ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ, ರಾಜ್ಯದ ಪ್ರಸಿದ್ಧ ತಾಣ ಜೋಗಿಮಟ್ಟಿಗೆ ಪ್ರವಾಸಿಗರ ನಿರ್ಬಂಧ
ಕೋಟೆನಾಡಿನ ಪ್ರಸಿದ್ದ ಪ್ರವಾಸಿತಾಣ ಜೋಗಿಮಟ್ಟಿಗೆ ನೋ ಎಂಟ್ರಿ. ಕೆಲ ಕಿಡಿಗೇಡಿಗಳ ಕೃತ್ಯಕ್ಕೆ ಬೆಂಕಿಯ ಕೆನ್ನಾಲೆಗೆ ಹೊತ್ತಿ ಉರಿಯುತ್ತಿದೆ ಜೋಗಿಮಟ್ಟಿ ಗಿರಿಧಾಮ.
![Tourist entry banned at Jogimatti hill station in chitradurga gow Tourist entry banned at Jogimatti hill station in chitradurga gow](https://static-ai.asianetnews.com/images/01hpem3pbjymbqarndehepns7d/jogimatti--1-_363x203xt.jpg)
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಫೆ.12): ಅದೊಂದು ಎತ್ತರದ ಗಿರಿಧಾಮ, ಹಚ್ಚ ಹಸಿರಿನ ಸೊಬಗಿನಿಂದ ಮಲೆನಾಡನ್ನೇ ನಾಚಿಸುವಂತೆ ಆಕರ್ಷಿಸುತಿದ್ದ ಪ್ರವಾಸಿಧಾಮ. ಆದ್ರೆ ಬೇಸಿಗೆ ಆರಂಭವಾದ ಬೆನ್ನಲ್ಲೇ ಆ ಪ್ರವಾಸಿ ತಾಣದ ಎಂಟ್ರಿಗೆ ಅರಣ್ಯಾಧಿಕಾರಿಗಳು ನಿರ್ಬಂಧ ಹೇರಿದ್ದಾರೆ. ಹೀಗಾಗಿ ಪ್ರವಾಸಿತಾಣ ಬಿಕೋ ಎನ್ನುತ್ತಿದೆ.
ಹೀಗೆ ಬಿಸಿಲಿನ ತಾಪಕ್ಕೆ ಒಣಗಿ ಬರಡಾದ ಗಿಡಮರಗಳು ಬೆಂಕಿಗೆ ಕೆನ್ನಾಲಗೆ ಧಗ ಧಗನೇ ಉರಿಯುತ್ತಿರುವುದು ಒಂದೆಡೆಯಾದ್ರೆ. ಯಾವ ಕಡೆ ಕಣ್ಣಾಯಿಸಿದ್ರು ಮರು ಭೂಮಿಯಂತೆ ಕಾಣುವ ವಾತಾವರಣ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಚಿತ್ರದುರ್ಗದ ಜೋಗಿಮಟ್ಟಿ ಗಿರಿಧಾಮ. ಹೌದು,ಇದು ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಎರಡನೇ ಪ್ರದೇಶ. ಹೀಗಾಗಿ ತಂಪಾದ ವಾತಾವರಣದಿಂದ ಕೂಡಿದ್ದು,ಹಚ್ಚ ಹಸಿರಿನ ಸೊಬಗಿನ ಗಿಡಮರಗಳಿಂದಾಗಿ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿತ್ತು.ಮಿನಿ ಊಟಿಯ ಖ್ಯಾತಿ ಈ ಜೋಗಿಮಟ್ಟಿಗೆ ಇದೆ. ಆದ್ರೆ ಬೇಸಿಗೆ ಆರಂಭವಾದ ಬೆನ್ನಲ್ಲೇಇಲ್ಲಿನ ಗಿಡಿಮರಗಳಲ್ಲಿನ ಎಲೆಗಳೆಲ್ಲಾ ಉದುರಿ, ಬೋಳಾಗಿವೆ. ನೀರಿನ ತಂಪಿಲ್ಲದೇ ಮರಗಳು ಒಣಗಿ ನೆಲಕ್ಕುರುಳಿವೆ.
ಹೀಗಾಗಿ ಅಪಾರ ಮೌಲ್ಯದ ಔಷಧಿ ಸಸ್ಯಗಳಿರುವ ಜೋಗಿಮಟ್ಟಿ ಒಣ ಮರುಭೂಮಿ ಯಂತಾಗಿದೆ. ಹೀಗಾಗಿ ಈ ವೇಳೆ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಂದ ಆಕಸ್ಮಿಕವಾಗಿ ಯಾವುದೇ ಅಗ್ನಿ ಅವಘಡ ಸಂಭವಿಸಬಾರದೆಂಬ ಮುಂಜಾಗ್ರತೆಯಿಂದ
ಪ್ರವಾಸಿಗರ ಎಂಟ್ರಿಗೆ ಅರಣ್ಯಾಧಿಕಾರಿಗಳು ನಿರ್ಭಂಧ ಏರಿದ್ದಾರೆ. ಹೀಗಾಗಿ ಬೇಸಿಗೆ ಕಳೆಯುವವರೆಗೂ ಪ್ರವಾಸಿಗರಿಗೆ ಜೋಗಿಮಟ್ಟಿ ಪ್ರವೇಶಕ್ಕೆ ನಿಷೇಧಾಜ್ಞೆಜಾರಿಗೊಳಿಸಿದ್ದೇವೆಂದು ಚಿತ್ರದುರ್ಗ ಡಿಎಫ್ ಓ ತಿಳಿಸಿದ್ದಾರೆ.
ಇನ್ನು ಅರಣ್ಯಾಧಿಕಾರಿಗಳ ನಿರ್ಧಾರವನ್ನು ಪ್ರವಾಸಿಗರು ಹಾಗು ಪರಿಸರವಾದಿಗಳು ಸ್ವಾಗತಿಸಿದ್ದಾರೆ. ಇಲ್ಲಿನ ನೈಸರ್ಗಿಕ ಸೊಬಗನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ.ಈ ಅಪರೂಪರದ ತಾಣದ ರಕ್ಷಣೆಗಾಗಿ ಎಲ್ಲರು ಸಹಕರಿಸುವಂತೆ ಸ್ಥಳಿಯರು ಮನವಿ ಮಾಡಿದ್ದಾರೆ. ಅಲ್ಲದೇ ಕೆಲ ಕಿಡಿಗೇಡಿಗಳು ಜೋಗಿಮಟ್ಟಿಗೆ ಕಳ್ಳ ದಾರಿಯಲ್ಲಿ ಹೋಗಿ, ಬೆಟ್ಟ, ಗುಡ್ಡದಲ್ಲಿ ಇರುವ ಒಣಗಿದ ಹುಲ್ಲಿಗೆ ಬೆಂಕಿ ಹಚ್ಚುವ ಕೆಟ್ಟ ಮನಸ್ಥಿತಿ ಉಳ್ಳವರು ಇದ್ದಾರೆ. ಆದ್ದರಿಂದ ಬೇಸಿಗೆ ಸಂಧರ್ಬದಲ್ಲಿ ಯಾರೋ ತಮ್ಮ ಚಟಕ್ಕೆ ಪರಿಸರವನ್ನು ಬಲಿ ಪಡಸುವ ಮುನ್ನ, ಅಧಿಕಾರಿಗಳು ಅಂತವರ ಮೇಲೆ ನಿಗಾ ವಹಿಸಿ ಪರಿಸರ ಉಳುವಿಗಾಗಿ ಸೂಕ್ತ ಕ್ರಮ ವಹಿಸಲಿ ಎಂದು ಆಗ್ರಹಿಸಿದರು.
ಒಟ್ಟಾರೆ ಬೇಸಿಗೆ ಆರಂಭದಲ್ಲೇ ಜೋಗಿಮಟ್ಟಿ ಒಣಗಿದ ಮರುಭೂಮಿ ಯಾಗಿದೆ. ಹೀಗಾಗಿ ಬೆಂಕಿ ಅವಘಡದಿಂದ ಗಿರಿಧಾಮವನ್ನು ಸಂರಕ್ಷಿಸಲು ಪ್ರವಾಸಿಗರ ಪ್ರವೇಶಕ್ಕೆ ನಿಷೇಧಾಜ್ಞೆ ಜಾರಿಯಾಗಿದೆ. ಹೀಗಾಗಿ ಪ್ರವಾಸಿ ತಾಣ ಬಿಕೊಎನ್ನುತ್ತಿದ್ದು,ಬೇಸಿಗೆ ಕಳೆದ ಬಳಿಕ ಪ್ರವಾಸಿಗರು ಇಲ್ಲಿನ ನೈಸರ್ಗಿಕ ಸೊಬಗನ್ನು ಸವಿಯಲು ಮುಕ್ತವಾಗಲಿದೆ.