Asianet Suvarna News Asianet Suvarna News

ಅನಾಥರಿಗೆ ಆಶ್ರಯ ನೀಡಿದ್ದ ಆಶ್ರಯದಾತ ಅಕಾಲಿಕ ಮರಣ; ಕುಟುಂಬವೇ ಅನಾಥ!

ಮನೆ ಮಠ ಇಲ್ಲದೆ ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದ 32 ಹಿರಿಯ ಜೀವಗಳಿಗೆ ಆಶ್ರಯ ನೀಡಿ ಮೂರು ಹೊತ್ತು ಊಟ ಹಾಕುತ್ತಿದ್ದ ಆಶ್ರಯದಾತನೇ ಅಕಾಲಿಕ ಮರಣಕ್ಕೆ ತುತ್ತಾಗಿರುವುದು ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗುವಂತೆ ಮಾಡಿದೆ. 

Vikas Seva Trust Orphanage Owner Ramesh Untimely Death at kodagu rava
Author
First Published Oct 8, 2023, 6:49 PM IST

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಅ.8) : ಮನೆ ಮಠ ಇಲ್ಲದೆ ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದ 32 ಹಿರಿಯ ಜೀವಗಳಿಗೆ ಆಶ್ರಯ ನೀಡಿ ಮೂರು ಹೊತ್ತು ಊಟ ಹಾಕುತ್ತಿದ್ದ ಆಶ್ರಯದಾತನೇ ಅಕಾಲಿಕ ಮರಣಕ್ಕೆ ತುತ್ತಾಗಿರುವುದು ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗುವಂತೆ ಮಾಡಿದೆ. 

ಹೌದು ಕೊಡಗು ಜಿಲ್ಲೆಯ ಮಡಿಕೇರಿ ನಿವಾಸಿ ರಮೇಶ್ ಮತ್ತು ಅವರ ಪತ್ನಿ ರೂಪ ಅವರು ಕಳೆದ 8 ವರ್ಷಗಳಿಂದ ವಿಕಾಸ್ ಜನಸೇವಾ ಟ್ರಸ್ಟ್ ಹೆಸರಿನ ಮೂಲಕ ಅನಾಥ ಆಶ್ರಮ ನಡೆಸುತ್ತಿದ್ದರು. ಸರ್ಕಾರದ ಯಾವುದೇ ಅನುದಾನವಿಲ್ಲದೆ ದಾನಿಗಳ ಸಹಾಯ ಮತ್ತು ಸ್ವಂತ ದುಡಿಮೆಯಿಂದ ಬಂದ ಹಣದಲ್ಲಿ 32 ಅನಾಥ ವೃದ್ಧರನ್ನು ಸಾಕಿ ಸಲವುತ್ತಿದ್ದರು. ಆದರೆ ಅಕ್ಟೋಬರ್ 4 ರ ರಾತ್ರಿ ನಡೆದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಪತಿ ಪತ್ನಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮುಂಜಾನೆ ರಮೇಶ್ ಸಾವನ್ನಪ್ಪಿದ್ದಾರೆ. 

ನಸುಕಿನ ಜಾವ ಖಾಸಗಿ ಶಾಲಾ ವಾಹನಕ್ಕೆ ಬೆಂಕಿಯಿಟ್ಟು ಕಿಡಿಗೇಡಿಗಳು ಪರಾರಿ!

ಶೇ 80 ರಷ್ಟು ಸುಟ್ಟ ಗಾಯಗಳಾಗಿರುವ ರಮೇಶ್ ಅವರ ಪತ್ನಿ ರೂಪ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ರಮೇಶ್ ಅವರ ಪಾರ್ಥೀವ ಶರೀರವನ್ನು ಇಂದು ಮಧ್ಯಾಹ್ನ ಸುಂಟಿಕೊಪ್ಪ ಸಮೀಪದ ತೊಂಡೂರಿನಲ್ಲಿ ಇರುವ ಅನಾಥ ಆಶ್ರಮಕ್ಕೆ ತಂದು ಸ್ವಲ್ಪ ಸಮಯ ಇರಿಸಿ ಬಳಿಕ ಮಡಿಕೇರಿಗೆ ಮೃತದೇಹ ರವಾನಿಸಲಿದ್ದಾರೆ. 

ಸೋಮವಾರ ಬೆಳಗ್ಗೆ ಅಂತ್ಯ ಸಂಸ್ಕಾರ ನೆರವೇರಿಸಲಿದ್ದಾರೆ. ತಮ್ಮ ಆಶ್ರಮದಲ್ಲಿ ಸಾವನ್ನಪ್ಪುತ್ತಿದ್ದ ಅನಾಥ ವೃದ್ಧರ ಅಂತ್ಯ ಸಂಸ್ಕಾರವನ್ನು ರಮೇಶ್ ಅವರೇ ನೆರವೇರಿಸುತ್ತಿದ್ದರು. ಇದೀಗ ರಮೇಶ್ ಅವರು ಇಲ್ಲದಿರುವುದನ್ನು ಅನಾಥ ಆಶ್ರಮದಲ್ಲಿರುವ ವೃದ್ಧರು ನೆನೆದು ಕಣ್ಣೀರಿಡುತ್ತಿದ್ದಾರೆ. ಮಕ್ಕಳೇ ತಾಯಿಯನ್ನು ಅನಾಥೆಯೆಂದು ಹೇಳಿ ನಮ್ಮ ಆಶ್ರಮಕ್ಕೆ ತಂದು ಸೇರಿಸಿದ್ದರು. 

ಆ ತಾಯಿ ಸತ್ತಾಗ ಮಕ್ಕಳಿಗೆ ಹೇಳಿದರೂ ಬಾರದೆ ತಾನೇ ಅಂತ್ಯ ಸಂಸ್ಕಾರ ಮಾಡುತ್ತಿದ್ದೆ ಎಂದು ರಮೇಶ್ ಹೇಳುತ್ತಿದ್ದರು. ಇಂತಹ ಹಲವಾರು ಜನರಿಗೆ ಆಶ್ರಯ ನೀಡಿದ್ದ ರಮೇಶ್ ಹೀಗೆ ಅಕಾಲಿಕ ಮರಣಕ್ಕೆ ತುತ್ತಾಗಿರುವುದು ಜಿಲ್ಲೆಯ ಜನರನ್ನು ದುಃಖಕ್ಕೆ ತಳ್ಳಿದೆ. 

ಅನಾಥ ಆಶ್ರಮ ಅಷ್ಟೇ ಅಲ್ಲ ರಸ್ತೆ ಬದಿಯಲ್ಲಿ ಇರುತ್ತಿದ್ದ ಬುದ್ಧಿ ಮಾಂದ್ಯರನ್ನು ಬೆಂಗಳೂರಿನ ವಿವಿಧ ಸಂಸ್ಥೆಗಳಿಗೆ ಕರೆದೊಯ್ದು ಅವರಿಗೆ ಚಿಕಿತ್ಸೆ ಕೊಡಿಸಿ ಬಳಿಕ ಅಲ್ಲಿಯೇ ಆಶ್ರಯ ಕೊಡಿಸುವ ಕೆಲಸವನ್ನು ರಮೇಶ್ ಮಾಡುತ್ತಿದ್ದರು. ಅವರ ಪತ್ನಿ ರೂಪ ರಮೇಶ್ ಅವರ ಎಲ್ಲಾ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತು ಆಶ್ರಮ ನಡೆಸುತ್ತಿದ್ದರು. 

ಇದು ಒಂದೆಡೆಯಾದರೆ ಮತ್ತೊಂದೆಡೆ ಒಂದುವರೆ ದಶಕಕ್ಕೂ ಹೆಚ್ಚು ಸಮಯದಿಂದ ಕನ್ನಡಪರ ಹೋರಾಟ ಮಾಡುತ್ತಿದ್ದ ಕುಶಾಲನಗರದ ನಿವಾಸಿ ವೆಂಕಟೇಶ್ ಪೂಜಾರಿ ಅವರು ಕೂಡ ಭಾನುವಾರ ಮುಂಜಾನೆ ಸಾವನ್ನಪ್ಪಿದ್ದಾರೆ. ಕಳೆದ ಒಂದುವರೆ ದಶಕದಿಂದ ಕನ್ನಡ ನಾಡು ನುಡಿಯ ವಿಷಯಕ್ಕಾಗಿ ಸಾಕಷ್ಟು ಹೋರಾಟಗಳನ್ನು ಮಾಡುತ್ತಿದ್ದರು. ಆದರೆ ಕಳೆದ ಕಳೆದ ಆರು ತಿಂಗಳ ಹಿಂದೆ ಆಕಸ್ಮಿಕವಾಗಿ ಬಿದ್ದು ಕಾಲು ಮುರಿತಕ್ಕೆ ಒಳಗಾಗಿದ್ದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. 

ಬೆಂಕಿ ಭಾನುವಾರ: ಮಂಡ್ಯದ ಮನ್‌ಮುಲ್‌, ಶಿವಮೊಗ್ಗ ಮನೆ, ಕೊಡಗು ಶಾಲಾ ಬಸ್‌ನಲ್ಲಿ ಬೆಂಕಿ- ನಾಲ್ವರ ಸಾವು

ಆರು ತಿಂಗಳಿನಿಂದಲೂ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರು ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡಿರಲಿಲ್ಲ. ಕಳೆದ ಮೂರು ದಿನಗಳ ಹಿಂದೆ ಆರೋಗ್ಯ ಸ್ಥಿತಿ ಗಂಭೀರವಾದಾಗ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮುಂಜಾನೆ ಮೃತಪಟ್ಟಿದ್ದಾರೆ.

Follow Us:
Download App:
  • android
  • ios