ಸಾಗರ ತಾಲೂಕಿನ ಎಡಮನೆ ಗ್ರಾಮದ 16 ಕುಟುಂಬಗಳ ತೆರವಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ. ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಹರತಾಳು ಹಾಲಪ್ಪ, ಶರಾವತಿ ಸಂತ್ರಸ್ತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಭರವಸೆ ನೀಡಿ, ರಾಜ್ಯ ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗ (ಫೆ.14): ಸಾಗರ ತಾಲೂಕಿನ ಕರೂರು ಹೋಬಳಿ ವ್ಯಾಪ್ತಿಯ ಚನ್ನಗೊಂಡ ಗ್ರಾಮ ಪಂಚಾಯಿತಿಯ ಕಟ್ಟಿನಕಾರು ಸಮೀಪದ ಎಡಮನೆಯ ಕುಟುಂಬಗಳ ತೆರವಿಗೆ ಅರಣ್ಯ ಇಲಾಖೆ ನೋಟಿಸ್‌ ನೀಡಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು.

Add Asianetnews Kannada as a Preferred SourcegooglePreferred

ನಂತರ ಗ್ರಾಮಸ್ಥರಿಗೆ ದೈರ್ಯತುಂಬಿ ಶರಾವತಿ ಸಂತ್ರಸ್ತರಾದ ಎಡಮನೆ ಗ್ರಾಮದ ಉಳುವವನೇ ಹೊಲದ 16 ಕುಟುಂಬಗಳು ತಲೆ ತಲಾಂತರದಿಂದ ಇಲ್ಲಿ ಬದುಕು ಕಟ್ಟಿಕೊಂಡವರಾಗಿದ್ದು ಒಡೆಯರಾಗಿದ್ದಾರೆ. ಯಾವ ಕಾರಣಕ್ಕೂ ಇಲ್ಲಿನ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ.

ಭತ್ತ, ಅಡಕೆ ಮತ್ತು ತೆಂಗು ಬೆಳೆಯುತ್ತಿದ್ದಾರೆ. ದಾಖಲೆಯಲ್ಲಿ ಕಾನೂನು ತೊಡಕಿದೆ ಅನ್ನುವ ಕಾರಣ ನೀಡಿ ಒಕ್ಕಲೆಬ್ಬಿಸುವುದು ಸರಿಯಲ್ಲ. ಇದನ್ನು ಪಕ್ಷದಿಂದ ರಾಜ್ಯಮಟ್ಟದಲ್ಲಿ ಹೋರಾಟ ಮಾಡಲಿದ್ದೇವೆ ಎಂದರು. 2013 ರ ಜ.5 ರಂದು ಕೋರ್ಟ್ ಆದೇಶ ಆಗಿರುವುದು. ಆಗ ಅಧಿಕಾರದಲ್ಲಿ ಇದ್ದವರು ಯಾರು? ಇಷ್ಟು ವರ್ಷಗಳ ಕಾಲ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ಇದಕ್ಕೆಲ್ಲ ನೇರವಾಗಿ ರಾಜ್ಯ ಸರ್ಕಾರ, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಾರಣ ಎಂದು ದೂರಿದರು.

ದೇವೇಂದ್ರಪ್ಪ ಯಲಕುಂಡ್ಲಿ, ತಾಪಂ ಮಾಜಿ ಅಧ್ಯಕ್ಷ ಬಿ.ಸಿ.ಲಕ್ಷ್ಮೀನಾರಾಯಣ ಭಟ್, ಪಂಚಾಯಿತಿ ಸದಸ್ಯರಾದ ನಾಗರಾಜ್ ವಾಟೆಮಕ್ಕಿ, ರಾಜೇಶ್ ಯಲಕೋಡ ಮುಂತಾದವರು ರೈತರ ಭೇಟಿ ಮಾಡಿದರು

YouTube video player