ಖಾಸಗಿ ಕ್ಲಿನಿಕ್‌ನಲ್ಲಿ ಜ್ವರಕ್ಕೆ ಚುಚ್ಚುಮದ್ದು ಪಡೆದ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಬೆಂಗಳೂರು (ಆ.20) :  ಖಾಸಗಿ ಕ್ಲಿನಿಕ್‌ನಲ್ಲಿ ಜ್ವರಕ್ಕೆ ಚುಚ್ಚುಮದ್ದು ಪಡೆದ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಮಾಗಡಿ ರಸ್ತೆಯ 5ನೇ ಕ್ರಾಸ್‌ ನಿವಾಸಿ ಅಮರ್‌ ಶೆಟ್ಟಿ(31) ಮೃತರು. ಪ್ರಾಥಮಿಕ ಚಿಕಿತ್ಸೆ ನೀಡಿದ್ದ ಕೆ.ಪಿ.ಅಗ್ರಹಾರದ ಭಾಗ್ಯ ಕ್ಲಿನಿಕ್‌ನ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕುಂದಾಪುರ ಮೂಲದ ಅಮರ್‌ ಶೆಟ್ಟಿದುಬೈನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದು ಹೋಟೆಲ್‌ ಉದ್ಯಮ ಆರಂಭಿಸಿದ್ದರು. ಮಾಗಡಿ ರಸ್ತೆಯ 5ನೇ ಕ್ರಾಸ್‌ನಲ್ಲಿ ನೆಲೆಸಿದ್ದರು. ಆ.13ರಂದು ಜ್ವರದಿಂದ ಬಳಲುತ್ತಿದ್ದ ಅಮರ್‌, ಕೆ.ಪಿ.ಅಗ್ರಹಾರ ಭಾಗ್ಯ ಕ್ಲಿನಿಕ್‌ಗೆ ತೆರಳಿದ್ದರು. ಪರೀಕ್ಷೆ ಮಾಡಿದ ವೈದ್ಯರು ಚುಚ್ಚುಮದ್ದು ನೀಡಿ ಕೆಲ ಮಾತ್ರೆ ಕೊಟ್ಟು ಕಳುಹಿಸಿದ್ದರು. ಬಳಿಕ ಚುಚ್ಚುಮದ್ದು ನೀಡಿದ್ದ ಜಾಗದಲ್ಲಿ ಊತ ಉಂಟಾಗಿ ನೋವು ಕಾಣಿಸಿಕೊಂಡಿದೆ.

ಮಂಗಳೂರು ಪ್ರತಿಷ್ಠಿತ ಎ.ಜೆ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಗರ್ಭಿಣಿ ಸಾವು, ರಣರಂಗವಾದ ಆಸ್ಪತ್ರೆ ಆವರಣ

ಆ.16ರಂದು ಅಮರ್‌, ರಾಜಾಜಿನಗರದ ಚೇತನ್‌ ಕ್ಲಿನಿಕ್‌ಗೆ ತೆರಳಿದ್ದರು. ಇಲ್ಲಿ ಪರೀಕ್ಷೆ ಮಾಡಿದ ವೈದ್ಯರು ನೋವು ನಿವಾರಕ ಮಾತ್ರೆ ನೀಡಿ, ಗ್ಲುಕೋಸ್‌ ಹಾಕಿ ಕಳುಹಿಸಿದ್ದರು. ಆದರೂ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಅಮರ್‌ ತೀವ್ರ ಅಸ್ವಸ್ಥಗೊಂಡಿದ್ದರು. ಬಳಿಕ ಚೇತನ್‌ ಕ್ಲಿನಿಕ್‌ನ ವೈದ್ಯರ ಸಲಹೆ ಮೇರೆಗೆ ಅಮರ್‌ನನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸಿದೆ ಅಮರ್‌ ಆ.18ರಂದು ಮೃತಪಟ್ಟಿದ್ದಾರೆ.

ನಿರ್ಲಕ್ಷ್ಯದ ಆರೋಪ:

ಅಮರ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಭಾಗ್ಯ ಕ್ಲಿನಿಕ್‌ನ ವೈದ್ಯ ರಂಜಿತ್‌ ಹಾಗೂ ಸಿಬ್ಬಂದಿ ನಿರ್ಲಕ್ಷ್ಯವೇ ಅಮರ್‌ ಸಾವಿಗೆ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಅಮರ್‌ಗೆ ಸರಿಯಾದ ಚುಚ್ಚಮದ್ದು ಹಾಗೂ ಮಾತ್ರೆಗಳನ್ನು ನೀಡದೇ ಇರುವುದು ಸಾವಿಗೆ ಕಾರಣವಾಗಿರುವ ಅನುಮಾನವಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಲಡ್ ಸ್ಯಾಂಪಲ್ ವರದಿ ರಾಂಗ್: ಗರ್ಭಿಣಿಯ ಜೀವದ ಜೊತೆ ಕೊಪ್ಪಳ ಜಿಲ್ಲಾಸ್ಪತ್ರೆ ವೈದ್ಯರ ಚೆಲ್ಲಾಟ!