Asianet Suvarna News Asianet Suvarna News

Karnataka Hijab Row ಹಿಜಾಬ್‌ VS ಕೇಸರಿ ಪ್ರತಿಭಟನೆ, ಮಾರಕಾಸ್ತ್ರ ತಂದ ಇಬ್ಬರ ಬಂಧನ!

  • ಮಾರಕಾಯುಧಗಳೊಂದಿಗೆ ಬಂದಿದ್ದ ಐವರು ಆರೋಪಿಗಳು
  • ಅಬ್ದುಲ್‌ ಮಜೀದ್‌ (32), ರಜಬ್‌ (41) ಬಂಧಿಸಿದ ಪೊಲೀಸರು
  • ಇನ್ನು ಮೂವರ ಬಂಧನಕ್ಕೆ ಪೊಲೀಸರ ಕಾರ್ಯಾಚರಣೆ
     
Twpo person Arrest during Hijab vs saffron Row Protest in Kundapur Karnataka ckm
Author
Bengaluru, First Published Feb 6, 2022, 4:15 AM IST | Last Updated Feb 6, 2022, 4:15 AM IST

ಕುಂದಾಪುರ(ಫೆ.06): ಇಲ್ಲಿನ ಸರ್ಕಾರಿ ಪಿಯು ಕಾಲೇಜಿನ ಎದುರು ರಸ್ತೆಯಲ್ಲಿ ಶುಕ್ರವಾರ ಹಿಜಾಬ್‌(Hijab) ಹಾಗೂ ಕೇಸರಿ(saffron) ಶಾಲು ಧರಿಸುವ ವಿಚಾರದಲ್ಲಿ ಪ್ರತಿಭಟನೆ(Protest) ನಡೆಯುತ್ತಿರುವಾಗ ಮಾರಕಾಯುಧಗಳೊಂದಿಗೆ ಬಂದಿದ್ದ ಐವರು ಆರೋಪಿಗಳ ಪೈಕಿ ಇಬ್ಬರನ್ನು ಕುಂದಾಪುರ(Kundapur) ಪಿಎಸ್‌ಐ ಸದಾಶಿವ ಗವರೋಜಿ ಮತ್ತು ತಂಡ ಬಂಧಿಸಿ, ಪ್ರಕರಣ ದಾಖಲಿಸಿದೆ.

ಪ್ರತಿಭಟನಾ ಸ್ಥಳದಲ್ಲಿ ಒಂದು ಗುಂಪಿನ ವಿದ್ಯಾರ್ಥಿಗಳ(Students) ಪರ ಐದಾರು ಮಂದಿ ಮಾರಕಾಯುಧಗಳೊಂದಿಗೆ ಆಗಮಿಸಿದ್ದರು. ಅಪಾಯ ಅರಿತ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಗಂಗೊಳ್ಳಿಯ ಅಬ್ದುಲ್‌ ಮಜೀದ್‌ (32), ರಜಬ್‌ (41) ಬಂಧಿತರು. ಇನ್ನು ಮೂವರ ಬಂಧನಕ್ಕೆ ಬಲೆ ಬೀಸಲಾಗಿದೆ.

Hijab Row Protest: ಹಿಜಾಬ್‌ ವಿವಾದ, ಶಾಸಕಿ ಕನೀಜ್ ಫಾತಿಮಾ ನೇತೃತ್ವದಲ್ಲಿ ಪ್ರತಿಭಟನೆ

ಕೋರ್ಟ್‌ಗಳ ತೀರ್ಪಿನನ್ವಯ ಆದೇಶ:
ವೈಯಕ್ತಿಕ ವಸ್ತ್ರ ಸಂಹಿತೆಗಿಂತ ಏಕರೂಪ ವಸ್ತ್ರಸಂಹಿತೆಗೆ ಆದ್ಯತೆ ನೀಡುವಂತೆ ಸುಪ್ರೀಂ ಕೋರ್ಟ್‌ ಹಾಗೂ ವಿವಿಧ ರಾಜ್ಯಗಳ ಹೈಕೋರ್ಟ್‌ ಮುಂದೆ ದಾಖಲಾದ ಪ್ರಕರಣಗಳಲ್ಲಿ ನ್ಯಾಯಾಲಯಗಳು ತೀರ್ಪನ್ನೂ ನೀಡಿವೆ. ಮುಂಬೈ ಹೈಕೋರ್ಟ್‌ ಕಾರ್ತಿಕ್‌ ಇಂಗ್ಲೀಷ್‌ ಶಾಲೆಯಲ್ಲಿ ಪ್ರಾಂಶುಪಾಲರು ಶಿರವಸ್ತ್ರ (ಹೆಡ್‌ ಸ್ಕಾಫ್‌ರ್‍) ಅಥವಾ ಹಿಜಾಬ್‌ ಹಾಕಿಕೊಂಡು ಅಥವಾ ತಲೆಯನ್ನು ಮುಚ್ಚಿಕೊಂಡು ಶಾಲೆಗೆ ಬರದಂತೆ ನಿರ್ದೇಶಿಸಿರುವುದು ಸಂವಿಧಾನದ ಅನುಚ್ಛೇದ 25ರ ಉಲ್ಲಂಘನೆಯಲ್ಲ ಎಂದು ಅಂತಿಮ ತೀರ್ಪು ನೀಡಿದೆ.

ಈ ಹೈಕೋರ್ಟ್‌ ತೀರ್ಪು ಅವಲೋಕಿಸಿ ಮದ್ರಾಸ್‌ ಹೈಕೋರ್ಟ್‌ ಸಹ ವಿ. ಕಮಲಮ್ಮ ಹಾಗೂ ಡಾ.ಎಂ.ಜಿ.ಆರ್‌. ಯೂನಿವರ್ಸಿಟಿ ಹಾಗೂ ಇತರರ ಪ್ರಕರಣದಲ್ಲಿ ವಿಶ್ವವಿದ್ಯಾಲಯವು ನಿಗದಿಪಡಿಸಿದ ವಸ್ತ್ರ ಸಂಹಿತೆಯ ನಿರ್ಧಾರವನ್ನು ಎತ್ತಿ ಹಿಡಿದಿದೆ.

ಕೇಸರಿ ಶಾಲಿಗೂ, ಹಿಜಾಬ್​ಗೂ ನಮ್ಮ ವಿರೋಧವಿದೆ ಎಂದ ಸಚಿವ ಅಶೋಕ್

ಹೀಗಾಗಿ ಸುಪ್ರೀಂ ಕೋರ್ಟ್‌, ವಿವಿಧ ರಾಜ್ಯಗಳ ಹೈಕೋರ್ಟ್‌ಗಳಲ್ಲಿ ತೀರ್ಪಿನ ಅನ್ವಯ ಶಿರವಸ್ತ್ರ (ಹೆಡ್‌ ಸ್ಕಾಫ್‌ರ್‍) ಹಾಕಿಕೊಂಡು ಅಥವಾ ತಲೆಯನ್ನು ಮುಚ್ಚಿಕೊಂಡು ಶಾಲೆಗೆ ಬರದಂತೆ ನಿರ್ದೇಶಿಸಿರುವುದು ಸಂವಿಧಾನದ 25ನೇ ವಿಧಿ ಉಲ್ಲಂಘನೆಯಲ್ಲ. ಹೀಗಾಗಿ ಕರ್ನಾಟಕ ಶಿಕ್ಷಣ ಕಾಯಿದೆ - 1983 ಕಲಂ 133 (2) ಅಡಿ ಲಭ್ಯವಿರುವ ಅಧಿಕಾರ ಚಲಾಯಿಸಿ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ನಿಗದಿಪಡಿಸಿರುವ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು. ಖಾಸಗಿ ಶಾಲೆಗಳು ತಮ್ಮ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರವನ್ನೇ ಧರಿಸಬೇಕು ಎಂದು ಆದೇಶಿಸಲಾಗಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಆಯಾ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಅಥವಾ ಆಡಳಿತ ಮಂಡಳಿಯ ಮೇಲ್ವಿಚಾರಣಾ ಸಮಿತಿಯು ನಿರ್ಧರಿಸುವಂತಹ ಸಮವಸ್ತ್ರಗಳನ್ನು ಧರಿಸಬೇಕು. ಆಡಳಿತ ಮಂಡಳಿಗಳು ಸಮವಸ್ತ್ರಗಳನ್ನು ನಿಗದಿಪಡಿಸದೆ ಇದ್ದಲ್ಲಿ ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡು ಹಾಗೂ ಸಾರ್ವಜನಿಕ ವ್ಯವಸ್ಥೆಗೆ ಭಂಗ ಬರದಂತೆ ಇರುವ ಉಡುಪುಗಳನ್ನು ಧರಿಸಿಕೊಂಡು ಬರಬೇಕು ಎಂದು ಹೇಳಲಾಗಿದೆ.

ಇನ್ನಷ್ಟುಜಿಲ್ಲೆಗಳಲ್ಲಿ ಹಿಜಾಬ್‌, ಕೇಸರಿ ಶಾಲು ಸಂಘರ್ಷ
ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳ ನಡುವೆ ನಡೆಯುತ್ತಿರುವ ಹಿಜಾಬ್‌, ಕೇಸರಿ ಶಾಲು ತಿಕ್ಕಾಟ ಉಡುಪಿ, ಬೆಳಗಾವಿ, ಮೈಸೂರು ಬಳಿಕ ಇದೀಗ ಹಾಸನ, ಚಿಕ್ಕಮಗಳೂರು ಹಾಗೂ ಕಲಬುರಗಿ ಜಿಲ್ಲೆಗಳಲ್ಲೂ ಪ್ರತಿಧ್ವನಿಸಿದೆ. ಚಿಕ್ಕಮಗಳೂರು, ಹಾಸನದ ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್‌ ವಿರೋಧಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಗಮಿಸಿದ್ದರೆ, ಕಲಬುರಗಿಯಲ್ಲಿ ಶಾಸಕಿ ಕನೀಜ್‌ ಫಾತಿಮಾ ನೇತೃತ್ವದಲ್ಲಿ ಹಾಗೂ ಭಟ್ಕಳದಲ್ಲಿ ಮುಸ್ಲಿಂ ವಿದ್ಯಾರ್ಥಿ ಒಕ್ಕೂಟದಿಂದ ವಿದ್ಯಾರ್ಥಿನಿಯರು ಹಿಜಾಬ್‌ ಪರ ಶನಿವಾರ ಪ್ರತಿಭಟನೆ ನಡೆಸಿದರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಹಿಜಾಬ್‌ ಸಂಘರ್ಷ ತಾರಕಕ್ಕೇರಿದ್ದು ಶನಿವಾರ ನೂರಾರು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಜೈಶ್ರೀರಾಮ್‌ ಎಂದು ಕೂಗುತ್ತಾ ಮೆರವಣಿಗೆ ನಡೆಸಿದರು. ಇದರಿಂದ ಉದ್ವಿಗ್ನ ಸ್ಥಿತಿ ಉಂಟಾಗಿ ಮೂರು ಕಾಲೇಜುಗಳಿಗೆ ರಜೆ ಘೋಷಿಸಿಲಾಗಿದೆ.  

Latest Videos
Follow Us:
Download App:
  • android
  • ios