ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದರೆ ಹೋರಾಟ: ಬಿಜೆಪಿ
ಗೋಹತ್ಯೆ ನಿಷೇಧ ಕಾನೂನು ರದ್ದು ಮಾಡಲು ಮುಂದಾದರೆ ರಾಜ್ಯದಲ್ಲಿ ಇನ್ನೆಂದೂ ಕಾಣದ ರೀತಿಯಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಈ ಎಚ್ಚರಿಕೆಯನ್ನು ಸಚಿವರಿಗೆ ಮತ್ತು ಸರ್ಕಾರಕ್ಕೆ ನೀಡುತ್ತಿದ್ದೇವೆ. ಗೋಹತ್ಯೆ ನಿಷೇಧ ಆಗಬೇಕು ಎಂದು ನಾವು ಕಾನೂನು ಜಾರಿಗೊಳಿಸಿದ್ದೆವು ಎಂದ ರವಿಕುಮಾರ್
ಬೆಂಗಳೂರು(ಜೂ.04): ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಕುರಿತ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಹೇಳಿಕೆಯನ್ನು ವಿಧಾನಪರಿಷತ್ ಸದಸ್ಯ ರವಿಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
‘ಎಮ್ಮೆ, ಕೋಣಗಳನ್ನು ಕಡಿಯಬಹುದಾದರೆ ಹಸು ಏಕೆ ಕಡಿಯಬಾರದು?’ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ರವಿಕುಮಾರ್, ‘ಗೋಹತ್ಯೆ ನಿಷೇಧ ಕಾನೂನು ವಾಪಸ್ ಪಡೆದರೆ ರಾಜ್ಯಾದ್ಯಂತ ಹೋರಾಟದ ಅಭಿಯಾನ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್?
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಗೋಹತ್ಯೆ ನಿಷೇಧ ಕಾನೂನು ರದ್ದು ಮಾಡಲು ಮುಂದಾದರೆ ರಾಜ್ಯದಲ್ಲಿ ಇನ್ನೆಂದೂ ಕಾಣದ ರೀತಿಯಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಈ ಎಚ್ಚರಿಕೆಯನ್ನು ಸಚಿವರಿಗೆ ಮತ್ತು ಸರ್ಕಾರಕ್ಕೆ ನೀಡುತ್ತಿದ್ದೇವೆ. ಗೋಹತ್ಯೆ ನಿಷೇಧ ಆಗಬೇಕು ಎಂದು ನಾವು ಕಾನೂನು ಜಾರಿಗೊಳಿಸಿದ್ದೆವು’ ಎಂದರು.
‘ಗೋವನ್ನು ಹಿಂದೂಗಳು ಪೂಜಿಸುತ್ತಾರೆ. ಕೃಷಿ ಉಳುಮೆಗೆ ಬಳಸುವ ಮೂಲಕ ಭೂಮಿ ಫಲವತ್ತು ಹೆಚ್ಚುತ್ತದೆ. ನಿಷೇಧ ವಾಪಸ್ ತೆಗೆದರೆ ತೀವ್ರ ಹೋರಾಟ ನಡೆಸುವುದರ ಜತೆಗೆ ರಾಜ್ಯಾದ್ಯಂತ ಗೋವು ಪೂಜೆ ಮಾಡಿ ಅಭಿಯಾನ ಮಾಡುತ್ತೇವೆ’ ಎಂದು ಹೇಳಿದರು.