ಬನವಾಸಿಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಂಚಿನಲ್ಲಿದೆ ಎಂದು ಆರೋಪಿಸಿದರು. ಬಡವರಿಗೆ ಮನೆ, ಅತಿವೃಷ್ಟಿ ಪರಿಹಾರ ನೀಡದೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ખುರ್ಚಿಗಾಗಿ ಕಚ್ಚಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಶಿರಸಿ (ನ.5): ಬಡವರಿಗೆ ಆಶ್ರಯ ಮನೆ ಇಲ್ಲ. ಅತಿವೃಷ್ಟಿ ಹಾನಿಗೆ ಪರಿಹಾರವಿಲ್ಲ. ರಾಜ್ಯ ಸರ್ಕಾರದ ದಿವಾಳಿ ಅಂಚಿನಲ್ಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು. ತಾಲೂಕಿನ ಬನವಾಸಿಯ ನಾಮದೇವ ಸಭಾಭವನದಲ್ಲಿ ನೂತನ ಬನವಾಸಿ ಮಂಡಲ ಹಾಗೂ ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Add Asianetnews Kannada as a Preferred SourcegooglePreferred

ಕಾಂಗ್ರೆಸ್ ಸರ್ಕಾರ ಪ್ರತಿ ಯೋಜನೆಗೆ ಅಡ್ಡಗಾಲು:

ಕೇಂದ್ರ ಸರ್ಕಾರವು ಪ್ರತಿ ಯೋಜನೆಗಳನ್ನು ರಾಜ್ಯ ಸರ್ಕಾರದ ಮೂಲಕ ಅನುಷ್ಠಾನಗೊಳಿಸುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ ಪ್ರತಿ ಯೋಜನೆಗೂ ಅಡ್ಡಗಾಲು ಹಾಕುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಖುರ್ಚಿಗಾಗಿ ಕಚ್ಚಾಟ ನಡೆಸಿ, ಕಾಲಹರಣ ಮಾಡುತ್ತಿದ್ದಾರೆ. ಆಡಳಿತ ಯಂತ್ರ ಹಳಿ ತಪ್ಪಿದೆ. ಅಭಿವೃದ್ಧಿ ಶೂನ್ಯವಾಗಿದೆ ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಜಗತ್ತಿನ ಅತಿದೊಡ್ಡ ಪಕ್ಷ:

ಬನವಾಸಿ ಮಂಡಲ ರಚಿಸಿರುವುದು ಬಿಜೆಪಿ ಇತಿಹಾಸದಲ್ಲಿ ಸುವರ್ಣಾಕ್ಷದಲ್ಲಿ ಬರೆದಿಡುವ ದಿನವಾಗಿದ್ದು, ಪಕ್ಷ ಸಂಘಟನೆ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಮಂಕಿ, ಗೋಕರ್ಣ ಹಾಗೂ ಬನವಾಸಿ ನೂತನ ಮಂಡಲ ರಚಿಸಲಾಗಿದೆ. ಕಾರ್ಯಕರ್ತರನ್ನು ಸಂಪರ್ಕಿಸಲು ಮಂಡಲದಿಂದ ಅನುಕೂಲವಾಗುತ್ತದೆ. ಜನಪರ ಹೋರಾಟದ ಮೂಲಕ ನೂತನ ಮಂಡಳ ಆರಂಭವಾವಿದೆ.‌ ಜನರ ಕಷ್ಟಸುಖಗಳಿಗೆ ಸ್ಪಂದಿಸಬೇಕಿದೆ. ಜನಸಂಘದಿಂದ ಪ್ರಾರಂಭವಾದ ಬಿಜೆಪಿ ಇಂದು ಜಗತ್ತಿನದ ಅತಿದೊಡ್ಡ ಪಕ್ಷವಾಗಿ ಬೆಳೆದಿದೆ ಎಂದರು.

ಶಿರಸಿ ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಶಿರಸಿ ಗ್ರಾಮೀಣ ಮಂಡಳ ವಿಸ್ತಾರವಾಗಿದೆ. ಸಂಘಟನೆಯ ಹಿತದೃಷ್ಟಿಯಿಂದ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಜೆಪಿಗೆ ಸೇರ್ಪಡೆಗೊಳಿಸಿ ಸಂಘಟನೆಯ ದೃಷ್ಟಿಯಿಂದ ಬನವಾಸಿ ಪ್ರತ್ಯೇಕ ಮಂಡಳ ರಚಿಸಲಾಗಿದೆ ಎಂದರು.ಬನವಾಸಿ ನೂತನ ಮಂಡಳ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಮಾತನಾಡಿದರು.

ಹವಾಮಾನ ಆಧಾರಿತ ಬೆಳೆ ವಿಮೆ ಜಿಲ್ಲೆಯ ರೈತರಿಗೆ ಮಂಜೂರಿ ಮಾಡಿಸುವಲ್ಲಿ ವಿಶೇಷ ಪಾತ್ರ ನಿರ್ವಹಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸನ್ಮಾನಿಸಲಾಯಿತು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ, ಪ್ರಮುಖರಾದ ಮುತ್ತಣ್ಣ ದಾವಣಗೆರೆ, ರವಿಂದ ಶೆಟ್ಟಿ, ಶಂಕರ ಗೌಡ, ಶ್ರೀರಾಮ ನಾಯ್ಕ, ಮಂಜುನಾಥ ಪಾಟೀಲ, ಗಣೇಶ ಕತ್ತಿ ಮತ್ತಿತರರು ಉಪಸ್ಥಿತರಿದ್ದರು. ಜಿಪಂ ಮಾಜಿ ಸದಸ್ಯ ಹಾಲಪ್ಪ ಜಕಲಣ್ಣನವರ ಪ್ರಾಸ್ತಾವಿಕ ಮಾತನಾಡಿದರು. ವಿಶ್ವನಾಥ ಹಾದಿಮನೆ ನಿರೂಪಿಸಿದರು