ಕನ್ನಡತಿ ಸೀರಿಯಲ್‌ನಲ್ಲಿ ಅಮ್ಮಮ್ಮ ಮತ್ತೆ ಬರ್ತಾರೆ ಅನ್ನೋದಂತೂ ಸುದ್ದಿಯಾಗುತ್ತಲೇ ಇತ್ತು. ಆದರೆ ಈಗ ಕೆಲವೇ ಹೊತ್ತಲ್ಲಿ ಸ್ಕ್ರೀನ್‌ ಮೇಲೆ ಮತ್ತೆ ಮಾಲಾ ಕೆಫೆಯ ಒಡತಿ, ಹರ್ಷನ ತಾಯಿ, ಭುವಿಯ ಅತ್ತೆ, ಒಳ್ಳೆ ಮನಸ್ಸು, ಚೆಂದದ ಮಾತುಗಳ ಅಮ್ಮಮ್ಮ ಮತ್ತೆ ಕಾಣಿಸಿಕೊಳ್ತಿದ್ದಾರೆ ಅನ್ನೋ ಸೂಚನೆ ಬಂದೇ ಬಿಟ್ಟಿದೆ.

ಕನ್ನಡತಿ ಸೀರಿಯಲ್‌ ಕೊಂಚ ಭಣ ಭಣ ಅನ್ನುತ್ತಿತ್ತು. ಹರ್ಷ ಭುವಿಯ ಮದುವೆ ಹೊತ್ತಿಗೆ ಇದ್ದ ಅತ್ಯುತ್ಸಾಹವೆಲ್ಲ ತಗ್ಗಿ ಅದದೇ ಡ್ರಾಮಾ ನೋಡಿ ಜನರೂ ಬೇಸತ್ತಿದ್ದರು. ಇನ್ನೇನು ಈ ಸೀರಿಯಲ್‌ ಸಾಕಪ್ಪಾ ಬರೀ ಗೋಳೇ ಇದೆ, ಕೆಲಸ ಬಿಟ್ಟು, ಬೇಜಾರಲ್ಲಿರುವ ಭುವಿಯ ಮುಖ ನೋಡಕ್ಕಾಗ್ತಿಲ್ಲ ಅಂತೆಲ್ಲ ಜನ ಮಾತಾಡಿಕೊಳ್ಳುವ ಹೊತ್ತಿಗೆ ಅಮ್ಮಮ್ಮನ ಆಗಮನದ ಹೊಸ ಸುದ್ದಿ ಬಂದಿದೆ. ಕನ್ನಡತಿ ಸೀರಿಯಲ್‌ನಲ್ಲಿ ರತ್ನಮಾಲಾ ಪಾತ್ರಕ್ಕಾಗಿಯೇ ಕಾಯುವ ಒಂದು ವರ್ಗ ಇದೆ. ಈ ಪಾತ್ರದ ಮೂಲಕ ಹೇಳೋದನ್ನು ಚಾಚೂ ತಪ್ಪದೇ ಕೇಳಿ ಬದುಕಿನಲ್ಲಿ ಪಾಲಿಸೋ ಜನರೂ ಇದ್ದಾರೆ. ತಮ್ಮ ಅಮ್ಮನನ್ನು ಈ ಪಾತ್ರದ ಜೊತೆಗೆ ಹೋಲಿಸಿ ಭಾವುಕರಾದ ಮಂದಿಯೂ ಇದ್ದಾರೆ. ಈ ಪಾತ್ರ ನಿರ್ವಹಿಸುವ ಚಿತ್ಕಳಾ ಬಿರಾದಾರ್‌ ಅಮೆರಿಕಾಕ್ಕೆ ಪ್ರವಾಸ ಹೊರಟದ್ದೇ ನೆವವಾಗಿ ಅವರ ಪಾತ್ರಕ್ಕೆ ಅನಿವಾರ್ಯವಾಗಿ ತಾತ್ಕಾಲಿಕ ಬ್ರೇಕ್ ನೀಡಲಾಗಿತ್ತು. ಇದು ಅವರ ಫ್ಯಾನ್ ಗಳಿಗೆ ಮಾತ್ರ ಅಲ್ಲ, ಈ ಸೀರಿಯಲ್‌ ನೋಡುವ ಎಲ್ಲರಿಗೂ ಬೇಸರ ತಂದಿತ್ತು. ಇದೀಗ ಅಮ್ಮಮ್ಮ ವಾಪಾಸ್ ಬರ್ತಿದ್ದಾರೆ ಅನ್ನುವಾಗ ಭಣ ಭಣ ಅನ್ನುತ್ತಿದ್ದ ಸೀರಿಯಲ್‌ನಲ್ಲಿ ಹೊಸದೊಂದು ತಿರುವು ಬರಬಹುದು, ಭುವಿಗೆ ಮತ್ತೆ ಶಕ್ತಿ ಬರಬಹುದು ಅಂತೆಲ್ಲ ಜನ ಲೆಕ್ಕಾಚಾರ ಹಾಕುತ್ತಿದ್ದಾರೆ.

Add Asianetnews Kannada as a Preferred SourcegooglePreferred

'ಕನ್ನಡತಿ' ಸೀರಿಯಲ್‌ನಲ್ಲಿ ಅಮ್ಮಮ್ಮ ಬರುವಿಕೆಗೆ ಪೂರಕವಾಗಿ ಒಂದಿಷ್ಟು ಘಟನೆಗಳೂ ನಡೆಯುತ್ತಿವೆ. ವರ ಮಹಾಲಕ್ಷ್ಮಿ ಹಬ್ಬ ಕಳೆದು ಮೂರ್ನಾಲ್ಕು ದಿನಗಳಾಗಿದ್ದರೂ ಹಬ್ಬದ ಎಪಿಸೋಡ್ ಪ್ರಸಾರವಾಗಿರಲಿಲ್ಲ. ನಾರ್ಮಲ್ ಎಪಿಸೋಡ್‌ಗಳೇ ಬರುತ್ತಿದ್ದವು. ಆದರೆ ಹಬ್ಬದ ದಿನದಂದು ಹರ್ಷ ಭುವಿ, ಮನೆಯವರೆಲ್ಲ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡ ಗ್ಲಿಂಪ್ಸ್ ಅಷ್ಟೇ ಬಂದು ಹೋಗಿತ್ತು. ಹೀಗಾಗಿ ಬಹುಶಃ ಇದಿಷ್ಟೇ ಇರುತ್ತೆ ಅಂತಲೇ ಜನ ಭಾವಿಸಿದ್ರು. ಆದರೆ ಇದೀಗ ಲೇಟಾಗಿ ಹಬ್ಬ ಕಳೆದ ವಾರದ ಬಳಿಕ ಹಬ್ಬದ ಸೆಲೆಬ್ರೇಶನ್‌ಗೆ ರತ್ನಮಾಲಾ ಮನೆ ಸಿಂಗಾರಗೊಂಡಿದೆ.

ಗಟ್ಟಿಮೇಳ ಸೀರಿಯಲ್‌ನಲ್ಲಿ ವರಮಹಾಲಕ್ಷ್ಮೀ ಹಬ್ಬದ ಸೆಲೆಬ್ರೇಶನ್ ಹೇಗಿದೆ?

ಇನ್ನೊಂದೆಡೆ ಸಿಕ್ಕಿದ್ದರಲ್ಲೆಲ್ಲ ಕ್ಯಾತೆ ತೆಗೆಯುವ ಚಿಕ್ಕಪ್ಪ ಇದೀಗ ಮಹಾಲಕ್ಷ್ಮಿಯ ಪೂಜೆ ತಾನೇ ಮಾಡೋದಾಗಿ ಹೆಂಡತಿ ಬಳಿ ಹೇಳಿದ್ದಾರೆ. ಹರ್ಷ ಭುವಿಗೆ ಬಹಳ ಮುಜುಗರವಾಗುವಂತೆಯೂ ನಡೆದುಕೊಂಡಿದ್ದಾರೆ. ಹರ್ಷನಿಗೆ ಕಾಫಿ ತಂದುಕೊಟ್ಟು ದೇವರಿಗೆ ಇಡೋದಕ್ಕೆ ಹಣ ಕೇಳಲೆಂದು ಭುವಿ ಬಂದಾಗ ಹರ್ಷ ಅವಳನ್ನು ಬಿಗಿದಪ್ಪಿದ್ದಾನೆ. ಹಬ್ಬದ ಗಡಿಬಿಡಿಯಲ್ಲಿ ಭುವಿ ಅವನಿಂದ ಬಿಡಿಸಿಕೊಳ್ಳಲು ನೋಡಿದರೂ ಬಿಟ್ಟಿಲ್ಲ. ಅದೇ ಹೊತ್ತಿಗೆ ಬಾಗಿಲ ಬಳಿ ಚಿಕ್ಕಪ್ಪನ ಆಗಮನವಾಗಿದೆ. ಇವರಿಬ್ಬರೂ ಈ ಸ್ಥಿತಿಯಲ್ಲಿರುವುದನ್ನು ಕಂಡೂ ಅವರು ಭಂಡತನದಿಂದ ಅಲ್ಲೇ ನೋಡುತ್ತಾ ನಿಂತಿದ್ದಾರೆ. ಇದು ಭುವಿಯ ಕಣ್ಣಿಗೆ ಬಿದ್ದು ಆಕೆ ನಾಚಿಕೆಯಲ್ಲಿ ತಲೆ ತಗ್ಗಿಸುವ ಹಾಗಾಗಿದೆ.

Kannadathi: ರಂಜಿನಿ ರಾಘವನ್ ಒಗಟು ಚಾಲೆಂಜ್, ನೀವಿದ್ದೀರಾ?

ರೊಮ್ಯಾಂಟಿಕ್ ಮೂಡ್‌ನಲ್ಲಿದ್ದ ಹರ್ಷನ ಬಳಿ ತನಗೇನೋ ಮಾತನಾಡೋದಿದೆ ಅಂತ ಚಿಕ್ಕಪ್ಪ ಹೇಳಿದ್ದಾರೆ. ಈ ಮಾತು ನಮ್ಮಿಬ್ಬರ ನಡುವೆ, ಮೂರನೇಯವರನ್ನು ಹೊರಗೆ ಕಳಿಸು ಅಂತ ಭುವಿಯನ್ನು ಹೊರಗೆ ಕಳಿಸೋದಕ್ಕೆ ಹೇಳಿದ್ದಾರೆ. ಆದರೆ ಹರ್ಷ ಆಕೆ ನಮ್ಮ ಮನೆಯವಳು, ಮೂರನೆಯವಳಲ್ಲ. ಆಕೆಯ ಎದುರೇ ಆ ವಿಚಾರ ಹೇಳುವಂತೆ ಹೇಳಿದ್ದಾನೆ. ಇದೀಗ ಕೊಳಕು ಮನಸ್ಸಿನ ಚಿಕ್ಕಪ್ಪ ತನ್ನ ಸ್ವಾರ್ಥ ಬುದ್ಧಿಯನ್ನು ಭುವಿಯ ಎದುರೂ ತೆರೆದಿಡಬೇಕಿದೆ.

View post on Instagram

ಇನ್ನೊಂದೆಡೆ ವರ ಮಹಾಲಕ್ಷ್ಮಿ ಹಬ್ಬಕ್ಕೆ ಮನೆಯವರೆಲ್ಲ ಸಡಗರದಿಂದ ರೆಡಿ ಆಗುತ್ತಿರುವಾಗಲೇ ಅಮ್ಮಮ್ಮ ಬರುವ ಸಾಧ್ಯತೆ ಇದೆ. ಅಲ್ಲಿ ಈ ಮನೆಯ ಮಹಾಲಕ್ಷ್ಮಿಯಂತಿರುವ ಅಮ್ಮಮ್ಮನ ಆಗಮನದಿಂದ ಹಬ್ಬಕ್ಕೆ ಇನ್ನಷ್ಟು ಕಳೆ ಬರುವುದರಲ್ಲಿ ಸಂದೇಹವಿಲ್ಲ. ಈ ಮೂಲಕ ಭುವಿಯ ಮೇಲಿನ ದಬ್ಬಾಳಿಕೆಯೂ ಕೊನೆಯಾಗುವ ಸೂಚನೆ ಇದೆ. ಅವಳು ಅವಳಾಗಿ ಬೆಳೆಯಲು ಅಮ್ಮಮ್ಮ ಸಾಥ್ ನೀಡಬಹುದು.

ಅಮ್ಮಮ್ಮನ ಪಾತ್ರದಲ್ಲಿ ಚಿತ್ಕಳಾ ಬಿರಾದಾರ್, ಹರ್ಷನ ಪಾತ್ರದಲ್ಲಿ ಕಿರಣ್‌ರಾಜ್‌, ಭುವಿಯ ಪಾತ್ರದಲ್ಲಿ ರಂಜನಿ ರಾಘವನ್ ನಟಿಸುತ್ತಿದ್ದಾರೆ.