗೂ ಪಾಟೀಲ್ ಆಯ್ಕೆಗೆ ಸಿದ್ದರಾಮಯ್ಯ ಸುತರಾಂ ಒಪ್ಪದಿರುವುದು ಕಗ್ಗಂಟು ಸೃಷ್ಟಿಸಿದೆ ಎನ್ನಲಾಗಿದೆ. ಎರಡು ಸ್ಥಾನಗಳ ಪೈಕಿ ಒಂದನ್ನು ಲಿಂಗಾಯತ ಸಮುದಾಯಕ್ಕೆ ನೀಡಬೇಕು ಎಂಬ ಬಗ್ಗೆ ಉಭಯ ನಾಯಕರಲ್ಲೂ ಭಿನ್ನಾಭಿಪ್ರಾಯ ಇಲ್ಲ. ಆದರೆ, ಸ್ಥಳೀಯ ಸಂಸ್ಥೆಯಿಂದ ಪರಿಷತ್ಗೆ ಟಿಕೆಟ್ ನಿರಾಕರಣೆ ನಂತರ ಎಸ್.ಆರ್.ಪಾಟೀಲ್ ಪಕ್ಷದ ವೇದಿಕೆ ಹೊರತಾಗಿ ಕೆಲ ಹೋರಾಟಗಳನ್ನು ಸಂಘಟಿಸಿದ್ದರು. ಇದು ನೇರವಾಗಿ ಸಿದ್ದರಾಮಯ್ಯ ವಿರುದ್ಧ ಎಂದು ಬಿಂಬಿಸಲಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಅವರು ಪಾಟೀಲ್ಗೆ ಟಿಕೆಟ್ ಬೇಡ ಎಂದು ಹೇಳಿ ಮಲ್ಲಿಕಾರ್ಜುನ ಖರ್ಗೆ ಅವರು ಸೂಚಿಸುತ್ತಿರುವ ಅಲ್ಲಂ ವೀರಭದ್ರಪ್ಪ ಪರ ನಿಂತಿದ್ದಾರೆ ಎನ್ನಲಾಗಿದೆ.