* 4 ಕಂದಾಯ ವಿಭಾಗಕ್ಕೆ 10, ಕರಾವಳಿಗೆ 2 ಟ್ಯಾಂಕರ್‌* ಹಟ್ಟಿ ಗೋಲ್ಡ್‌ ಮೈನ್ಸ್‌ ಕ್ಯಾಂಪಸ್‌ನ ಆಸ್ಪತ್ರೆಯಲ್ಲಿ ನರ್ಸಿಂಗ್‌ ಕಾಲೇಜು ಸ್ಥಾಪಿಸಿಸಲು ತೀರ್ಮಾನ* ಆಮ್ಲಜನಕ ಸಾಂದ್ರಕ ಸಂಗ್ರಹಿಸಿ ಎಲ್ಲ ಜಿಲ್ಲೆಗಳಿಗೆ ವಿತರಣೆ ಮಾಡುವಂತೆ ಅಧಿ​ಕಾರಿಗಳಿಗೆ ನಿರ್ದೇಶನ 

ಬೆಂಗಳೂರು(ಮೇ.16): ಕೋವಿಡ್‌ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಸೋಂಕಿತರ ರಕ್ಷಣೆಗೆ ಧಾವಿಸಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ನಾಲ್ಕು ಕಂದಾಯ ವಿಭಾಗಕ್ಕೆ 10 ಕ್ರಯೋಜೆನಿಕ್‌ ಆಮ್ಲಜನಕ ಟ್ಯಾಂಕರ್‌ಗಳನ್ನು ಮತ್ತು ಕರಾವಳಿ ವಿಭಾಗಕ್ಕೆ ಪ್ರತ್ಯೇಕ ಎರಡು ಟ್ಯಾಂಕರ್‌ಗಳನ್ನು ನೀಡಲು ನಿರ್ಧರಿಸಿದೆ.

Add Asianetnews Kannada as a Preferred SourcegooglePreferred

ವಿಕಾಸಸೌಧದಲ್ಲಿ ನಡೆದ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಈ ಸೂಚನೆ ನೀಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ, 10 ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಅಳವಡಿಸಲಾಗುತ್ತದೆ. ಆರೋಗ್ಯ ಇಲಾಖೆಯೊಂದಿಗೆ ಸಮಾಲೋಚಿಸಿ ಗಣಿ ಮತ್ತು ಭೂವಿಜ್ಞಾನ ವಿಭಾಗದ ಸಮಿತಿ ಆಸ್ಪತ್ರೆ ಗುರುತಿಸಬೇಕು, ಇದಲ್ಲದೇ, ಗಣಿ ಇಲಾಖೆಯಿಂದ ಒಂದು ಸಾವಿರ ಆಮ್ಲಜನಕ ಸಾಂದ್ರಕಗಳನ್ನು ಸಂಗ್ರಹಿಸಿ, ಅವುಗಳನ್ನು ಎಲ್ಲ ಜಿಲ್ಲೆಗಳಿಗೆ ವಿತರಣೆ ಮಾಡುವಂತೆ ಅಧಿ​ಕಾರಿಗಳಿಗೆ ನಿರ್ದೇಶನ ನೀಡಿದರು.

"

ಆಕ್ಸಿಜನ್ ಟ್ಯಾಂಕರ್ ಖರೀದಿ: ನಿರಾಣಿ ಕಾರ್ಯಕ್ಕೆ ಕಟೀಲ್‌ ಮೆಚ್ಚುಗೆ

ಹೆಚ್ಚಿನ ಸಂಖ್ಯೆಯಲ್ಲಿ ಆಕ್ಸಿಮೀಟರ್‌ಗಳನ್ನು ಸಂಗ್ರಹಿಸಿ ಗ್ರಾಮ ಪಂಚಾಯಿತಿ ಆರೋಗ್ಯ ಸಮಿತಿಗಳಿಗೆ ನೀಡಬೇಕು. ಇದನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀಡಿದರೆ, ಗ್ರಾಮಸ್ಥರಿಗೆ ಆಮ್ಲಜನಕದ ಶುದ್ಧತ್ವವನ್ನು ನಿಯಮಿತವಾಗಿ ಪರಿಶೀಲಿಸಬಹುದು ಎಂದು ಸಲಹೆ ನೀಡಿದ ಅವರು, ರಾಯಚೂರು ಜಿಲ್ಲೆ ಲಿಂಗಸೂರು ತಾಲ್ಲೂಕಿನಲ್ಲಿರುವ ಹಟ್ಟಿ ಗೋಲ್ಡ್‌ ಮೈನ್ಸ್‌ ಕ್ಯಾಂಪಸ್‌ನ ಆಸ್ಪತ್ರೆಯಲ್ಲಿ ನರ್ಸಿಂಗ್‌ ಕಾಲೇಜು ಸ್ಥಾಪಿಸಿಸಲು ತೀರ್ಮಾನಿಸಲಾಗಿದೆ. ಇದರಿಂದ ರಾಯಚೂರು ಜಿಲ್ಲೆಯ ಅರೇ ವೈದ್ಯಕೀಯ ಮತ್ತು ದಾದಿಯರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಆಸ್ಪತ್ರೆಯಲ್ಲಿ ವಿಶೇಷ ಆಮ್ಲಜನಕ ಜನರೇಟರ್‌ ಸ್ಥಾವರವನ್ನು ಸ್ಥಾಪಿಸಲಾಗುವುದು ಎಂದರು. ಇಲಾಖೆ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ, ನಿದೇರ್ಶಕ ಪಿ.ಆರ್‌ ರವೀಂದ್ರ ಉಪಸ್ಥಿತರಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona