ಪಾದರಾಯನಪುರದಲ್ಲಿನ ತಳ್ಳುಗಾಡಿ ತರಕಾರಿ ವ್ಯಾಪಾರಿಗೆ ಸೋಂಕು!| ಈತನಿಂದ ತರಕಾರಿ ಖರೀದಿಸಿದವರಿಗೆಲ್ಲಾ ಕೊರೋನಾತಂಕ| ವ್ಯಾಪಾರಿಗೆ ಸೋಂಕಿತರ ನೇರ ಸಂಪರ್ಕ ಇಲ್ಲ, ಆದರೂ ವೈರಸ್‌

ಬೆಂಗಳೂರು(ಏ.29): ಕೊರೋನಾ ಪ್ರಕರಣಗಳು ಹಾಗೂ ಗಲಭೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸುದ್ದಿಯಾಗಿರುವ ಬೆಂಗಳೂರಿನ ಪಾದರಾಯನಪುರ ಕಂಟೈನ್‌ಮೆಂಟ್‌ ಪ್ರದೇಶದಲ್ಲಿ ತಳ್ಳುವ ಗಾಡಿ ಮೂಲಕ ತರಕಾರಿ ಮಾರುತ್ತಿದ್ದ 48 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ.

Add Asianetnews Kannada as a Preferred SourcegooglePreferred

ಸೋಂಕಿತ ವ್ಯಕ್ತಿ ಯಾವ ಸೋಂಕಿತರೊಂದಿಗೂ ನೇರ ಸಂಪರ್ಕಕ್ಕೆ ಬಂದಿರುವುದು ಈವರೆಗೆ ದೃಢಪಟ್ಟಿರಲಿಲ್ಲ. ಆದರೆ, ಕಂಟೈನ್‌ಮೆಂಟ್‌ ವಲಯವಾಗಿದ್ದರಿಂದ ಪಾದರಾಯನಪುರದಲ್ಲಿ ಆರೋಗ್ಯ ಇಲಾಖೆ ರಾರ‍ಯಂಡಮ್‌ ಪರೀಕ್ಷೆ ನಡೆಸುತ್ತಿದೆ. ಆಗ ಈ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಈತ 513ನೇ ಸೋಂಕಿತನಾಗಿದ್ದಾನೆ.

ಈ ವ್ಯಕ್ತಿಯು ಪಾದರಾಯನಪುರ ಭಾಗದಲ್ಲಿ ತರಕಾರಿ ಮಾರುತ್ತಿದ್ದ ಕಾರಣದಿಂದಾಗಿ ಆತನಿಂದ ತರಕಾರಿ ಕೊಂಡ ಸ್ಥಳೀಯರಲ್ಲಿ ತೀವ್ರ ಆತಂಕ ಉಂಟಾಗಿದೆ. ಆದರೆ ಪೊಲೀಸರ ವಿಚಾರಣೆ ವೇಳೆ ‘ನಾನು 2 ತಿಂಗಳ ಹಿಂದೆಯೇ ತರಕಾರಿ ಮಾರುವುದನ್ನು ನಿಲ್ಲಿಸಿದ್ದೇನೆ’ ಎಂದು ಹೇಳಿದ್ದಾರೆ. ಹೀಗಾಗಿ ಅವರ ಮನೆಯ ಐದು ಮಂದಿ ಸದಸ್ಯರನ್ನು ಮಾತ್ರವೇ ಕ್ವಾರಂಟೈನ್‌ ಮಾಡಲಾಗಿದೆ.

ಪುಣೆ ಕಂಪನಿಯಿಂದ 4 ಕೋಟಿ ಕೊರೋನಾ ಲಸಿಕೆ ತಯಾರಿ!

ಸಮುದಾಯಕ್ಕೆ ಹರಡಿದೆಯೇ ಸೋಂಕು?:

ಈತ ಹೇಳುವ ಪ್ರಕಾರ ಎರಡು ತಿಂಗಳ ಹಿಂದೆಯೇ ತರಕಾರಿ ಮಾರುವುದನ್ನು ನಿಲ್ಲಿಸಿದ್ದರೆ ಸೋಂಕು ಹರಡಿದ್ದು ಹೇಗೆ ಎಂಬುದು ಆತಂಕದ ವಿಷಯವಾಗಲಿದೆ. ಸೀಲ್‌ಡೌನ್‌ ಹಿನ್ನೆಲೆಯಲ್ಲಿ ಈ ಮನೆಯಲ್ಲಿರುವ ಎಲ್ಲರೂ ಮನೆಯಲ್ಲೇ ಇದ್ದರು. ಜೊತೆಗೆ ಅಧಿಕೃತವಾಗಿ ಈ ವ್ಯಕ್ತಿಗೆ ಯಾವ ಸೋಂಕಿತರೂ ಸಂಪರ್ಕಕ್ಕೆ ಬಂದಿಲ್ಲ. ಹೀಗಿದ್ದರೂ ಸೋಂಕು ದೃಢಪಟ್ಟಿರುವುದರಿಂದ ಪಾದರಾಯನಪುರ ವಾರ್ಡ್‌ನಲ್ಲಿ ಸೋಂಕು ಸಮುದಾಯಕ್ಕೆ ಹರಡಿದೆಯೇ ಎಂಬ ಅನುಮಾನ ಮೂಡಿದೆ.

ಒಂದು ವೇಳೆ ಈತ ತರಕಾರಿ ಮಾರುತ್ತಿದ್ದದ್ದು ಸತ್ಯವಾದರೆ ಈತನೊಂದಿಗೆ ನೂರಾರು ಮಂದಿ ಸಂಪರ್ಕ ಹೊಂದಿರುತ್ತಾರೆ. ಈತ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುತ್ತಿದ್ದರಿಂದ ಈತನಿಂದ ನೂರಾರು ಮಂದಿ ಸೋಂಕಿಗೆ ಗುರಿಯಾಗಿರುವ ಸಾಧ್ಯತೆ ಇದೆ.

ಲಾಕ್‌ಡೌನ್ ನಡುವೆ ಗುಡ್‌ನ್ಯೂಸ್: ಮುಚ್ಚಿತು ಓಝೋನ್ ಪದರದ ಅತಿ ದೊಡ್ಡ ರಂಧ್ರ!

ಒಟ್ಟಾರೆ ಈ ಪ್ರಕರಣವು ಆರೋಗ್ಯ ಇಲಾಖೆಗೆ ತೀವ್ರ ಆತಂಕ ಉಂಟು ಮಾಡಿದ್ದು, ಹೆಚ್ಚುವರಿ ವಿಚಾರಣೆಗೆ ವ್ಯಕ್ತಿಯನ್ನು ಒಳಪಡಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಎಲ್ಲಾ ಮಾಹಿತಿಯನ್ನೂ ನೀಡುತ್ತಿದ್ದಾರೆ. ಆದರೆ, ಎರಡು ತಿಂಗಳಿಂದ ಈಚೆಗೆ ತಾನು ತರಕಾರಿ ಮಾರಿಲ್ಲ ಎಂಬುದನ್ನು ಮಾತ್ರ ಖಚಿತವಾಗಿ ಹೇಳುತ್ತಿದ್ದಾರೆ. ಹೀಗಾಗಿ ಪೊಲೀಸರಿಗೂ ಈ ಪ್ರಕರಣ ತಲೆನೋವಾಗಿ ಪರಿಣಮಿಸಿದೆ.