ಕೊಡಗಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಅಸ್ಸಾಂ ಮೂಲದವರಲ್ಲಿ ಬಾಂಗ್ಲಾದೇಶಿಗರು ನುಸುಳಿರುವ ಶಂಕೆ ವ್ಯಕ್ತವಾಗಿದೆ. ಕಾಫಿ ತೋಟಗಳಿಂದ ಹೋಂಸ್ಟೇಗಳವರೆಗೂ ಕೆಲಸ ಮಾಡುತ್ತಿರುವ ಇವರ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳು ಜನರಲ್ಲಿ ಆತಂಕ ಮೂಡಿಸಿವೆ.

ಮಡಿಕೇರಿ (ಆ.17): ತೀವ್ರ ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿರುವ ಕೊಡಗಿನಲ್ಲಿ ದೂರದ ಅಸ್ಸಾಂ, ಒರಿಸ್ಸಾ, ಪಶ್ಚಿಮ ಬಂಗಾಳದಿಂದ ಸಾಕಷ್ಟು ವಲಸಿಗರು ಜಿಲ್ಲೆಯಲ್ಲಿ ನೆಲೆಸಿ, ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅಸ್ಸಾಂ ಹೆಸರಿನಲ್ಲಿ ಸಾಕಷ್ಟು ಮಂದಿ ಬಾಂಗ್ಲಾದವರು ಕೊಡಗಿಗೆ ಆಗಮಿಸುತ್ತಿರುವ ಶಂಕೆ ವ್ಯಕ್ತಗೊಂಡಿದೆ.

Add Asianetnews Kannada as a Preferred SourcegooglePreferred

ಇತ್ತೀಚೆಗೆ ಬಾಂಗ್ಲಾ ದೇಶದಲ್ಲಿ ನಡೆದ ಕ್ಷಿಪ್ರ ಕ್ರಾಂತಿ ಮತ್ತು ನಂತರದ ಬೆಳವಣಿಗೆಗಳ ಬೆನ್ನಲ್ಲೇ ಕೊಡಗು ಜಿಲ್ಲೆಗೆ ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾ ದೇಶಿಗರು ನುಸುಳುತ್ತಿದ್ದಾರಾ ಎನ್ನುವ ಅನುಮಾನಗಳು ದಟ್ಟವಾಗುತ್ತಿದ್ದು, ಕೊಡಗು ಜಿಲ್ಲೆಯ ಜನರಲ್ಲಿ ಆತಂಕ ಕಾಣಿಸಿಕೊಂಡಿದೆ.

ಟಿಬಿ ಡ್ಯಾಂನಲ್ಲಿ 68 ಟಿಎಂಸಿ ನೀರು ಉಳಿಸಿದ ತಜ್ಞ ಕನ್ಹಯ್ಯಾ ನಾಯ್ಡು, 3 ರಾಜ್ಯದ ಸಮಸ್ಯೆ ಸುಖಾಂತ್ಯ

ಅಸ್ಸಾಂ ಕಾರ್ಮಿಕರಾಗಿ ಬರುತ್ತಿರುವವರು ಕಾರ್ಮಿಕರಾಗಿ ಉಳಿಯದೇ ಜಿಲ್ಲಾ ಕೇಂದ್ರ ಮಡಿಕೇರಿ, ಕುಶಾಲನಗರ ತಾಲೂಕು ಕೇಂದ್ರ, ತಾಲೂಕಿನ ಸುಂಟಿಕೊಪ್ಪ, ವಿರಾಜಪೇಟೆ ತಾಲೂಕು ಕೇಂದ್ರ, ಗೋಣಿಕೊಪ್ಪ, ನಾಪೋಕ್ಲು ಸೇರಿದಂತೆ ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ನಡೆಯುವ ವಾರದ ಸಂತೆಗಳಲ್ಲಿ ವ್ಯಾಪಾರ ವಹಿವಾಟು ಮಾಡುವವರಾಗಿ ಬದಲಾಗಿದ್ದಾರೆ.

ಅಸ್ಸಾಮಿಗರು ಈಗ ಕೇವಲ ಕಾಫಿ ತೋಟದ ಕಾರ್ಮಿಕರಾಗಿ ಉಳಿದುಕೊಂಡಿಲ್ಲ. ಸಂತೆಗಳಲ್ಲಿ ವ್ಯಾಪಾರ ಮಾಡುವುದರಿಂದ ಆರಂಭಿಸಿ ಹೋಂಸ್ಟೇ, ರೆಸಾರ್ಟ್‌ಗಳಲ್ಲಿ ರೂಂ ಬಾಯ್ ತನಕವೂ ತಮ್ಮ ಕೆಲಸಗಳನ್ನು ವಿಸ್ತರಿಸಿಕೊಂಡಿದ್ದಾರೆ. ಕೃಷಿ, ವ್ಯಾಪಾರ, ಪೇಂಟಿಂಗ್, ಗಾರೆ ಕೆಲಸ ಸೇರಿದಂತೆ ಎಲ್ಲ ಕೆಲಸಗಳಲ್ಲಿ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದಾರೆ. ಹೋಟೆಲ್‌ಗಳಲ್ಲಿ ಬಾಣಸಿಗರಾಗಿ, ಸಪ್ಲೈಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇದರ ಜತೆಗೆ ಅಪರಾಧ ಚಟುವಟಿಕೆಯಲ್ಲೂ ಇಂಥ ಕಾರ್ಮಿಕರ ಹೆಸರು ಕಾಣಿಸಿಕೊಳ್ಳುತ್ತಿರುವುದು ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಕಾನೂನು ಕುಣಿಕೆಯಿಂದ ಪಾರು ಮಾಡಲು ದೆಹಲಿಯಿಂದ ವಕೀಲರ ಆಗಮನ!

ಜಿಲ್ಲೆಯಲ್ಲಿ ನೆಲೆಸಿರುವ ಅಸ್ಸಾಂ ಕಾರ್ಮಿಕರು ಇತ್ತೀಚೆಗೆ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ. ಅಕ್ರಮ ಗೋಮಾಂಸ ಮಾರಾಟ, ಕಳವು, ದರೋಡೆ, ಮಾದಕ ವಸ್ತುಗಳ ಮಾರಾಟ, ಅತ್ಯಾಚಾರ, ಹೊಡೆದಾಟದಂತಹ ಪ್ರಕರಣಗಳಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಆರೋಪಿಗಾಳಾಗಿದ್ದಾರೆ. ಬಾಂಗ್ಲಾದವರು ಅಸ್ಸಾಂ ಮೂಲಕ ಕೊಡಗಿಗೆ ಬರುತ್ತಿರುವ ಬಗ್ಗೆ ಶಂಕೆ ವ್ಯಕ್ತ ಹೆಚ್ಚಾಗಿದ್ದು, ಈ ಬಗ್ಗೆ ಸಂಬಂಧಿಸಿದ ಇಲಾಖೆ ಎಚ್ಚರ ವಹಿಸಬೇಕಾಗಿದೆ. ಅಪರಿಚಿತ ವ್ಯಕ್ತಿಗಳು ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಕೊಡಗು ಪೊಲೀಸ್ ಇಲಾಖೆ ಕೂಡ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

 ಕೊಡಗಿಗೆ ಆಗಮಿಸುವ ವಲಸೆ ಕಾರ್ಮಿಕರು ಜಿಲ್ಲಾದ್ಯಂತ ಚದುರಿ ಹೋಗುತ್ತಿದ್ದಾರೆ. ಇವರನ್ನು ಇಲ್ಲಿ ಬರ ಮಾಡಿಕೊಂಡು ಸೂಕ್ತ ಸ್ಥಳಗಳಿಗೆ ಸುರಕ್ಷಿತವಾಗಿ ತಲುಪಿಸುವ ದಲ್ಲಾಲಿಗಳೂ ಅಲ್ಲಲ್ಲಿ ಇರುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಇವರ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲು ಪೊಲೀಸರಿಗೂ ಕಷ್ಟವಾಗುತ್ತಿದೆ. ಹಾಗಾಗಿ ಕಾಫಿ ತೋಟದ ಮಾಲೀಕರೇ ಮುಂಜಾಗ್ರತೆ ವಹಿಸಬೇಕು. ತಮ್ಮಲ್ಲಿಗೆ ಬರುವ ವಲಸೆ ಕಾರ್ಮಿಕರ ಪೂರ್ವಾಪರ ತಿಳಿದುಕೊಂಡು ಅವರ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಇಟ್ಟುಕೊಳ್ಳಬೇಕು. ಅನುಮಾನಾಸ್ಪದವಾಗಿ ಕಂಡುಬಂದರೆ ತಮಗೆ ಮಾಹಿತಿ ನೀಡಬೇಕು.
ಕೆ. ರಾಮರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು.

 ಪೊಲೀಸ್ ಮೂಲಗಳ ಪ್ರಕಾರ ಅಸ್ಸಾಂ ಮೂಲದ ಕಾರ್ಮಿಕರ ಸಂಖ್ಯೆ ಕೊಡಗು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಮುಂದೊಂದು ದಿನ ಅಕ್ರಮ ವಲಸಿಗರಿಂದ ಕೊಡಗು ಜಿಲ್ಲೆಯ ಕಾನೂನು, ಸುವ್ಯವಸ್ಥೆಗೆ ದೊಡ್ಡ ಅಡ್ಡಿ ಆತಂಕ ಎದುರಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಅವರಿಗೆ ಸ್ಥಳೀಯವಾಗಿ ಅಗತ್ಯವಿರುವ ದಾಖಲೆಗಳನ್ನು ಮಾಡಿಕೊಡುವ ದೊಡ್ಡ ಜಾಲ ಇದೆ.
ಕೆ ಜಿ ಬೋಪಯ್ಯ, ಮಾಜಿ ಸ್ಪೀಕರ್