ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ತಮಿಳು ನಟ ವಿಶಾಲ್, ಮೂಲ್ಕಿಯ ಜಾರಂದಾಯ ದೈವದ ನೇಮೋತ್ಸವದಲ್ಲಿ ಪಾಲ್ಗೊಂಡರು. ಕಣ್ಣೀರಿಟ್ಟು ಪ್ರಾರ್ಥಿಸಿದ ವಿಶಾಲ್‌ಗೆ, ದೈವವು "ಭಯಪಡಬೇಡ, ನಾನಿದ್ದೇನೆ" ಎಂದು ಅಭಯ ನೀಡಿತು. ಸಮಸ್ಯೆ ಬಗೆಹರಿದರೆ ತುಲಾಭಾರ ಸೇವೆ ನೀಡುವುದಾಗಿ ವಿಶಾಲ್ ಹರಕೆ ಹೊತ್ತರು.

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

Add Asianetnews Kannada as a Preferred SourcegooglePreferred

ತುಳುನಾಡಿನ ದೈವಗಳ ಕಾರ್ಣಿಕ ಅಪಾರ. ದೇಶ ವಿದೇಶದಿಂದಲೂ ತಮ್ಮ ಸಮಸ್ಯೆ ಬಗೆ ಹರಿಸಲೆಂದು ಅದೆಷ್ಟೋ ಜನ ದೈವಗಳ ಮೊರೆ ಹೋಗುತ್ತಾರೆ. ಇದೀಗ ಈ ಸಾಲಿಗೆ ತಮಿಳಿನ ಸ್ಟಾರ್‌ ನಟ ವಿಶಾಲ್ ಸೇರ್ಪಡೆಯಾಗಿದ್ದಾರೆ.ತೀವ್ರ ಅರೋಗ್ಯ ಸಮಸ್ಯೆಯಿಂದ ಬಳಲಿದ್ದ ತಮಿಳು ನಟ ತುಳುನಾಡಿನ ದೈವಗಳ ಮೊರೆ ಹೋಗಿದ್ದಾರೆ. ಕೈಯಲ್ಲಿ ಮಲ್ಲಿಗೆ ಹೂ ಹಿಡಿದು. ಶಿರಸಾ ನಮಿಸಿ ಪ್ರಾರ್ಥಿಸಿದ್ದಾರೆ . ನಟನ ಪ್ರಾರ್ಥನೆಗೆ ದೈವ ನೀಡಿದ ಉತ್ತರ ನಿಜಕ್ಕೂ ರೋಮಾಂಚನಗೊಳಿಸುತ್ತೆ. 

ತುಳುನಾಡು ದೈವಗಳ ನೆಲೆವೀಡು. ಇಲ್ಲಿ ದೇವರಿಗಿಂತ ದೈವಗಳೆ ಪ್ರಧಾನ. ಇಲ್ಲಿನ ದೈವಗಳ ಕಾರ್ಣಿಕವೆ ಅಪಾರ. ಬೇಡಿದನ್ನ ಕ್ಷಣ ಮಾತ್ರದಲ್ಲಿ ಈಡೇರಿಸುವ ಅದೆಂತಹ ಕಷ್ಟ ಬಂದೋದಗಿದ್ರು ನಾವು ನಂಬಿದ ದೈವ ನಮ್ಮನ್ನ ಕಾಪಾಡುತ್ತೆ ಅನ್ನೋ ಭಕ್ತರ ನಂಬಿಕೆಯನ್ನ ದೈವಗಳು ಎಂದೂ ಸುಳ್ಳಾಗಿಸಿಲ್ಲ. ಇದೆ ಕಾರಣಕ್ಕೆನು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ತಮ್ಮ ದೈವದ ಸೇವೆ ಎಂದ ಕೂಡಲೇ ತುಳುವರು ಓಡೋಡಿ ಬರ್ತಾರೆ.. ಶಕ್ತಿ ಮೀರಿ ದೈವಗಳ ಸೇವೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ತಾರೆ. ಆದರೆ ಇತ್ತೀಚಿಗೆ ಕರಾವಳಿಯ ದೈವಗಳ ಕಾರ್ಣಿಕ ಕೇವಲ ತುಳುವರಿಗೆ ಸೀಮಿತವಾಗಿಲ್ಲ. ದೇಶ ವಿದೇಶದಿಂದಲೂ ಭಕ್ತ ದಂಡು ದೈವಾರಾಧಾನೆಗೆ ಮನಸೋತಿದೆ. ರಾಜಕಾರಣಿಗಳಿಂದ ಹಿಡಿದು ಚಿತ್ರ ನಟ ನಟಿಯರೂ ದೈವದ ಆಶೀರ್ವಾದ ಪಡೆಯಲು ತುಳುನಾಡಿಗೆ ಓಡೋಡಿ ಬರುತ್ತಿದ್ದಾರೆ. ಈ ಸಾಲಿಗೆ ಇದೀಗ ತಮಿಳಿನ ಸೂಪರ್ ಸ್ಟಾರ್ ಕೂಡ ಸೇರ್ಪಡೆಯಾಗಿದ್ದಾರೆ. ಆ ತಮಿಳು ನಟನ ಆರೋಗ್ಯ ಸಮಸ್ಯೆ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿತ್ತು. ಆತನ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು. ಆ ನಟ ಬೇರೆಯಾರು ಅಲ್ಲ ಅವರೇ ತಮಿಳಿನ ಸ್ಟಾರ್ ನಟ ವಿಶಾಲ್. 

ವಿಶಾಲ್ ತಮಿಳಿನ ಎಂಗ್ ಅಂಡ್ ಎನರ್ಜಿಟಿಕ್ ಹೀರೋ. ಸಿಂಪಲ್ ಅಂಡ್ ಸ್ಪುರ್ರಧೂಪಿಯಾಗಿರುವ ವಿಶಾಲ್ ಗೆ ತಮಿಳುನಾಡು ಮಾತ್ರ ಅಲ್ಲ ಕರುನಾಡಿನಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಅದರಲ್ಲೂ ಇದೆ ವಿಶಾಲ್ ಪರಮಾತ್ಮ ಪವರ್ ಸ್ಟಾರ್ ಅಪ್ಪು ಆಪ್ತಮಿತ್ರ.ಅದೆಷ್ಟೋ ಹಿಟ್ ಚಿತ್ರಗಳನ್ನ ನೀಡಿ ಯಾವುದೇ ಪಾತ್ರಕ್ಕೂ ಸೈ ಎನಿಸಿಕೊಂಡಿದ್ದ ವಿಶಾಲ್ ಗೆ ಏಕಾಏಕಿ ಸಂಕಷ್ಟಗಳು ಎದುರಾಗುತ್ತೆ. 

ಇದ್ದಕ್ಕಿದಂತೆ ವಿಶಾಲ್ ಅರೋಗ್ಯದಲ್ಲಿ ಏರು ಪೇರಾಗುತ್ತೆ. ಎಲ್ಲಿವರೆಗೂ ಅಂದ್ರೆ ತಾವು ನಟಿಸಿದ್ದ ಮದಗಜರಾಜ ಚಿತ್ರದ ಪ್ರಿ ರಿಲೀಸ್ ಇವೆಂಟ್ ನಲ್ಲಿ ವಿಶಾಲ್ ಸ್ಥಿತಿ ಕಂಡ ಅವರ ಅಭಿಮಾನಿಗಳು ದಿಗ್ಬ್ರಮೆಗೊಳಗಾಗಿದ್ರು. ಎನರ್ಜಿಟಿಕ್ ಅಂಡ್ ಖಡಕ್ ಆಗಿ ಕಾಣಿಸಿಕೊಳ್ಳುತ್ತಿದ್ದ ವಿಶಾಲ್ ಅಂದು ತೊದಲು ಮಾತು, ನಡುಗುವ ಕೈಗಳು, ನಿಲ್ಲೋದಕ್ಕೂ ಸಾಧ್ಯವಾಗದೆ ಒದ್ದಾಡುತ್ತಿದ್ದರು.ವಿಶಾಲ್ ಸ್ಥಿತಿ ಕಲ್ಲು ಹೃದಯವನ್ನೂ ಕರಗುವಂತೆ ಮಾಡಿತ್ತು.ಆ ಬಳಿಕ ಚೆನ್ನೈನ ಆಪೋಲ್ಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತಿದ್ದ ವಿಶಾಲ್ ಇದೀಗ ತುಳುನಾಡಿನ ಕಾರ್ಣಿಕ ದೈವದ ಮೊರೆ ಹೋಗಿದ್ದಾರೆ. ಏಕಾಏಕಿ ಮೂಲ್ಕಿಯ ಹರಿಪಾದೆ ಜಾರಂದಾಯ ನೇಮೋತ್ಸವದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಕೈಯಲ್ಲಿ ಮಲ್ಲಿಗೆ ಹೂ ಹಿಡಿದು ಕಣ್ಣೀರಿಟ್ಟು ಸಮಸ್ಯೆಯಿಂದ ಪಾರು ಮಾಡುವಂತೆ ದೈವದ ಬಳಿ ಬೇಡಿಕೊಂಡಿದ್ದಾರೆ.

ಮಂಗಳೂರು ಹೊರ ವಲಯದ ಮೂಲ್ಕಿ ಸಮೀಪದ ಪಕ್ಷಿಕೆರೆಯ ಹರಿಪಾದೆಯ ಧರ್ಮ ದೈವ ಜಾರಂದಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವದಲ್ಲಿ ವಿಶಾಲ್ ಭಾಗಿಯಾಗಿದ್ದಾರೆ. ವೈಯುಕ್ತಿಕ ಹಾಗು ಅರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಿಶಾಲ್ ಜಾರಂದಾಯ ದೈವದ ಬಳಿ ಸಮಸ್ಯೆಯಿಂದ ಪಾರು ಮಾಡುವಂತೆ ತಲೆ ಭಾಗಿ ಬೇಡಿಕೊಂಡಿದ್ದಾರೆ. ನನ್ನ ಸಮಸ್ಯೆ ಬಗೆ ಹರಿದರೆ ಬರುವ ವರ್ಷದ ನೇಮೋತ್ಸವದ ವೇಳೆ ಕ್ಷೇತ್ರದಲ್ಲಿ 
ತುಲಾಭಾರ ಸೇವೆ ನೀಡುತ್ತೇನೆ ಎಂದು ಪ್ರಾರ್ಥಿಸಿದ್ದಾರೆ. ಇದಕ್ಕೆ ಕೈ ಸನ್ನೆ ಮೂಲಕ ಉತ್ತರಿಸಿದ ಜಾರಂದಾಯ ದೈವ ಕಣೀರು ಹಾಕಬೇಡ, ಬಹಳ ಸಮಸ್ಯೆಯಲ್ಲಿದ್ದೀಯ. ಭಯಪಡಬೇಡ ಎಂದು ಸಂತೈಸಿದೆ. ನನ್ನ ಮೊಗವೇರುವ ವೇಳೆ ನಿನಗೆ ನುಡಿ ನೀಡುತ್ತೇನೆ ನಿಲ್ಲು ಎಂದು ಸೂಚನೆ ನೀಡಿತ್ತು. ಆದರೆ ಅದಾಗಲೇ ಸರಿಸುಮಾರು ಮೂರು ಗಂಟೆಗಳ ಕಾಲ ದೈವ ಕೋಲದಲ್ಲಿ ಭಾಗಿಯಾಗಿದ್ದ ವಿಶಾಲ್ ಸಮಯದ ಅಭಾವದಿಂದ ನಿಲ್ಲಲಾರದೇ.. ದೈವಸ್ಥಾನದ ಒಳಗೆ ದೈವದ ಮೊಗಕ್ಕೆ ಮಲ್ಲಿಗೆ ಹೂ ಸಮರ್ಪಿಸಿ ಪ್ರಸಾದ ಸ್ವೀಕರಿಸಿ ತೆರಳಿದ್ದಾರೆ.

ಒಟ್ಟಾರೆ ತೀವ್ರ ಅರೋಗ್ಯ ಸಮಸ್ಯೆಯಿಂದ ಬಳಲಿ ಚಿಕಿತ್ಸೆ ಪಡೆಯುತ್ತಿದ್ದ ವಿಶಾಲ್ ತುಳುನಾಡಿನ ದೈವ ಕೋಲದಲ್ಲಿ ಪ್ರತ್ಯಕ್ಷವಾಗಿರೋದು ಅಚ್ಚರಿ ಮೂಡಿಸಿದೆ. ಎತ್ತಣ ತಮಿಳುನಾಡು ಎತ್ತಣ ಕರುನಾಡಿನ ಮೂಲ್ಕಿ. ಎಲ್ಲವೂ ದೈವಿಚ್ಛೆ. ವಿಶಾಲ್ ಸಮಸ್ಯೆಯನ್ನ ದೈವ ಬಗೆಹರಿಸುತ್ತಾ? ನೆನೆದಂತೆ ದೈವದ ಸಮ್ಮುಖದಲ್ಲಿ ಹರಕೆ ಈಡೇರಿಸುವ ಕ್ಷಣ ಕೂಡಿ ಬರುತ್ತಾ ಕಾದು ನೋಡಬೇಕಿದೆ.