ಸತ್ಯ ಸೀರಿಯಲ್ ಕಾರ್ತಿಕ್ ಪಾತ್ರಧಾರಿ ಸಾಗರ್ ಬಿಳಿಗೌಡ ಹಾಗೂ ಬಾಮೈದ ರಘು ಅವರು ತಮ್ಮ ಪತ್ನಿಯರ ಜೊತೆ ವರಮಹಾಲಕ್ಷ್ಮಿ ಹಬ್ಬಕ್ಕೆ ಪೋಸ್ ಕೊಟ್ಟಿದ್ದಾರೆ.
ಮೊನ್ನೆ ಶುಕ್ರವಾರ ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಡಗರ. ಈ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಕೂಡ ಹಬ್ಬವನ್ನು ಆಚರಿಸಿ ಸಂಭ್ರಮ ಪಟ್ಟಿದ್ದಾರೆ, ಅವುಗಳ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಅದರಲ್ಲಿಯೂ ಸಿನಿಮಾ, ಧಾರಾವಾಹಿಯ ನಟ-ನಟಿಯರನ್ನು ತೆರೆಯ ಮೇಲೆ ನೋಡುವ ಅಭಿಮಾನಿಗಳಿಗೆ ಅವರ ರಿಯಲ್ ಲೈಫ್ ಬಗ್ಗೆಯೂ ಅಷ್ಟೇ ಕುತೂಹಲವಿರುತ್ತದೆ. ಅದರಲ್ಲಿಯೂ ಇಂದು ಧಾರಾವಾಹಿ ಮನೆಮಂದಿಯ ಅಚ್ಚುಮೆಚ್ಚಾಗಿದೆ. ತೆರೆಯ ಮೇಲಿನ ಇವರ ಆ್ಯಕ್ಟಿಂಗ್ಗಳನ್ನು ನೋಡಿ ಜನ ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರು ಫಿದಾ ಆಗುತ್ತಾರೆ. ತೆರೆಯ ಮೇಲೆ ಯಾರದ್ದೋ ಗಂಡ, ಇನ್ನಾರದ್ದೋ ಹೆಂಡತಿ ಜೋಡಿಯಾಗುವುದು ಇದೆ. ಇದೇ ಕಾರಣಕ್ಕೆ ಅವರ ರಿಯಲ್ ಲೈಫ್ನ ಜೋಡಿಯನ್ನು ನೋಡಬೇಕೆನ್ನುವ ಕನಸು ಎಷ್ಟೋ ಫ್ಯಾನ್ಸ್ಗೆ ಇರುತ್ತದೆ.
ಇಲ್ಲೀಗ ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸತ್ಯ ಸೀರಿಯಲ್ನ ನಾಯಕ ಕಾರ್ತಿಕ್ ಅಲಿಯಾಸ್ ಅಮುಲ್ ಬೇಬಿ ಹಾಗೂ ಇದೇ ಸೀರಿಯಲ್ನಲ್ಲಿ ನಟಿಸಿರೋ ಬಾಮೈದನ ರಿಯಲ್ ಲೈಫ್ ಪತ್ನಿಯರನ್ನು ನೀವಿಲ್ಲಿ ನೋಡಬಹುದು. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಈ ಜೋಡಿ ಈಗ ಫೋಟೋ ಶೇರ್ ಮಾಡಿಕೊಂಡಿದ್ದು ಅದೀಗ ವೈರಲ್ ಆಗಿದೆ.
Cute ಆಗಿ ನಗಲು ಪರದಾಟ: ಅನುಭವ ಬಿಚ್ಚಿಟ್ಟ ಸತ್ಯ ಸೀರಿಯಲ್ 'ಅಮೂಲ್ ಬೇಬಿ'
ಅಂದಹಾಗೆ, ಜೀ ಕನ್ನಡ ಚಾನೆಲ್ನಲ್ಲಿ ಪ್ರಸಾರವಾಗ್ತಿರೋ ಸತ್ಯ (Sathya) ಸೀರಿಯಸ್ ವಿಭಿನ್ನ ಕಥಾಹಂದರವನ್ನು ಹೊಂದಿದ್ದು ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ ಎನಿಸಿದೆ. ಗಂಡುಬೀರಿಯಂತೆ ಬೆಳೆದಿರೋ ಸತ್ಯಾ ಒಂದೆಡೆಯಾದರೆ ಹೆಣ್ಣಿನಂತೆ ಅತಿ ಸಾಫ್ಟ್ ಆಗಿರೋ ಅತೀ ಮುಗ್ಧ ಎನ್ನುವ ಪಾತ್ರಧಾರಿ ಕಾರ್ತಿಕ್. ಪತ್ನಿ ಸತ್ಯ ಬಾಯಲ್ಲಿ ಕಾರ್ತಿಕ್ ಪ್ರೀತಿಯ ಹೆಸರು ಅಮುಲ್ ಬೇಬಿ. ಈ ಪಾತ್ರಕ್ಕೆ ತಕ್ಕಂತೆ ಮುಗ್ಧ ಮುಖ ಹೊಂದಿರೋ ಕಾರ್ತಿಕ್ ನಿಜವಾದ ಹೆಸರು ಸಾಗರ್ ಬಿಳಿಗೌಡ. ಕಳೆದ ಜನವರಿ 20ರಂದು ಸಾಗರ್ ಅವರು ಸಿರಿ ಎನ್ನುವವರ ಜೊತೆ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದಾರೆ. ಸಿರಿ ಮತ್ತು ಸಾಗರ್ ಅವರದ್ದು ಪ್ರೇಮ ವಿವಾಹ. ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಮದುವೆಗೆ ಕೆಲ ದಿನಗಳ ಮುಂಚೆಯಷ್ಟೇ ಫೋಟೋ ಶೇರ್ ಮಾಡುವ ಮೂಲಕ ಅಧಿಕೃತ ಗೊಳಿಸಿದ್ದರು. ಬಳಿಕ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಹಸೆಮಣೆ ಏರಿದೆ. ಸಿರಿ ರಾಜು ಕೂಡ ಮಾಡೆಲ್ ಕಮ್ ನಟಿ. ಇವರು ಉದ್ಯಮಿ ಕೂಡ ಹೌದು. ಸಿರಿ ರಾಜು ಅವರು ಈವೆಂಟ್ ಕಂಪನಿಯನ್ನ ನಡೆಸುತ್ತಿದ್ದಾರೆ. ವಿಜಯ್ ರಾಘವೇಂದ್ರ ಜೊತೆಗೆ FIR 6 to 6 ಸಿನಿಮಾದಲ್ಲಿ ಸಿರಿ ರಾಜು ಅಭಿನಯಿಸುತ್ತಿದ್ದಾರೆ. ಇನ್ನು ಕೆಲವು ವೆಬ್ ಸೀರೀಸ್ ಗಳಲ್ಲೂ ನಟಿಸಿದ್ದಾರೆ.
ಇನ್ನು ಸತ್ಯಸೀರಿಯಲ್ನಲ್ಲಿ ಬಾಮೈದನ ಪಾತ್ರ ಮಾಡುತ್ತಿರುವ ಸೀರುಂಡೆ ರಘು ಅವರು ಕಾಮಿಡಿ ಕಿಲಾಡಿ ಖ್ಯಾತಿಯನ್ನೂ ಪಡೆದಿದ್ದಾರೆ. ತಮ್ಮ ಅದ್ಭುತವಾದ ಕಾಮಿಡಿ ಮೂಲಕ ಜನರಿಗೆ ಹತ್ತಿರವಾಗಿರೋ ಇವರು ಕಳೆದ ಮಾರ್ಚ್ ತಿಂಗಳಿನಲ್ಲಿ ರಂಜಿತಾ ಎನ್ನುವವರನ್ನು ಮದುವೆಯಾಗಿದ್ದಾರೆ. ನಟನೆಗೆ ಬರುವ ಮುನ್ನ ರಘು ವಿಧ ವಿಧವಾದ ಕೆಲಸ ಮಾಡಿದ್ದರು. ಮೊದ ಮೊದಲಿಗೆ ಮಿಮಿಕ್ರಿ ಮಾಡುತ್ತಿದ್ದರು. ಬಳಿಕ ರಾಜ್ ಮ್ಯೂಸಿಕ್ನಲ್ಲಿ ಸಿಕ್ರೆ ಸೀರುಂಡೆ, ಕಸ್ತೂರಿಯಲ್ಲಿ ಟೋಪಿವಾಲ ಎಂಬ ಎರಡು ಬಕ್ರಾ ಶೋ ನಡೆಸಿಕೊಟ್ಟಿದ್ದರು. ಹಲವು ವರ್ಷಗಳ ಬಳಿಕ ಮಜಾ ಭಾರತದಲ್ಲೂ ನಟಿಸಿ ಜನರನ್ನು ನಗಿಸಿದ್ದರು ಇವರು. ಮೊದಮೊದಲಿಗೆ ಕಷ್ಟಗಳ ದಿನವನ್ನೇ ನೋಡಿದ್ದ ರಘು ಅವರಿಗೆ ಅದೃಷ್ಟ ಕೊಟ್ಟದ್ದೆ ಝಿ ಕನ್ನಡ ವಾಹಿನಿಯ (Zee Kannada) ಕಾಮಿಡಿ ಕಿಲಾಡಿಗಳು. ಅಲ್ಲಿಂದ ಅವರನ್ನು ಇಡೀ ಕರ್ನಾಟಕವೇ ಗುರುತಿಸುವಂತಾಯಿತು. ಇವರನ್ನು ಕೂಡ ಫೋಟೋದಲ್ಲಿ ನೋಡಬಹುದು.
