ಫೇಸ್‌ಬುಕ್‌ನಲ್ಲಿ ವಿನಯ್‌ ಗುರೂಜಿ ಅವರ ವಿರುದ್ಧ ಬರಹವನ್ನು ಪ್ರಚಾರ ಮಾಡಿದ್ದ ಸುದೀಪ್ ಅಭಿಮಾನಿ ಮೇಲೆ ಗುರೂಜಿ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. 

ಕುಂದಾಪುರ [ಅ.15]: ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ವಿನಯ್‌ ಗುರೂಜಿ ಅವರ ವಿರುದ್ಧ ಬರಹವನ್ನು ಪ್ರಚಾರ ಮಾಡಿದ್ದ ಆರೋಪದಲ್ಲಿ ಇಲ್ಲಿನ ಕೋಟತಟ್ಟು ಗ್ರಾಮದ ಬಾರಿಕೆರೆಯ ನಿವಾಸಿ ರತ್ನಾಕರ ಪೂಜಾರಿ (30) ಎಂಬವರ ಮೇಲೆ ತಂಡವೊಂದು ಹಲ್ಲೆ ನಡೆಸಿದೆ.

Add Asianetnews Kannada as a Preferred SourcegooglePreferred

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಭಾನುವಾರ ಸಂಜೆ 5.30ಕ್ಕೆ ರತ್ನಾಕರ ಪೂಜಾರಿ ಅವರು ಕುಂದಾಪುರದ ಸಂಗಮ್‌ ಶಾಲೆಯ ಬಳಿ ನಿಂತಿದ್ದಾಗ ಅಲ್ಲಿಗೆ ಬಂದ ಗುರುರಾಜ್, ಸಂತು ಹಾಗೂ ಇತರ 8 - 10 ಮಂದಿ ಬಂದು, ಅವಾಚ್ಯ ಶಬ್ದಗಳಿಂದ ಬೈದು, ದೂಡಿ ಹಾಕಿ ರಾಡ್‌ ಮತ್ತು ಹೆಂಚಿನ ತುಂಡಿನಿಂದ ಚೆನ್ನಾಗಿ ಹೊಡೆದಿದ್ದರು. ಅವರನ್ನು ತಕ್ಷಣ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿಸದ್ದು, ಇದೀಗ ಸಾಮಾನ್ಯ ವಾರ್ಡಿಗೆ ಶಿಫ್ಟ್ ಮಾಡಲಾಗಿದೆ. 

4 ಮಂದಿಯ ಬಂಧನ:

ಘಟನೆಗೆ ಸಂಬಂಧಿಸಿದಂತೆ ರತ್ನಾಕರ ಪೂಜಾರಿ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಕಸಬಾ ಗ್ರಾಮದ ನಿವಾಸಿಗಳಾದ ಗುರುರಾಜ್‌ ಪುತ್ರನ್‌ (28), ಸಂತೋಷ್‌ (30), ಪ್ರದೀಪ್‌ (29), ರವಿರಾಜ್‌ (44) ಅವರನ್ನು ಬಂಧಿಸಲಾಗಿದ್ದು, ಉಳಿದವರ ಬಂಧನಕ್ಕೆ ಪೊಲೀಸರ 2 ತಂಡಗಳನ್ನು ರಚಿಸಲಾಗಿದೆ.

ಎಚ್ಚರಿಕೆಯಿಂದ ಬಳಸಿ:

ರತ್ನಾಕರ ಪೂಜಾರಿ ಅವರು ಚಲನಚಿತ್ರ ನಟ ಸುದೀಪ್‌ ಅಭಿಮಾನಿಯಾಗಿದ್ದು, ವಿನಯ್‌ ಗುರೂಜಿ ಸುದೀಪ್‌ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ವಿರೋಧಿಸಿ ಫೇಸ್‌ ಬುಕ್‌ನಲ್ಲಿ ಬಂದ ಸಂದೇಶವನ್ನು ಶೇರ್‌ ಮಾಡಿದ್ದರು. ಇದೇ ಕಾರಣಕ್ಕೆ ಆರೋಪಿಗಳು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಆದ್ದರಿಂದ ಸಾಮಾಜಿಕ ಜಾಲತಾಣವನ್ನು ಜವಾಬ್ದಾರಿಯುತವಾಗಿ ಹಾಗೂ ವಿವೇಚನಾತ್ಮಕವಾಗಿ ಬಳಸಬೇಕು ಮತ್ತು ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ವಿಷಯಗಳನ್ನು ಪ್ರಚಾರ ಮಾಡಿದಲ್ಲಿ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಬೇಕು ಎಂದು ಪೊಲೀಸ್‌ ಇಲಾಖೆ ವಿನಂತಿಸಿದೆ