ನಿತ್ಯಾನಂದ ನಮ್ಮ ರಾಷ್ಟ್ರದಲ್ಲಿಲ್ಲ: ಈಕ್ವೆಡಾರ್‌| ಆತ ಹೈಟಿ ದೇಶದಲ್ಲಿ ಇರಬಹುದು| ಆತ ಆಶ್ರಯ ಕೇಳಿದ್ದು ನಿಜ, ಆದರೆ ನಿತ್ಯಾಗೆ ಈಕ್ವೆಡಾರ್‌ ಆಶ್ರಯ ನೀಡಲಿಲ್ಲ| ದ್ವೀಪವೊಂದರ ಖರೀದಿಗೆ ಈಕ್ವೆಡಾರ್‌ ಸಹಕಾರವೂ ಸತ್ಯ ಅಲ್ಲ| ಭಾರತೀಯ ಮಾಧ್ಯಮಗಳಲ್ಲಿನ ವರದಿಗೆ ಈಕ್ವೆಡಾರ್‌ ಸ್ಪಷ್ಟನೆ

ನವದೆಹಲಿ[ಡಿ.07]: ಮಕ್ಕಳ ಅಪಹರಣ ಮತ್ತು ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಆರೋಪಿ ಹಾಗೂ ವಿವಾದಿತ ಸ್ವಾಮಿ ನಿತ್ಯಾನಂದ ಈಕ್ವೆಡಾರ್‌ನಲ್ಲಿ ನೆಲೆಸಿದ್ದಾನೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ, ‘ಸ್ವಯಂಘೋಷಿತ ದೇವಮಾನವ ನಿತ್ಯಾನಂದ ತಮ್ಮ ರಾಷ್ಟ್ರದಲ್ಲಿಲ್ಲ. ಆತ ಹೈಟಿ ದೇಶದಲ್ಲಿರಬಹುದು’ ಎಂದು ಈಕ್ವೆಡಾರ್‌ ಸ್ಪಷ್ಟನೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಶುಕ್ರವಾರ ಸ್ಪಷ್ಟನೆ ರೂಪದ ಪ್ರಕಟಣೆ ನೀಡಿರುವ ಮಧ್ಯ ಅಮೆರಿಕದ ಈಕ್ವೆಡಾರ್‌ ರಾಯಭಾರಿ, ‘ನಿತ್ಯಾನಂದನಿಗೆ ನಮ್ಮ ದೇಶ ಆಶ್ರಯ ನೀಡಿದೆ ಅಥವಾ ದಕ್ಷಿಣ ಅಮೆರಿಕದಲ್ಲಿ ದ್ವೀಪವೊಂದರ ಖರೀದಿಗೆ ಈಕ್ವೆಡಾರ್‌ ಸರ್ಕಾರ ನೆರವು ನೀಡಿದೆ ಎಂಬ ಆರೋಪಗಳು ಸುಳ್ಳು’ ಎಂದು ಹೇಳಿದ್ದಾರೆ.

ಅಲ್ಲದೆ, ‘ನಿತ್ಯಾನಂದ ತಮ್ಮಲ್ಲಿ ಆಶ್ರಯ ಕೇಳಿಬಂದಿದ್ದು ಸತ್ಯ. ಆದರೆ, ಆತನ ಮನವಿಯನ್ನು ತಿರಸ್ಕರಿಸಿದ ಕಾರಣಕ್ಕೆ, ನಿತ್ಯಾನಂದ ಕೆರಿಬಿಯನ್‌ನಲ್ಲಿರುವ ಹೈಟಿ ದ್ವೀಪ ರಾಷ್ಟ್ರಕ್ಕೆ ಪಲಾಯನ ಮಾಡಿರಬಹುದು’ ಎಂದೂ ತಿಳಿಸಿದ್ದಾರೆ.

‘ನಿತ್ಯಾನಂದ ಪ್ರತ್ಯೇಕ ದೇಶ ಸ್ಥಾಪಿಸಿದ್ದಾನೆ. ಈಕ್ವೆಡಾರ್‌ನಲ್ಲಿದ್ದಾನೆ ಎಂಬುದೆಲ್ಲ ಆತನದ್ದೆಂದು ಹೇಳಲಾದ ‘ಕೈಲಾಸ ಡಾಟ್‌ ಒಆರ್‌ಜಿ’ ವೆಬ್‌ಸೈಟ್‌ ಮೂಲಕ ಮಾಡಲಾದ ವರದಿಗಳು. ಹೀಗಾಗಿ ನಿತ್ಯಾನಂದನ ಕುರಿತು ವರದಿ ಪ್ರಕಟಿಸುವಾಗ ಈಕ್ವೆಡಾರ್‌ ಹೆಸರು ಎಳೆದು ತರಬೇಡಿ’ ಎಂದೂ ಅವರು ಭಾರತೀಯ ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದ್ದಾರೆ.

2018ರಲ್ಲಿ ಅತ್ಯಾಚಾರ ಪ್ರಕರಣ ಸಂಬಂಧ ತನ್ನ ವಿರುದ್ಧ ದೋಷಾರೋಪ ದಾಖಲಾಗುತ್ತಿದ್ದಂತೆಯೇ ಬಂಧನಕ್ಕೊಳಗಾಗುವ ಭೀತಿಯಿಂದ ನಿತ್ಯಾನಂದ, ‘ನಕಲಿ ಪಾಸ್‌ಪೋರ್ಟ್‌ ಪಡೆದು ನೇಪಾಳ ಮೂಲದ ಮಧ್ಯ ಅಥವಾ ದಕ್ಷಿಣ ಅಮೆರಿಕದ ರಾಷ್ಟ್ರವೊಂದಕ್ಕೆ ಪರಾರಿಯಾಗಿದ್ದ’ ಎಂದು ಹೇಳಲಾಗಿತ್ತು.