ಸಂಪ್ರದಾಯ ಮೀರಿ ತಂದೆ ಅಂತ್ಯಕ್ರಿಯೆ ನೆರವೇರಿಸಿದ ಮಗಳು
ತಂದೆಯ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದ ಕಟ್ಟುಪಾಡು ಮುರಿದು ಮಗಳು ನೆರವೇರಿಸಿದ ಅಪರೂಪದ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಡೀಲು ಸಬ್ಬತ್ತಿಯಲ್ಲಿ ನಡೆದಿದೆ.
ಉತ್ತರ ಕನ್ನಡ (ನ.22): ಆತ್ಮಹತ್ಯೆ ಮಾಡಿಕೊಂಡಿದ್ದ ತಂದೆಯ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದ ಕಟ್ಟುಪಾಡು ಮುರಿದು ಮಗಳು ನೆರವೇರಿಸಿದ ಅಪರೂಪದ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಡೀಲು ಸಬ್ಬತ್ತಿಯಲ್ಲಿ ನಡೆದಿದೆ.
ಮಂಜುನಾಥ ನಾಗಪ್ಪ ನಾಯ್ಕ್ (51) ಎಂಬವವರು ನಿನ್ನೆ ದಿನ ತಮ್ಮ ಮನೆಯ ಗೃಹಪ್ರವೇಶ ನೆರವೇರಿಸಿ ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದರು. ಇವರಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು, ಗಂಡು ಮಕ್ಕಳಿರಲಿಲ್ಲ. ಹೀಗಾಗಿ ರಕ್ತಸಂಬಂಧಿಗಳಲ್ಲಿ ಯಾರಾದರೂ ಚಿತೆಗೆ ಅಗ್ನಿಸ್ಪರ್ಷ ಮಾಡಬೇಕಿತ್ತು. ಆದರೆ, ಸಂಪ್ರದಾಯಕ್ಕೆ ಕಟ್ಟುಬೀಳದೇ ಹಿರಿಯ ಮಗಳು ಶ್ವೇತಾ ನಾಗಪ್ಪ ನಾಯ್ಕ್ (Swetha Nagappa) ಅವರು ಅಂತ್ಯಸಂಸ್ಕಾರ (Funeral) ನೆರವೇರಿಸುವ ಮೂಲಕ ಸಮಾಜದ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
Kannadathi : ಅಮ್ಮಮ್ಮನ ಅಂತ್ಯಕ್ರಿಯೆ ನನ್ನನ್ನೂ ಬಾಧಿಸಿತು : ಚಿತ್ಕಳಾ ಬಿರಾದಾರ್
ಗ್ರಾಮಸ್ಥರ ಸಾಥ್: ಹೊಸ ಮನೆ ನಿರ್ಮಾಣ ಮಾಡಿ ಗೃಹಪ್ರವೇಶ ಮಾಡಿದ್ದರೂ, ಮರುದಿನ ಲುಂಗಿಯಿಂದ ಕುತ್ತಿಗೆ ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಮೂರು ಹೆಣ್ಣು ಮಕ್ಕಳ (Girls) ಜವಾಬ್ದಾರಿ ನೋಡಿಕೊಳ್ಳದೇ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಗ್ರಾಮಸ್ಥರು ಮಮ್ಮಲ ಮರುಗಿದ್ದಾರೆ. ನಂತರ ನೆಂಟರಿಷ್ಟರು ಚಿತೆಗೆ ಬೆಂಕಿ ಹಚ್ಚಲು ಮುಂದಾಗದಿದ್ದಾಗ ಮಗಳು ತಾನೇ ಅಂತ್ಯಕ್ರಿಯೆ ನಡೆಸುವುದಾಗಿ ತಿಳಿಸಿದ್ದಾಳೆ. ಇದಕ್ಕೆ ಮೊದಲು ವಿರೋಧ ವ್ಯಕ್ತಪಡಿಸಿದ ಜನರು, ಕುಟುಂಬದ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಒಪ್ಪಿಗೆ ಸೂಚಿಸಿದ್ದಾರೆ. ಮಗಳ ಕೈಯಿಂದಲೇ ತಂದೆಯ ಚಿತೆಗೆ ಬೆಂಕಿ ಹಚ್ಚಿಸುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲು ಗ್ರಾಮಸ್ಥರು ಸಾಥ್ ನೀಡಿದ್ದಾರೆ.