*  ದಶಕಗಳಿಂದ ಉಳಿದಿದ್ದ ಅದಿರು ರಫ್ತಿಗೆ ಒಪ್ಪಿಗೆ*  ರಫ್ತು ನಿರ್ಬಂಧ ಸಡಿಲಿಕೆಗೆ ಕರ್ನಾಟಕಕ್ಕೆ ಸಲಹೆ*  ವಿದೇಶಗಳಲ್ಲಿನ ಕಂಪನಿಗಳ ಜೊತೆ ನೇರ ಒಪ್ಪಂದ ಮಾಡಿಕೊಂಡು ಕಬ್ಬಿಣದ ಅದಿರು ರಫ್ತು  

ನವದೆಹಲಿ(ಮೇ.21): ಕರ್ನಾಟಕದ 3 ಜಿಲ್ಲೆಗಳಲ್ಲಿ ಗಣಿಗಳಿಂದ ಈಗಾಗಲೇ ಹೊರತೆಗೆಯಲಾಗಿರುವ ಕಬ್ಬಿಣದ ಅದಿರನ್ನು ರಫ್ತು ಮಾಡಲು ಸುಪ್ರೀಂಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ. ಹೀಗಾಗಿ ದಶಕಗಳಿಂದ ಗಣಿ ಪ್ರದೇಶ ಮತ್ತು ಬಂದರುಗಳಲ್ಲಿ ಸಂಗ್ರಹವಾಗಿದ್ದ ಭಾರೀ ಪ್ರಮಾಣದ ಅದಿರನ್ನು ರಫ್ತು ಮಾಡಲು ಗಣಿ ಕಂಪನಿಗಳಿಗೆ ಅವಕಾಶ ಸಿಕ್ಕಿದಂತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅನಿಯಂತ್ರಿತ ಗಣಿಗಾರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕರ್ನಾಟಕದ ಕಬ್ಬಿಣದ ಅದಿರು ಗಣಿಗಾರಿಕೆ ಮೇಲೆ ಹೇರಿದ್ದ ಸಮಯಕ್ಕೂ, ಈಗಿನ ಸಮಯಕ್ಕೂ ಬಹಳ ಬದಲಾವಣೆ ಆಗಿದೆ ಎಂದಿರುವ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರನ್ನೊಳಗೊಂಡ ನ್ಯಾಯಪೀಠ ಅದಿರಿನ ರಫ್ತಿಗೆ ಹೇರಿದ್ದ ನಿರ್ಬಂಧಗಳನ್ನು ತೆರವುಗೊಳಿಸುತ್ತಿರುವುದಾಗಿ ಹೇಳಿತು.

ಬಿಬಿಎಂಪಿ ಎಲೆಕ್ಷನ್‌ ವಿಳಂಬಕ್ಕೆ ಮತ್ತೆ ಮನವಿ?

2012ರಲ್ಲಿ ಕರ್ನಾಟಕದಿಂದ ಕಬ್ಬಿಣದ ಅದಿರು ರಫ್ತು ಮಾಡುವುದರ ಮೇಲೆ ಸುಪ್ರೀಂಕೋರ್ಟ್‌ ನಿಷೇಧವನ್ನು ಹೇರಿತ್ತು. ಅನಿಯಂತ್ರಿತ ಗಣಿಗಾರಿಕೆಯಿಂದ ಪರಿಸರದ ಅವನತಿಯನ್ನು ತಡೆಗಟ್ಟಲು ಹಾಗೂ ರಾಜ್ಯದ ಖನಿಜ ಸಂಪನ್ಮೂಲಗಳನ್ನು ಭವಿಷ್ಯದ ಪೀಳಿಗೆಗೆ ಸಂರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಈ ಆದೇಶ ಹೊರಡಿಸಲಾಗಿತ್ತು.

ಇದೇ ವೇಳೆ ಇ-ಹರಾಜಿಗೆ ಇದೀಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಹೀಗಾಗಿ ವಿದೇಶಗಳಲ್ಲಿನ ಕಂಪನಿಗಳ ಜೊತೆ ನೇರ ಒಪ್ಪಂದ ಮಾಡಿಕೊಂಡು ಕಬ್ಬಿಣದ ಅದಿರು ರಫ್ತು ಮಾಡಬೇಕು ಎಂದು ನ್ಯಾಯಪೀಠ ಆದೇಶಿಸಿತು. ನ್ಯಾಯಾಲಯದ ಈ ಆದೇಶದಿಂದಾಗಿ ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಗಣಿಗಳಲ್ಲಿ ಈಗಾಗಲೇ ಅಗೆದಿಟ್ಟ ಕಬ್ಬಿಣದ ಅದಿರಿನ ರಫ್ತಿಗೆ ಅವಕಾಶ ಸಿಗಲಿದೆ.