ಉದ್ದಿಮೆ ಬೆಳೆಸಿದರೆ ನಿರುದ್ಯೋಗ ಶಮನ: ಶೆಟ್ಟಿ
ಕೇವಲ ತಂತ್ರಜ್ಞಾನದಿಂದ ಮಾತ್ರ ನಿರುದ್ಯೋಗ ಸೃಷ್ಟಿಯಾಗುವುದಿಲ್ಲ ಎಂದ ಅವರು, ದೂರದೃಷ್ಟಿಯ ಚಿಂತನೆ ಮತ್ತು ಕಾರ್ಯತಂತ್ರದ ನಾಯಕತ್ವದಿಂದ ವ್ಯಾಪಾರದಲ್ಲಿ ಅಭಿವೃದ್ಧಿಯಾಗಿ ಯಶಸ್ಸು ಸಾಧಿಸಬಹುದಾಗಿದೆ. ಕಾಸ್ಟ್ ಅಕೌಂಟೆಂಟ್ ಸಂಸ್ಥೆಯು ಕೈಗಾರಿಕೋದ್ಯಮ, ಸ್ಟಾರ್ಟ್ಅಪ್ ಇತ್ಯಾದಿಗಳ ಉದ್ಯಮ ಸ್ಥಾಪಿಸಲು ಹೆಚ್ಚು ಸಹಾಯಕವಾಗಿದೆ. ಇಂತಹ ಕಾರ್ಯಾಗಾರಗಳ ಆಯೋಜನೆಯಿಂದ ಮಾಹಿತಿಗಳ ವಿನಿಮಯದ ಜೊತೆಗೆ ಕೈಗಾರಿಕೆಗಳು, ಉದ್ಯಮಗಳ ಅಭಿವೃದ್ಧಿಗೆ ನೆರವಾಗಲು ಸಾಧ್ಯ- ಸುಧಾಕರ್ ಎಸ್. ಶೆಟ್ಟಿ
ಬೆಂಗಳೂರು[ನ.24]: ದೇಶದಲ್ಲಿ ಉದ್ಯಮಗಳನ್ನು ಬೆಳೆಸುವುದರಿಂದ ಮಾತ್ರ ನಿರುದ್ಯೋಗ ಸಮಸ್ಯೆ ನಿವಾರಣೆ ಮತ್ತು ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿಅಭಿಪ್ರಾಯಪಟ್ಟರು.
ಶುಕ್ರವಾರ ದಿ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ದಕ್ಷಿಣ ಭಾರತ ಪ್ರಾದೇಶಿಕ ಸಮಿತಿ ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ಜೆಎನ್ ಟಾಟಾ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಪ್ರಾದೇಶಿಕ ‘ಸಿಎಂಎ (ಸರ್ಟಿಫೈಡ್ ಮ್ಯಾನೇಜ್ಮೆಂಟ್ ಅಕೌಂಟೆಂಟ್) ಸಮಾವೇಶ-2018’ದಲ್ಲಿ ಅವರು ಮಾತನಾಡಿದ್ದಾರೆ.
ಕೇವಲ ತಂತ್ರಜ್ಞಾನದಿಂದ ಮಾತ್ರ ನಿರುದ್ಯೋಗ ಸೃಷ್ಟಿಯಾಗುವುದಿಲ್ಲ ಎಂದ ಅವರು, ದೂರದೃಷ್ಟಿಯ ಚಿಂತನೆ ಮತ್ತು ಕಾರ್ಯತಂತ್ರದ ನಾಯಕತ್ವದಿಂದ ವ್ಯಾಪಾರದಲ್ಲಿ ಅಭಿವೃದ್ಧಿಯಾಗಿ ಯಶಸ್ಸು ಸಾಧಿಸಬಹುದಾಗಿದೆ. ಕಾಸ್ಟ್ ಅಕೌಂಟೆಂಟ್ ಸಂಸ್ಥೆಯು ಕೈಗಾರಿಕೋದ್ಯಮ, ಸ್ಟಾರ್ಟ್ಅಪ್ ಇತ್ಯಾದಿಗಳ ಉದ್ಯಮ ಸ್ಥಾಪಿಸಲು ಹೆಚ್ಚು ಸಹಾಯಕವಾಗಿದೆ. ಇಂತಹ ಕಾರ್ಯಾಗಾರಗಳ ಆಯೋಜನೆಯಿಂದ ಮಾಹಿತಿಗಳ ವಿನಿಮಯದ ಜೊತೆಗೆ ಕೈಗಾರಿಕೆಗಳು, ಉದ್ಯಮಗಳ ಅಭಿವೃದ್ಧಿಗೆ ನೆರವಾಗಲು ಸಾಧ್ಯ ಎಂದು ಹೇಳಿದ್ದಾರೆ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಾಸ್ಟ್ ಮ್ಯಾನೇಜ್ಮೆಂಟ್ ಅಕೌಂಟೆಂಟ್(ಸಿಎಂಎ) ಪಾತ್ರ ಅತ್ಯಂತ ಮುಖ್ಯವಾದದ್ದು. ಇಡೀ ವಿಶ್ವದಲ್ಲೇ ಉದ್ಯಮ ಕ್ಷೇತ್ರ ಹೆಚ್ಚು ಸ್ಪರ್ಧೆಯನ್ನು ಎದುರಿಸುತ್ತಿದೆ. ಆದ್ದರಿಂದ ಯಾವುದೇ ಉದ್ಯಮ ಆರಂಭಿಸಬೇಕಾದರೆ ಯೋಜನೆ, ವೆಚ್ಚ, ಬದಲಾವಣೆ, ಸಂರಕ್ಷಣೆ, ಅಭಿವೃದ್ಧಿ, ವ್ಯಾಪಾರ, ಸಂಘಟನೆ ಹೀಗೆ ಪ್ರತಿಯೊಂದೂ ಮುಖ್ಯವಾಗುತ್ತದೆ. ಅನಾವಶ್ಯಕವಾಗಿ ಬಂಡವಾಳ ಹೂಡಿಕೆ ಮಾಡುವುದರಿಂದ ನಿರೀಕ್ಷಿತ ಆದಾಯ ಬರಲು ಸಾಧ್ಯವಿಲ್ಲ. ಅದಕ್ಕಾಗಿ ಯೋಜನೆ ರೂಪಿಸಿ ಶಿಸ್ತುಬದ್ಧವಾಗಿ ಕಾರ್ಯರೂಪಕ್ಕೆ ತರುವ ಅವಶ್ಯಕತೆ ಇದೆ. ಈ ಎಲ್ಲ ಪಾತ್ರಗಳನ್ನು ಸಿಎಂಎ ನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ.
ಯಾವುದೇ ಹೊಸ ಉತ್ಪನ್ನ ಅಥವಾ ಸೇವೆಯನ್ನು ಮಾರುಕಟ್ಟೆಗೆ ಪರಿಚಯಿಸುವಾಗ ಮೊದಲು ಅಗತ್ಯತೆ, ಯೋಜನೆಯ ಪ್ರಕ್ರಿಯೆ ಮತ್ತು ಸೌಲಭ್ಯಗಳನ್ನು ಬಗ್ಗೆ ತಿಳಿದುಕೊಳ್ಳಬೇಕಿದೆ. ಜತೆಗೆ ಆರ್ಥಿಕ ಕಾರ್ಯಸಾಧ್ಯತೆಗಳನ್ನು ಅಭ್ಯಸಿಸುವ ಅಗತ್ಯತೆ ಇದೆ. ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಎಲ್ಲಿ, ಹೇಗೆ ಪರಿಚಯಿಸಿದರೆ ಲಾಭ ಸಿಗುತ್ತದೆ ಎಂಬಿತ್ಯಾದಿ ವಿಷಯಗಳ ಅಧ್ಯಯನದಿಂದ ಮಾತ್ರ ಉದ್ಯಮದ ಉಳಿವು ಹಾಗೂ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇಂದಿನ ಕಾರ್ಯಾಗಾರ ಹೆಚ್ಚು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಎಚ್ಎಎಲ್ ಸಂಸ್ಥೆಯ ಹಣಕಾಸು ನಿರ್ದೇಶಕ ಅನಂತ ಕೃಷ್ಣಮೂರ್ತಿ ಮಾತನಾಡಿ, ಪ್ರಸ್ತುತ ಪ್ರತಿಯೊಂದು ಉದ್ಯಮದಲ್ಲಿ ಸ್ಪರ್ಧೆ ಇದೆ. ಕೈಗಾರಿಕೆಗಳು ಸ್ಪರ್ಧಾತ್ಮಕತೆ ಅಳವಡಿಸಿಕೊಳ್ಳದಿದ್ದರೆ ಉದ್ಯಮ ಉಳಿಯುವುದು ಕಷ್ಟ. ಕೈಗಾರಿಕೋದ್ಯಮಗಳು ಅಭಿವೃದ್ಧಿ ಸಾಧಿಸಲು ಕಾಸ್ಟ್ ಅಕೌಂಟೆಂಟ್ಸ್ ಸಹಾಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ದಿ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮಾಜಿ ಅಧ್ಯಕ್ಷ ಜಿ.ಎನ್.ವೆಂಕಟರಾಮನ್, ಐಸಿಎಐ ಅಧ್ಯಕ್ಷ ಸುರೇಶ್ ಗುಂಜಾಲ್, ಬೆಂಗಳೂರು ಚಾಪ್ಟರ್ ಅಧ್ಯಕ್ಷ ಎನ್.ಆರ್.ಕೌಶಿಕ್ ಉಪಸ್ಥಿತರಿದ್ದರು.