ಹೆಚ್ಚುವರಿ ವಿದ್ಯುತ್ ಸಂಗ್ರಹ ಯೋಜನೆಗೆ ಸಂಪುಟ ಅಸ್ತು
ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ ಅನ್ನು ಸಂಗ್ರಹಿಸಿ ಹೈಬ್ರೀಡ್ ಮಾದರಿಯಲ್ಲಿ ಗ್ರಾಹಕರಿಗೆ ಪೂರೈಕೆ ಮಾಡುವ ಸಂಬಂಧ ಗ್ರಿಡ್ ಆಧಾರಿತ ಒಂದು ಸಾವಿರ ಮೆಗಾವ್ಯಾಟ್ ಹೈಡ್ರೋ ಸ್ಟೋರೇಜ್ ವಿದ್ಯುತ್ ಯೋಜನೆ ಜಾರಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡುವ ಮೂಲಕ ಮಹತ್ವದ ತೀರ್ಮಾನ ಕೈಗೊಂಡಿದೆ.
ಬೆಂಗಳೂರು (ಡಿ.09): ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ ಅನ್ನು ಸಂಗ್ರಹಿಸಿ ಹೈಬ್ರೀಡ್ ಮಾದರಿಯಲ್ಲಿ ಗ್ರಾಹಕರಿಗೆ ಪೂರೈಕೆ ಮಾಡುವ ಸಂಬಂಧ ಗ್ರಿಡ್ ಆಧಾರಿತ ಒಂದು ಸಾವಿರ ಮೆಗಾವ್ಯಾಟ್ ಹೈಡ್ರೋ ಸ್ಟೋರೇಜ್ ವಿದ್ಯುತ್ ಯೋಜನೆ ಜಾರಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡುವ ಮೂಲಕ ಮಹತ್ವದ ತೀರ್ಮಾನ ಕೈಗೊಂಡಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಯೋಜನೆ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಸೌರ ಮತ್ತು ಪವನ ಶಕ್ತಿಯ ಮೂಲಕ ಉತ್ಪಾದಿಸುವ ವಿದ್ಯುತ್ ರಾಜ್ಯದಲ್ಲಿ ಹೆಚ್ಚಾಗಿ ಉತ್ಪಾದನೆಯಾಗುತ್ತಿದೆ. ಈ ರೀತಿಯಾಗಿ ಉತ್ಪಾದನೆಯಾಗುತ್ತಿರುವ ಹೆಚ್ಚುವರಿ ವಿದ್ಯುತ್ ಅನ್ನು ಬ್ಯಾಟರಿ ಮೂಲಕ ಶೇಖರಿಸಿ ಆದನ್ನು ಹೈಬ್ರಿಡ್ ವಿದ್ಯುತ್ ಆಗಿ ಪರಿವರ್ತಿಸಲು ಯೋಜನೆ ರೂಪಿಸಲಾಗುತ್ತಿದೆ. ಭವಿಷ್ಯದಲ್ಲಿ ವಿದ್ಯುತ್ ಕೊರತೆಯಾದರೆ ಇದನ್ನು ಬಳಸಿಕೊಳ್ಳಲು ಅನುಕೂಲವಾಗಲಿದೆ. ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಮಾಡಲಾಗುತ್ತದೆ. ಟೆಂಡರ್ ಕರೆದ ಬಳಿಕ ಖಾಸಗಿ ಕಂಪನಿಗಳು ಎಲ್ಲೆಲ್ಲಿ ಸಂಗ್ರಹ ಮಾಡಬೇಕು ಎಂಬುದನ್ನು ಗುರುತಿಸಿಕೊಂಡು ಬರಲಿದ್ದಾರೆ. ಖಾಸಗಿಯವರೇ ಯೋಜನೆಯ ರೂಪುರೇಷೆ ಮಾಡಿಕೊಂಡು ಬರಲಿದ್ದಾರೆ. ನಂತರ ಸರ್ಕಾರದ ಸಮಾಲೋಚನೆ ನಡೆಸಿ ಯೋಜನೆ ಜಾರಿ ಮಾಡುವ ಉದ್ದೇಶ ಇದೆ ಎಂದು ಮಾಹಿತಿ ನೀಡಿದರು.
ಚಿರತೆಗಳು ಊರಿಗೆ ನುಗ್ಗಲು ಕಲ್ಲು ಕ್ವಾರಿ, ಗಣಿ ಕಾರಣ: ಸಂಜಯ್ ಗುಬ್ಬಿ
ಖಾಸಗಿ ಹೂಡಿಕೆಯಡಿ ಗ್ರಿಡ್ ಆಧಾರಿತ ಒಂದು ಸಾವಿರ ಮೆಗಾವ್ಯಾಟ್ ಹೈಡ್ರೋ ಸ್ಟೋರೇಜ್ ವಿದ್ಯುತ್ ಯೋಜನೆ ಜಾರಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಯೋಜನೆಗೆ ನಾಲ್ಕು ಸಾವಿರ ಕೋಟಿ ರು. ವೆಚ್ಚದಲ್ಲಿ ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ ಅವರಿಂದ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆಯು ಅನುಮತಿ ನೀಡಿದೆ ಎಂದು ಹೇಳಿದರು. ತಾಂತ್ರಿಕ ಸಮಸ್ಯೆ, ಹವಾಮಾನ ವೈಪರೀತ್ಯ ಸೇರಿಂತೆ ಯಾವುದೇ ಸಮಸ್ಯೆಯಿಂದ ವಿದ್ಯುತ್ ಉತ್ಪಾದನೆಯಲ್ಲಿ ಕುಂಠಿತವಾದರೆ ಸಂಗ್ರಹಿಸಿದ ವಿದ್ಯುತ್ ಬಳಕೆ ಮಾಡಲು ಸಾಧ್ಯವಾಗಲಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಸಂಗ್ರಹಣ ಕೇಂದ್ರಗಳನ್ನು ಮಾಡಬೇಕು ಎಂಬುದರ ಕುರಿತು ಇಂಧನ ಇಲಾಖೆ ಗಮನಿಸಲಿದೆ. ನಾಲ್ಕು ಸಾವಿರ ಕೋಟಿ ರು. ಮೊತ್ತದಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಕಳ್ಳಕಾಕರನ್ನು ನಿಯಂತ್ರಿಸಲು ಅಡಿಕೆ ತೋಟಕ್ಕೆ ಸಿಸಿಟಿವಿ: ರೈತನ ಹೊಸ ಉಪಾಯ
ಇದೇ ವೇಳೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ 2022-23ನೇ ಸಾಲಿಗೆ ಬ್ಯಾಂಕ್ಗಳಿಂದ ಅಥವಾ ಹಣಕಾಸು ಸಂಸ್ಥೆಗಳಿಂದ ಮೂರು ಸಾವಿರ ಕೋಟಿ ರು. ಸಾಲ ಪಡೆಯಲು ಸರ್ಕಾರದ ಖಾತ್ರಿ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಅಲ್ಲದೇ, ವಿದ್ಯುತ್ ಸರಬರಾಜು ಕಂಪನಿಗಳ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲು ಸರ್ಕಾರದಿಂದ ಹಣಕಾಸಿನ ನೆರವು ಒದಗಿಸಲು ಸರ್ಕಾರಿ ಆದೇಶಗಳಿಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ. 2002-03ನೇ ಸಾಲಿನಿಂದ 2021-22ನೇ ಸಾಲಿನವರೆಗೆ ಸಹಾಯಧನ ಒದಗಿಸುವಂತೆ ಕಂಪನಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. 15,219 ಕೋಟಿ ರು. ಬಾಕಿ ಇದ್ದು, ಈ ಪೈಕಿ ಎಂಟು ಸಾವಿರ ಕೋಟಿ ರು. ಅನ್ನು ನೀಡಲಾಗುತ್ತಿದೆ ಎಂದರು.