ಹೊಸ ಸಂಶೋಧನೆ ಬಹಿರಂಗಪಡಿಸಿದ ವಿಜ್ಞಾನ ಜಗತ್ತು! ಮನುಷ್ಯ ಸತ್ತ ಬಳಿಕವೂ ಮೆದುಳು ಕ್ರಿಯಾಶೀಲವಾಗಿರುತ್ತದೆ! ಮನುಷ್ಯನಿಗೆ ತನ್ನ ಸಾವು ಹೇಗಾಯಿತು ಎಂಬುದು ತಿಳಿದಿರುತ್ತೆ! ನ್ಯೂಯಾರ್ಕ್ ನ ಸ್ಟೊನಿ ಬ್ರೂಕ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್! ಬೆಚ್ಚಿ ಬೀಳುವಂತ ಸಂಶೋಧನೆ ಕೈಗೊಂಡ ವಿವಿ ಸಂಶೋಧಕರು

ಬೆಂಗಳೂರು(ನ.27): ಹುಟ್ಟು ಆಕಸ್ಮಿಕ, ಸಾವು ಖಚಿತ ಅಂತಾರೆ ತಿಳಿದವರು. ಈ ಮಾತಿನಲ್ಲಿ ಅದೆಷ್ಟು ಸತ್ಯ ಇದೆ ನೋಡಿ. ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಒಂದಿಲ್ಲ ಒಂದು ದಿನ ಸಾಯಲೇಬೇಕು. ಇದು ಪ್ರಕೃತಿ ನಿಯಮ.

Add Asianetnews Kannada as a Preferred SourcegooglePreferred

ವಿಜ್ಞಾನದ ಪ್ರಕಾರ ಸಾವು ಎಂದರೆ ಮನುಷ್ಯನ ಅಂಗಾಂಗಗಳು ಕೆಲಸ ಮಾಡುವುದನ್ನು ನಿಲ್ಲಿಸುವುದು. ಆಧ್ಯಾತ್ಮದ ಪ್ರಕಾರ ಮನುಷ್ಯನ ಸಾವು ಎಂದರೆ ಆತ್ಮ ಪರಮಾತ್ಮನಲ್ಲಿ ಲೀನವಾಗುವುದು.

ಆಧ್ಯಾತ್ಮ-ವಿಜ್ಞಾನಗಳ ತತ್ವ ಸಿದ್ಧಾಂತ ಏನೇ ಇರಲಿ, ಈ ಎರಡೂ ಪ್ರಕಾರಗಳು ಪ್ರತಿಯೊಂದು ಜೀವಿಗೂ ಸಾವಿದೆ ಎಂಬುದನ್ನು ಮಾತ್ರ ಖಚಿತವಾಗಿ ಹೇಳುತ್ತವೆ. ಆದರೆ ಮನುಷ್ಯನ ಅಂಗಾಗಗಳಲ್ಲೇ ಪ್ರಮುಖ ಅಂಗವಾದ ಮೆದುಳು ಮಾತ್ರ ಮನುಷ್ಯನ ಸತ್ತ ನಂತರವೂ ಸಾವಿನ ಕುರಿತು ಮಾಹಿತಿ ಶೇಖರಿಸಿರುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ಹೌದು, ಮೆದುಳು ವ್ಯಕ್ತಿ ಸತ್ತ ನಂತರವೂ ಕೆಲ ಕ್ಷಣಗಳವರೆಗೆ ಕೆಲಸ ನಿರ್ವಹಿಸುತ್ತದೆ. ಹೀಗಾಗಿ ಮನುಷ್ಯನಿಗೆ ತನ್ನ ಸಾವಿನ ನಂತರ ತಾನು ಸತ್ತಿರುವುದಾಗಿ ತಿಳಿದಿರುತ್ತದೆ ಎನ್ನುತ್ತದೆ ನೂತನ ಸಂಶೋಧನೆ.

ಈ ಕುರಿತು ಸಂಶೋಧನೆ ನಡೆಸಿರುವ ನ್ಯೂಯಾರ್ಕ್ ನ ಸ್ಟೊನಿ ಬ್ರೂಕ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಸಂಶೋಧಕರು, ಮನುಷ್ಯನ ಸಾವಿನ ಬಳಿಕವೂ ಆತನ ಮೆದುಳು ಕ್ರಿಯಾಶೀಲವಾಗಿರುತ್ತದೆ ಎಂದು ತಿಳಿಸಿದೆ.

ಅಂದರೆ ಮನುಷ್ಯ ಸತ್ತ ಬಳಿಕವೂ ಆತನ ಸಾವು ಹೇಗಾಯಿತು?, ಸತ್ತ ಬಳಿಕ ಆತನ ಸುತ್ತ ಏನಾಗುತ್ತಿದೆ? ಎಂಬುದರ ಅರಿವಿರುತ್ತದೆ. ಸಾವಿನ ಬಳಿಕ ಮನುಷ್ಯನ ಇತರ ಎಲ್ಲಾ ಅಂಗಗಳೂ ನಿಷ್ಕ್ರೀಯಗೊಂಡರೂ ಮೆದುಳು ಮಾತ್ರ ಕೆಲವು ಕ್ಷಣಗಳವರೆಗೆ ಕ್ರಿಯಾಶೀಲವಾಗಿರುತ್ತದೆ ಎಂಬುದು ಸಂಶೋಧಕರ ಅಂಬೋಣ.