Asianet Suvarna News Asianet Suvarna News

ಶಾಶ್ವತ ಓಡಾಟ ನಿಲ್ಲಿಸಲಿದೆ ಪುಟಾಣಿ ಚುಕು-ಬುಕು ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್!

ನಗರದಲ್ಲಿ ಓಡಾಡುತ್ತಿದ್ದ ಪುಟಾಣಿ ರೈಲಿನ ಚುಕು-ಬುಕು ಶಬ್ದ ಬಂದ್ ಆಗಿ ದಶಕ ಉರುಳಿದ್ದು, ಈ ರೈಲಿನ ಸಂಗ್ರಹಾಲಯ ಸ್ಥಾಪನೆ ಆಗಲಿದೆ.

Swarna Jayanti Express to stop running permanently in karwar at uttara kannada rav
Author
First Published Sep 21, 2023, 3:30 PM IST

ಜಿ.ಡಿ. ಹೆಗಡೆ

ಕಾರವಾರ (ಸೆ.21) : ನಗರದಲ್ಲಿ ಓಡಾಡುತ್ತಿದ್ದ ಪುಟಾಣಿ ರೈಲಿನ ಚುಕು-ಬುಕು ಶಬ್ದ ಬಂದ್ ಆಗಿ ದಶಕ ಉರುಳಿದ್ದು, ಈ ರೈಲಿನ ಸಂಗ್ರಹಾಲಯ ಸ್ಥಾಪನೆ ಆಗಲಿದೆ.

ಇಲ್ಲಿನ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ೧೩-೧೪ ವರ್ಷಗಳ ಹಿಂದೆ ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್ ಹೆಸರಿನಲ್ಲಿ ಪುಟಾಣಿ ರೈಲನ್ನು ಓಡಿಸಲಾಗುತ್ತಿತ್ತು. ಸರಿಸುಮಾರು ಐದಾರು ವರ್ಷಗಳ ಕಾಲ ಚಿಣ್ಣರಿಗೆ ಮೋಜು ನೀಡಿದ್ದ ಪುಟಾಣಿ ರೈಲು, ಕಡಲ ತೀರದ ಸಮೀಪ ಇದ್ದ ಕಾರಣ ರೈಲಿನ ಟ್ರಾಕ್ ಕಡಲ್ಕೊರೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿ ಪುನಃ ಅನುಷ್ಠಾನ ಮಾಡದೇ ಹಾಗೇ ಶೆಡ್ ನಿರ್ಮಿಸಿ ರೈಲ್ವೆ ಎಂಜಿನ್, ಬಿಡಿಭಾಗ ಇಡಲಾಗಿತ್ತು.

೨೦೧೭ರಲ್ಲಿ ಅಂದಿನ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹಾಗೂ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಪುನಃ ಈ ಪುಟಾಣಿ ರೈಲಿಗೆ ಮರು ಜೀವ ನೀಡಲು ಮುಂದಾಗಿದ್ದರು. ಇಲ್ಲಿನ ಲಂಡನ್ ಬ್ರಿಜ್‌ನಿಂದ ದಿವೇಕರ ಕಾಲೇಜಿನ ವರೆಗೆ ಅಂದಾಜು ೨ ಕಿಮೀ ಉದ್ದ ಕಡಲ ತೀರದ ಪಕ್ಕದ ಸಮೀಪ ಟ್ರಾಕ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದ್ದರು. ಈ ಕಾರ್ಯಕ್ಕಾಗಿ ₹ ೨ ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಪ್ರಾರಂಭಿಕ ಹಂತದಲ್ಲಿ ೧೦ ಜನರು ಕುಳಿತುಕೊಳ್ಳಬಹುದಾದ ೩-೪ ಬೋಗಿ ವ್ಯವಸ್ಥೆ ಮಾಡುವ ಉದ್ದೇಶವಿತ್ತು. ಆದರೆ ಕಾಲಾನಂತರ ಈ ಪುಟಾಣಿ ರೈಲಿನ ಯೋಜನೆ ಮರು ಅನುಷ್ಠಾನ ಪ್ರಸ್ತಾವನೆ ಕಡತಗಳಲ್ಲಿಯೇ ಉಳಿದಿತ್ತು.

ಕಾರವಾರ: ರಸ್ತೆ ಮೇಲೆ ಕಸ ಎಸೆಯಬೇಡಿ ಎಂದಿದ್ದಕ್ಕೆ ಕಾರ್ಮಿಕರ ಮೇಲೆ ಹಲ್ಲೆ

ರೈಲಿನ ಎಂಜಿನ್, ಟ್ರಾಕ್ ಒಳಗೊಂಡು ಬಿಡಿಭಾಗಗಳು ಚಾಪೆಲ್ ಯುದ್ಧ ನೌಕೆ ಸಂಗ್ರಹಾಲಯದ ಪಕ್ಕದಲ್ಲಿ ಇರುವ ಶೆಡ್‌ನಲ್ಲಿದ್ದು, ಧೂಳು ಹಿಡಿಯುತ್ತಿವೆ. ಚಾಪೆಲ್ ಯುದ್ಧ ನೌಕೆ ಸಂಗ್ರಹಾಲಯದ ಪಕ್ಕವೇ ಟುಪ್ಲೋವ್ ಯುದ್ಧ ವಿಮಾನ ಸಂಗ್ರಹಾಲಯ ಕೂಡಾ ಕೆಲವೇ ತಿಂಗಳಲ್ಲಿ ಸ್ಥಾಪನೆಯಾಗಲಿದ್ದು, ಅದರ ಪಕ್ಕದಲ್ಲೇ ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್ ಪುಟಾಣಿ ರೈಲಿನ ಭಾಗವನ್ನು ಅಲ್ಲಿಯೇ ಇರಿಸಲು ಉದ್ದೇಶಿಸಲಾಗಿದೆ.

ಕಾರವಾರ ಕಡಲ ತೀರದಲ್ಲಿ ಅಳಿವಿನಂಚಿನಲ್ಲಿರುವ ಬಲೀನ್‌ ತಿಮಿಂಗಲ ಪತ್ತೆ

ಪುಟಾಣಿ ರೈಲ್ವೆಯನ್ನು ಪುನಃ ಓಡಿಸುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಇದರ ಬದಲಾಗಿ ಚಾಪೆಲ್ ವಾರ್‌ಶಿಫ್ ಮ್ಯೂಸಿಯಂ ಪಕ್ಕ ವಸ್ತು ಸಂಗ್ರಹಾಲಯದ ಮಾದರಿಯಲ್ಲಿ ಇಡಲು ಚಿಂತನೆ ನಡೆದಿದೆ. ಮಕ್ಕಳಿಗೆ ರೈಲ್ವೆ ಬಗ್ಗೆ ತಿಳಿದುಕೊಳ್ಳಲು, ಫೋಟೊಶೂಟ್ ನಡೆಸಲು ಇದು ಸಹಕಾರಿ ಆಗಲಿದೆ. 

 

ಬೇಬಿ ಮೊಗೇರ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ

ಪ್ರವಾಸಿಗರ ಆಕರ್ಷಣೀಯ ಪುಟಾಣಿ ರೈಲಿನ ಸಂಗ್ರಹಾಲಯ ಸ್ಥಾಪಿಸಿದರೆ ಶಾಶ್ವತವಾಗಿ ಸಂಚಾರ ನಿಲ್ಲಿಸಲಿದೆ. ಇದಕ್ಕೆ ಅವಕಾಶ ನೀಡಿದೇ ಪುನಃ ಕಡಲ ತೀರದ ಸಮೀಪ ಪುಟಾಣಿ ರೈಲು ಓಡಿಸುವ ಬಗ್ಗೆ ಕ್ರಮವಾಗಬೇಕಿದೆ. ಪ್ರವಾಸಿಗರ ಆಕರ್ಷಣೀಯವೂ ಕಾರವಾರದತ್ತ ಆಗಲಿದೆ. ರಾಕ್ ಗಾರ್ಡನ್, ಚಾಪೆಲ್, ಟುಪ್ಲೋವ್ ಜತೆಗೆ ರೈಲು ಅನುಷ್ಠಾನವಾದರೆ ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿ ಆಗಲಿದೆ.

ಜ್ಯೋತಿ ರೇವಣಕರ, ಗೃಹಿಣಿ

Follow Us:
Download App:
  • android
  • ios