Asianet Suvarna News Asianet Suvarna News

ಮಾಡಾಳ್ ವಿರುಪಾಕ್ಷಪ್ಪ ಬೇಲ್‌ ರದ್ದು ಮಾಡೋಕೆ ಅರ್ಜೆಂಟ್‌ ಯಾಕೆ?: ಲೋಕಾಯುಕ್ತಗೆ ಸುಪ್ರೀಂ ತರಾಟೆ

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಿಂದ ನೀಡಲಾಗಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ ಲೋಕಾಯುಕ್ತ ಪೊಲೀಸರಿಗೆ ಸ್ವಲ್ಪ ಹಿನ್ನಡೆ ಉಂಟಾಗಿದೆ. 

Why urgent to cancel the Madal virupakshappa bail Supreme Court slams Lokayukta sat
Author
First Published Mar 14, 2023, 12:37 PM IST

ನವದೆಹಲಿ (ಮಾ.14): ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಿಂದ ನೀಡಲಾಗಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ ಲೋಕಾಯುಕ್ತ ಪೊಲೀಸರಿಗೆ ಸ್ವಲ್ಪ ಹಿನ್ನಡೆ ಉಂಟಾಗಿದೆ. 

ಈ ಪ್ರಕರಣವನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಾಧೀಶರ ಪೀಠವು ಈ ಪ್ರಕರಣವನ್ನು ನ್ಯಾಯಮೂರ್ತಿ ಕೌಲ್‌ ಪೀಠಕ್ಕೆ ವರ್ಗಾಯಿಸಿದೆ. ಆದರೆ, ನ್ಯಾಯಮೂರ್ತಿ ಕೌಲ್‌ ಅವರು ಕೆಲವು ದಿನಗಳ ನಂತರ ಪ್ರಕರಣ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದು, ಇದರಿಂದ ಮಾಡಾಳ್‌ ವಿರುಪಾಕ್ಷಪ್ಪನಿಗೆ ಸ್ವಲ್ಪ ಕಾಲ ರಿಲೀಫ್‌ ಸಿಕ್ಕಂತಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಸ್‌ಡಿಎಲ್‌) ಮಾಜಿ ಅಧ್ಯಕ್ಷ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರ ಪುತ್ರ ಕೆಎಸ್‌ಡಿಎಲ್‌ಗೆ ಸಂಬಂಧಿಸಿದಂತೆ 40 ಲಕ್ಷ ರೂ. ಲಂಚವನ್ನು ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. 

ಮಾಡಾಳ್‌ ವಿರುಪಾಕ್ಷಪ್ಪ ಜಾಮೀನು ರದ್ದುಗೊಳಿಸಿ: ಸುಪ್ರೀಂ ಕೋರ್ಟ್‌ ಮೊರೆಹೋದ ಲೋಕಾಯುಕ್ತ ಪೊಲೀಸರು

6 ದಿನ ತಲೆಮರೆಸಿಕೊಂಡು ಜಾಮೀನು: ಈ ವೇಳೆ ಕಚೇರಿಯನ್ನು ಶೋಧಿಸಿದಾಗ 2 ಕೋಟಿ ರೂ ಹಾಗೂ ಮನೆಯಲ್ಲಿ 6 ಕೋಟಿ ರೂ. ದಾಖಲೆಗಳಿಲ್ಲದ ಹಣ ಲಭ್ಯವಾಗಿತ್ತು. ಈ ಪ್ರಕರಣದಲ್ಲಿ ಮಾಡಾಳ್‌ ವಿರುಪಾಕ್ಷಪ್ಪನನ್ನು ಎ1 ಆರೋಪಿಯನ್ನಾಗಿ ಮಾಡಿ ಬಂಧಿಸಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದರು. ಆದರೆ, 6 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಮಾಡಾಳ್‌ ವಿರುಪಾಕ್ಷಪ್ಪ ವಕೀಲರೊಂದಿಗೆ ಹೈಕೋರ್ಟ್‌ನಲ್ಲಿ ಜಾಮೀನು ಪಡೆದುಕೊಂಡು ಸಾರ್ವಜನಿಕವಾಗಿ ಪ್ರತ್ಯಕ್ಷವಾಗಿದ್ದರು. ಆದರೆ, ಹೈಕೋರ್ಟ್‌ ನೀಡಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಲೋಕಾಯುಕ್ತ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಒಂದೇ ದಿನದಲ್ಲಿ ಜಾಮೀನು ನೀಡಿದ ಕೋರ್ಟ್: ಲೋಕಾಯುಕ್ತ ಪೊಲೀಸರು ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಜಾಮೀನು ರದ್ದು ಕೋರಿದ್ದ ಅರ್ಜಿಯು ಸುಪ್ರೀಂ ಕೋರ್ಟ್ ನಲ್ಲಿ ಇಂದು ವಿಚಾರಣೆಗೆ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿಗಳು ಲೋಕಾಯುಕ್ತ ಪರ ವಕೀಲರ ವಾದವನ್ನು ಆಲಿಸಿದ್ದಾರೆ. ಈ ವೇಳೆ ಲೋಕಾಯುಕ್ತ ಪರ ಬಸವಪ್ರಭು ಎಸ್.ಪಾಟೀಲ್ ನ್ಯಾಯಾಲಯದಲ್ಲಿ ಹಾಜರಾಗಿ ವಾದ ಮಂಡಿಸಿದ್ದಾರೆ. ಶಾಸಕರ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ದಾಖಲೆಗಳಿಲ್ಲದ ಹಣವನ್ನು ಸೀಜ್ ಮಾಡಲಾಗಿದೆ. ಹೈಕೋರ್ಟ್ ನಲ್ಲಿ ಒಂದೇ ದಿನದಲ್ಲಿ ಪ್ರಮುಖ ಆರೋಪಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಇದರಿಂದಾಗಿ ತಪ್ಪು ಸಂದೇಶ ರವಾನೆ ಆಗುತ್ತಿದೆ ಎಂದು ಲೋಕಾಯುಕ್ತ ಪರ ವಕೀಲರು ಹೇಳಿದ್ದರು. 

ಸಂಜಯ್‌ ಕಿಶಲ್‌ ಕೌಲ್‌ ಪೀಠಕ್ಕೆ ಅರ್ಜಿ ವರ್ಗ: ಆದರೆ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಈ ಅರ್ಜಿಯನ್ನ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಪೀಠಕ್ಕೆ‌ವರ್ಗಾವಣೆ ಮಾಡುತ್ತಿದ್ದೇನೆ. ಆ ಪೀಠದಲ್ಲಿ ಮನವಿ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ. ಇನ್ನು ಲೋಕಾಯುಕ್ತ ಪರ ವಕೀಲರಿಗೆ ನ್ಯಾ.ಕೌಲ್ ಪೀಠದಲ್ಲಿ ಮನವಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಆದ್ದರಿಂದ ನ್ಯಾ.ಕೌಲ್ ಪೀಠದ ಮುಂದೆಯೂ ಲೋಕಾಯುಕ್ತ ಪರ ವಕೀಲ ಬಸವಪ್ರಭು ಅವರು ಇಂದೇ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮನವಿ ಸಲ್ಲಿಸಿದ್ದರು.

ಬೆಂಗಳೂರು: ಲಂಚ ಕೇಸ್‌: ಮಾಡಾಳು ವಿರುಪಾಕ್ಷಪ್ಪಗೆ ಸತತ 6 ತಾಸು ಗ್ರಿಲ್‌

ಆದಷ್ಟು ಬೇಗ ಅರ್ಜಿ ವಿಚಾರಣೆ ಭರವಸೆ: ಆದರೆ, ಇಂದೇ ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೌಲ್‌ ಅವರು ನಿರಾಕರಣೆ ಮಾಡಿದ್ದಾರೆ. ಮಾಡಾಳ್‌ ವಿರುಪಾಕ್ಷಪ್ಪ ಬೇಲ್‌ ರದ್ದು ಮಾಡುವುದಕ್ಕೆ ಯಾಕಿಷ್ಟು ಆತುರ. ಆದಷ್ಟು ಬೇಗ ಈ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಪ್ರಶ್ನೆ ಮಾಡಿದ್ದಾರೆ. ಇದರಿಂದ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರಿಗೆ ಸ್ವಲ್ಪ ದಿನಗಳ ಕಾಲ ಬಂಧನದ ಭೀತಿಯಿಂದ ರಿಲೀಫ್‌ ಸಿಕ್ಕಂತಾಗಿದೆ.

Follow Us:
Download App:
  • android
  • ios