ಸರ್ಕಾರ ವರ್ಗಾವಣೆಯ ಮಾರುಕಟ್ಟೆತೆರೆದಿದೆ. ಅದರಲ್ಲಿ ಶಾಸಕರೂ ಪಾಲ್ಗೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸದನದಲ್ಲಿ ನೀಡಿದ ಹೇಳಿಕೆ ಸೋಮವಾರ ಸದನದಲ್ಲಿ ಕೋಲಾಹಲ ನಿರ್ಮಿಸಿ, ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.v

ವಿಧಾನಸಭೆ (ಜು.10) : ಸರ್ಕಾರ ವರ್ಗಾವಣೆಯ ಮಾರುಕಟ್ಟೆತೆರೆದಿದೆ. ಅದರಲ್ಲಿ ಶಾಸಕರೂ ಪಾಲ್ಗೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸದನದಲ್ಲಿ ನೀಡಿದ ಹೇಳಿಕೆ ಸೋಮವಾರ ಸದನದಲ್ಲಿ ಕೋಲಾಹಲ ನಿರ್ಮಿಸಿ, ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಶಾಸಕರ ಭವನ, ಕುಮಾರಕೃಪಾ ಅತಿಥಿ ಗೃಹಗಳು ವರ್ಗಾವಣೆ ದಂಧೆಯ ಕೇಂದ್ರ ಬಿಂದುವಾಗುತ್ತಿವೆ. ಇದು ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಸೂಚಿಸುತ್ತಿದೆ. ಈ ಸರ್ಕಾರಕ್ಕೆ ಸ್ಪಷ್ಟನೀತಿ, ದಿಕ್ಸೂಚಿ ಇಲ್ಲ. ಕವಲು ದಾರಿಯಲ್ಲಿ ಸರ್ಕಾರ ಹೋಗುತ್ತಿದೆ ಎಂದು ಆರೋಪಿಸಿದರು.

ಜೈನಮುನಿ ಹತ್ಯೆ ಖಂಡಿಸಿ ಸದನದಲ್ಲಿ ಬಿಜೆಪಿ ಹೋರಾಟ: ಬೊಮ್ಮಾಯಿ ಘೋಷಣೆ

ಇದಕ್ಕೆ ಸಿಟ್ಟಾದ ಕಾಂಗ್ರೆಸ್‌ನ ಶಿವಲಿಂಗೇಗೌಡ, ಸುಮ್ಮನೆ ಎಲ್ಲದಕ್ಕೂ ದಂಧೆ ಎಂದು ಹೇಳುವುದನ್ನು ಬಿಡಿ. ಎಲ್ಲ ಸರ್ಕಾರದ ಸಮಯದಲ್ಲೂ ವರ್ಗಾವಣೆಗಳು ನಡೆದಿವೆ. ಶಾಸಕರಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಕಾಂಗ್ರೆಸ್‌ನ ಇತರ ಶಾಸಕರೂ ಧ್ವನಿಗೂಡಿಸಿ, ಸುಮ್ಮನೆ ಆರೋಪ ಮಾಡಬೇಡಿ ಎಂದು ಹೇಳಿದರು. ಇದರಿಂದ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.

ಆಗ ಬಿಜೆಪಿಯ ಡಾ. ಸಿ.ಎನ್‌.ಅಶ್ವತ್ಥನಾರಾಯಣ್‌ ಮಾತನಾಡಿ, ಪ್ರತಿಯೊಂದು ವರ್ಗಾವಣೆಗೂ ಒಂದೊಂದು ದರ ನಿಗದಿ ಮಾಡಲಾಗಿದೆ. 9 ಕೋಟಿ ರು., 10 ಕೋಟಿ ರು. ಹೀಗೆ ಬೇರೆಬೇರೆ ಹುದ್ದೆಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ ಎಂದು ಆರೋಪಿಸಿದರು.

ಇದರಿಂದ ಸಿಟ್ಟಾದ ಸಚಿವ ಜಮೀರ್‌ ಅಹಮದ್‌ ಖಾನ್‌, ಯಾವ ಹುದ್ದೆಗೆ ಎಷ್ಟುದರ ಎಂದು ಪಟ್ಟಿಯನ್ನು ಹೇಳುತ್ತಿದ್ದೀರಿ. ನಿಮ್ಮ ಅವಧಿಯಲ್ಲಿ ನಿಗದಿಯಾಗಿದ್ದನ್ನು ಈಗ ಬಹಿರಂಗಪಡಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಅದಕ್ಕೆ ಬಸವರಾಜ ಬೊಮ್ಮಾಯಿ, ವರ್ಗಾವಣೆ ವಿಚಾರವಾಗಿ ಏನೇನು ಆಗುತ್ತಿದೆ ಎಂಬುದನ್ನು ಸರ್ಕಾರ ಕಣ್ತೆರೆದು ನೋಡಬೇಕು. ಆಗ ಗೊತ್ತಾಗುತ್ತದೆ. ಇದಕ್ಕೆ ಶೀಘ್ರವೇ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಅನ್ನಭಾಗ್ಯವಲ್ಲ ಕನ್ನ ಭಾಗ್ಯ:

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ನೀಡುವುದಾಗಿ ಹೇಳಿತ್ತು. ಆದರೆ, ಅದರ ಬದಲು ಇದೀಗ ಹಣ ನೀಡುತ್ತಿದೆ. ಮುಂದೆ ಅಕ್ಕಿ ನೀಡುವಾಗ ಅದು ಕಾಳಸಂತೆಯಲ್ಲಿ ಮಾರಾಟವಾಗದಂತೆ ತಡೆಯಲು ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿಲ್ಲ. ಹೀಗಾಗಿ ಮುಂದೆ ಅನ್ನಭಾಗ್ಯ ಕನ್ನಭಾಗ್ಯವಾಗುವ ಎಲ್ಲ ಲಕ್ಷಣಗಳಿವೆ ಎಂದು ಇದೇ ವೇಳೆ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಯುವನಿಧಿ ಯೋಜನೆಯೂ ಸಮರ್ಪಕವಾಗಿಲ್ಲ. ಡಿಪ್ಲೊಮಾ ಮಾಡಿ 6 ತಿಂಗಳು ಕೆಲಸ ಸಿಗದಿದ್ದರೆ, ಅಂತಹವರಿಗೆ ಸಹಾಯಧನ ನೀಡುವುದಾಗಿ ಹೇಳಲಾಗಿದೆ. ಇದು ರಾಜ್ಯದ ಯುವಕರನ್ನು ದಾರಿ ತಪ್ಪಿಸುವ ಕೆಲಸವಾಗಿದೆ. ಅಲ್ಲದೆ, ನಕಲಿ ಪ್ರಮಾಣ ಪತ್ರ ಪಡೆಯುವ, ನೀಡುವ ದಂಧೆ ಶುರುವಾಗಿದೆ. ಇದನ್ನು ಕಡಿವಾಣ ಹಾಕಬೇಕಿದೆ. ಇದೇ ರೀತಿ ಗೃಹಲಕ್ಷ್ಮೇ, ಗೃಹಜ್ಯೋತಿ, ಶಕ್ತಿ ಯೋಜನೆಗಳಲ್ಲೂ ಸ್ಪಷ್ಟತೆಯಿಲ್ಲ ಎಂದು ದೂರಿದರು.

Karnataka Budget 2023: ಬಿಜೆಪಿ ಸರ್ಕಾರವನ್ನು ದ್ವೇಷಿಸುವ ರಿವರ್ಸ್‌ಗೇರ್‌ ಬಜೆಟ್‌: ಬೊಮ್ಮಾಯಿ

ಹಲವು ಯೋಜನೆಗಳಿಗೆ ತಿಲಾಂಜಲಿ:

ಎನ್‌ಇಪಿ ಬದಲು ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ನೀತಿ ಜಾರಿಗೊಳಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದೇ ರೀತಿ ರೈತ ವಿದ್ಯಾನಿಧಿ, ಭೂಸಿರಿ ಯೋಜನೆಯಂತಹ ಪ್ರಮುಖ ಯೋಜನೆಗಳನ್ನೂ ಕೈಬಿಡಲಾಗಿದೆ. ಕಿತ್ತೂರು ಕರ್ನಾಟಕ ಬೋರ್ಡ್‌ ಸ್ಥಾಪನೆ ಬಗ್ಗೆ ಉಲ್ಲೇಖಿಸಿಲ್ಲ. ನೀರಾವರಿ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಿಲ್ಲ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕೂಡ ಹಾಳಾಗುತ್ತಿದೆ. ಅಧಿಕಾರಿಗಳ ಹಫ್ತಾ ವಸೂಲಿ ಹೆಚ್ಚುತ್ತಿದೆ. ಇದೆಲ್ಲವನ್ನು ಗಮನಿಸಿದರೆ ರಾಜ್ಯ ಹಿಮ್ಮುಖವಾಗಿ ಚಲಿಸಿದಂತಿದೆ ಎಂದು ಬಸವರಾಜ ಬೊಮ್ಮಾಯಿ ಟೀಕಿಸಿದರು.