ನೆಲಮಂಗಲದಲ್ಲಿ ಅನಧಿಕೃತ ಫ್ಲೆಕ್ಸ್‌ ಬ್ಯಾನರ್ ತಗುಲಿ, ಜರ್ಮನಿಯಲ್ಲಿ ಎಂಎಸ್ ಓದುತ್ತಿದ್ದ ತೇಜಸ್ ಗೌಡ ಎಂಬ ಯುವಕ ಬೈಕ್‌ನಿಂದ ಬಿದ್ದು ಸಾವನ್ನಪ್ಪಿದ್ದಾರೆ. ಈ ದುರಂತದ ನಂತರ ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ನಗರಸಭೆ ಅಧಿಕಾರಿಗಳು, ನಗರದಾದ್ಯಂತ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದಾರೆ.

ನೆಲಮಂಗಲ (ನ.23) ನೆಲಮಂಗಲ ನಗರದಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ಫ್ಲೆಕ್ಸ್‌ಗಳ ಹಾವಳಿಗೆ ಯುವಕನೊಬ್ಬ ಬಲಿಯಾದ ಆಘಾತಕಾರಿ ಘಟನೆಯ ನಂತರ, ನೆಲಮಂಗಲ ನಗರಸಭೆ ಅಧಿಕಾರಿಗಳು ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ. 

ಜರ್ಮನಿಯಲ್ಲಿ ಎಂಎಸ್ ಓದುತ್ತಿದ್ದ ತೇಜಸ್ ಗೌಡ:

ಜರ್ಮನಿಯಲ್ಲಿ ಎಂಎಸ್ ವಿದ್ಯಾಭ್ಯಾಸ ಮಾಡುತ್ತಿದ್ದ ತೇಜಸ್ ಗೌಡ ಎಂಬ ಯುವಕ, ನಗರದ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ವಿದ್ಯುತ್ ಕಂಬಕ್ಕೆ ಕಟ್ಟಿದ್ದ ಫ್ಲೆಕ್ಸ್ ತಗುಲಿ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದರು. ​ಈ ಅಮಾಯಕ ಯುವಕನ ಸಾವಿಗೆ ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು ಮತ್ತು ಮಾಧ್ಯಮಗಳಲ್ಲಿ ಘಟನೆಯ ಕುರಿತು ವ್ಯಾಪಕ ವರದಿಯಾಗಿತ್ತು. 

ಯುವಕನ ಸಾವು ಆಗಬೇಕಿತ್ತಾ? ನಗಸಭೆ ವಿರುದ್ಧ ಸಾರ್ವಜನಿಕ ಆಕ್ರೋಶ:

ತೇಜಸ್ ಗೌಡ ಅವರ ಸಾವಿನ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕ ಒತ್ತಡಕ್ಕೆ ಮಣಿದು, ಕೊನೆಗೂ ಎಚ್ಚೆತ್ತ ನಗರಸಭೆ ಅಧಿಕಾರಿಗಳು, ನಗರದ ಮುಖ್ಯರಸ್ತೆಗಳಲ್ಲಿ ವಿದ್ಯುತ್ ಕಂಬಗಳಿಗೆ ಕಟ್ಟಲಾಗಿದ್ದ ಎಲ್ಲಾ ಅನಧಿಕೃತ ಫ್ಲೆಕ್ಸ್‌ಗಳನ್ನು ನಗರಸಭೆ ಸಿಬ್ಬಂದಿ ಮೂಲಕ ತಕ್ಷಣವೇ ತೆರವುಗೊಳಿಸಿದ್ದಾರೆ. ಒಬ್ಬ ಅಮಾಯಕ ಯುವಕ ಸಾವನ್ನಪ್ಪಿದ ನಂತರವೇ ಅಧಿಕಾರಿಗಳು ಕಣ್ತೆರೆದಿರುವುದು ಸ್ಥಳೀಯರ ಟೀಕೆಗೆ ಗುರಿಯಾಗಿದೆ.