ಮೈಸೂರಿನ ಮುಡಾದಿಂದ ಅಕ್ರಮವಾಗಿ ಸೈಟ್ ಪಡೆದ ಆರೋಪದ ಮೇಲೆ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲರು ಅನುಮತಿ ನೀಡಿದ್ದು, ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ಸಿಎಂ ಸಿದ್ಧರಾಮಯ್ಯ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದು, ಕಾಂಗ್ರೆಸ್ ನಾಯಕರು ರಾಜ್ಯಪಾಲರ ಕ್ರಮವನ್ನು ಟೀಕಿಸಿದ್ದಾರೆ.

ಬೆಂಗಳೂರು (ಆ.17): ಮೈಸೂರಿನ ಮುಡಾದಿಂದ ಅಕ್ರಮವಾಗಿ 14 ಸೈಟ್ ಪಡೆದುಕೊಂಡ ಆರೋಪದ ಮೇಲೆ ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಟಿಜೆ ಅಬ್ರಾಹಂ, ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್‌ ಕುಮಾರ್ ಎಂಬ ಮೂವರು ದೂರಿನ ಹಿನ್ನೆಲೆ ಮುಖ್ಯಮಂತ್ರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅನುಮತಿ ನೀಡಿದ್ದಾರೆ. ಇದು ಸಿದ್ದರಾಮಯ್ಯ ಅವರನ್ನು ಮೊದಲ ಬಾರಿ ಕಾನೂನು ಕುಣಿಕೆಯಲ್ಲಿ ಸಿಕ್ಕಿಸುವಂತೆ ಮಾಡಿದೆ. ಇದು ಅವರ 40 ವರ್ಷದ ರಾಜಕೀಯ ಜೀವನಕ್ಕೆ ಕಪ್ಪುಚುಕ್ಕೆಯಾಗಿದೆ.

Add Asianetnews Kannada as a Preferred SourcegooglePreferred

ಇದೀಗ ಈ ಪ್ರಕರಣ ಸಂಬಂಧ ಸಿಎಂ ನಿವಾಸದಲ್ಲಿ ಕಾನೂನು ಹೋರಾಟದ ಬ್ಲೂ ಪ್ರಿಂಟ್ ಸಿದ್ದವಾಗಿದೆ. ಕಾನೂನು ಹೋರಾಟಕ್ಕೆ ದೆಹಲಿಯಿಂದ ವಕೀಲರು ಆಗಮಿಸಲಿದ್ದು, ಅಭಿಷೇಕ್ ಮನುಸಿಂಘ್ವಿ ಅವರು ನಾಳೆ ಸಂಜೆಯೊಳಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಕೋರ್ಟ್‌ನಲ್ಲಿ ತನಿಖೆಗೆ ಆದೇಶ ಸಿಕ್ರೆ ತಕ್ಷಣ ಸಿದ್ದರಾಮಯ್ಯ ವಿರುದ್ದ ಎಫ್ಐಆರ್! ಸಿಎಂಗೆ ದೂರುದಾರರ ಚೆಕ್‌ ಮೇಟ್‌

ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ನೇತೃತ್ವದಲ್ಲಿ ರಾಜ್ಯ ವಕೀಲರ ತಂಡ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಪೊನ್ನಣ್ಣ ನೇತೃತ್ವದ ತಂಡವನ್ನು ಅಭಿಷೇಕ್ ಮನುಸಿಂಘ್ವಿ ಸಲಹೆಯಂತೆ ಮುನ್ನಡೆಸಿ ಕಾನೂ‌ನು ಹೋರಾಟಕ್ಕೆ ಸಿದ್ದತೆ ನಡೆಸಲಾಗಿದೆ. ಎಫ್ ಐಆರ್ ನಂತರ ಕಪಿಲ್ ಸಿಬಲ್ ಸಹಾ ಜೊತೆಗೂಡಲಿದ್ದಾರೆ. 

ಇನ್ನು ರಾಜ್ಯಪಾಲರನ್ನು‌ ಭೇಟಿ ಮಾಡಲು‌ ಸಚಿವರ ಸಭೆಯಲ್ಲಿ ‌ತಿರ್ಮಾನ ಮಾಡಲಾಗಿತ್ತು. ಹಿರಿಯ ಸಚಿವರ ನಿಯೋಗ ದಿಂದ ರಾಜ್ಯಪಾಲರ ಭೇಟಿಗೆ ಯೋಚನೆ ಮಾಡಲಾಗಿತ್ತು. ಆದರೆ ರಾಜ್ಯಪಾಲರು ಭೇಟಿ ಅನುಮತಿಯನ್ನು ನಿರಾಕರಿಸಿದ್ದಾರೆ.

ಸಿಎಂ ವಿರುದ್ಧ ಪ್ರಾಸಿಕ್ಯೂಷನ್: ತುರ್ತು ಸಚಿವ ಸಂಪುಟ ಸಭೆ ರದ್ದು, ನಿವಾಸಕ್ಕೆ ಸಚಿವರ ದೌಡು

ರಾಮಲಿಂಗಾ ರೆಡ್ಡಿ ಸಾಲು ಸಾಲು ಪ್ರಶ್ನೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತರಾತುರಿಯಲ್ಲಿ ಪ್ರಾಸಿಕ್ಯೂಷನ್​​ಗೆ ರಾಜ್ಯಪಾಲರು ಅನುಮತಿ ನೀಡಿರುವುದರ ಹಿಂದೆ ಕೇಂದ್ರ ಹಾಗೂ ಬಿಜೆಪಿ ನಾಯಕರ ಒತ್ತಡ ಇದ್ದು, ಅವರು ಕುಣಿಸಿದಂತೆ ರಾಜ್ಯಪಾಲರು ಕುಣಿಯುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದ್ದು, ರಾಜ್ಯಪಾಲರ ಸ್ಥಾನಕ್ಕೆ ಇದು ಶೋಭೆ ತರುವುದಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಸಾಲು ಸಾಲು ಪ್ರಶ್ನೆ ಎತ್ತಿದ್ದಾರೆ.

  • ಎಚ್.ಡಿ ಕುಮಾರಸ್ವಾಮಿಯವರ ಗಣಿ ಹಗರಣದ ತನಿಖೆಗೆ ಲೋಕಾಯುಕ್ತ ಸಂಸ್ಥೆಯೇ ಅನುಮತಿ ಕೇಳಿದ್ದರೂ ರಾಜ್ಯಪಾಲರು ಕಳೆದ 10 ತಿಂಗಳಿಂದ ಕಡತವನ್ನು ಮೂಲೆಗೆ ತಳ್ಳಿ ಕೂತಿದ್ದಾರೆ.
  • ಶಶಿಕಲಾ ಜೊಲ್ಲೆಯ ಮೊಟ್ಟೆ ಹಗರಣದ ವಿರುದ್ಧದ ತನಿಖೆಗೆ ಅನುಮತಿ ಕೋರಿದ ಕಡತವನ್ನು ಸಹ ಸುಮಾರು 2 ವರ್ಷಗಳಿಂದ ರಾಜ್ಯಪಾಲರು ಬಾಕಿ ಉಳಿಸಿಕೊಂಡಿದ್ದಾರೆ.
  • ಮುರುಗೇಶ್‌ ನಿರಾಣಿ ಮಂತ್ರಿಯಾಗಿದ್ದಾಗ ಬೃಹತ್‌ ಕೈಗಾರಿಕೆ ಇಲಾಖೆ ವ್ಯಾಪ್ತಿಯಡಿ ಬರುವ ಮಾರ್ಕೆಟಿಂಗ್‌, ಜಾಹೀರಾತು ಮತ್ತು ಪ್ರಚಾರ ಸಂಸ್ಥೆಯಲ್ಲಿ 2011-15ರ ನಡುವೆ ನಡೆದ ಅಕ್ರಮ ನೇಮಕಾತಿಯ ತನಿಖೆಗೆ ಅನುಮತಿ ಕೋರಿರುವ ಕಡತ ನಿದ್ರಾವಸ್ಥೆಯಲ್ಲಿದೆ. 
  • ಜನಾರ್ಧನ್ ರೆಡ್ಡಿಯ ಗಣಿ ಹಗರಣದ ಕಡತ ರಾಜಭವನದಲ್ಲಿ ಧೂಳು ಹಿಡಿದಿದೆ.

ಬಿಜೆಪಿ ಮತ್ತು ಮಿತ್ರಪಕ್ಷದ ಬಗೆದಷ್ಟು ಲೆಕ್ಕ ಹಾಕದಷ್ಟು ಹಗರಣಗಳ ತನಿಖೆಗೆ ಅನುಮತಿ ಕೋರಿರುವ ಕಡತಗಳು ರಾಜಭವನದಲ್ಲಿ ವರ್ಷಗಳಿಂದ ಇದ್ದು, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಾಜ್ಯಪಾಲರು ಸಿದ್ದರಾಮಯ್ಯ ನವರ ವಿಚಾರದಲ್ಲಿ ಮಾತ್ರ ತಮ್ಮ ಮಂತ್ರದಂಡವನ್ನು ಉಪಯೋಗಿಸಿ ಹೇಗಾದರೂ ಮಾಡಿ ಈ ಜನಪರ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಬೇಕೆಂದು ಹೊರಟಿರುವುದು ಕಾನೂನು ಬಾಹಿರವಾಗಿದ್ದು, ಇದು ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ನಾಶ ಮಾಡುವ ಪ್ರಯತ್ನವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.