ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ಯಾವ ರಾಜ್ಯದ ಭಾಷೆಗೂ ಇಲ್ಲ ಕಾವಲು ಸಮಿತಿಯನ್ನು ರಚಿಸಿ ಅದಕ್ಕೆ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿದ್ದರು.  ಕನ್ನಡ ಭಾಷೆಯ ರಕ್ಷಣೆಗೆ ಮತ್ತು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸುವ ಬಗ್ಗೆ ಒತ್ತು ನೀಡುವುದಾಗಿ ತಿಳಿಸಿದ್ದಾರೆ. 

ಬೆಂಗಳೂರು (ನ.01): ದಕ್ಷಿಣ ಭಾರತದಲ್ಲಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಎಲ್ಲಿಯೂ ಭಾಷೆಗೆ ಕಾವಲು ಸಮಿತಿ ಎಂದು ‌ಇಲ್ಲ. ಆದರೆ, ನಾನು ರಾಮಕೃಷ್ಣ ಹೆಗಡೆಯವರ ಅವಧಿಯಲ್ಲಿ ಕನ್ನಡ ಕಾಯಲು ಕಾವಲು ಸಮಿತಿ ಬೇಕಲ್ಲ ಎಂದು ಕೇಳಿದೆ. ಆಗ ಕಾವಲು ಸಮಿತಿ ರಚಿಸಲಾಗಿದ್ದು, 1983ರಲ್ಲಿ ನಾನು ಕಾವಲು ಸಮಿತಿ ಅಧ್ಯಕ್ಷ ಆಗಿದ್ದೆ. ಎಂದಿಗೂ ಕನ್ನಡಕ್ಕೆ ಚ್ಯುತಿಯಾಗಲು ನಾನು ಬಿಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿ ನಡೆದ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡಕ್ಕೆ ಚ್ಯುತಿಯಾಗಲು ನಾನು ಎಂದಿಗೂ ಬಿಡುವುದಿಲ್ಲ. ನಾನು 1983 ರಲ್ಲಿ ಕಾವಲು ಸಮಿತಿ ಅಧ್ಯಕ್ಷ ಆಗಿದ್ದೆ. ನಾನು ರಾಮಕೃಷ್ಣ ಹೆಗಡೆಯವರಿಗೆ ಕನ್ನಡ ಕಾಯಲು ಕಾವಲು ಸಮಿತಿ ಬೇಕಲ್ಲ ಎಂದು ಕೇಳಿದೆ. ನೋಡಿ ಎಂತ ಪರಿಸ್ಥಿತಿ ಇದೆ. ಕಾವಲು ಸಮಿತಿ ಎಂದು ತಮಿಳುನಾಡು, ಕೇರಳ, ಆಂಧ್ರಪ್ರದೇಶ ಎಲ್ಲೂ ಇಲ್ಲ ‌. ಆದರೆ, ಕನ್ನಡಕ್ಕೆ ಕಾವಲು ಸಮಿತಿ ರಚಿಸಲಾಗಿತ್ತು. ಈಗ ಕಾವಲು ಸಮಿತಿ ಹೆಸರಲ್ಲಿ ಇಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದೆ. ನೋಡಿ ಎಂತಹ ಪರಿಸ್ಥಿತಿ ಇದೆ ಎಂದು ಹೇಳಿದರು.

ಯಾವುದೇ ಭಾಷೆ ಬಗ್ಗೆ ಹಾಗೂ ಸಂಸ್ಕೃತಿ ಬಗ್ಗೆ ಉದಾರತೆ ಇರಬಾರದು. ಅಭಿಮಾನ ಇರಬೇಕು. ಮನುಷ್ಯತ್ವ ಪ್ರೀತಿಸಲು ಉದಾರತೆ ಇರಬೇಕು. ಆದರೆ ಭಾಷೆಗೆ ಇರಬಾರದು. ತಮಿಳುನಾಡಿನವರು ಇಲ್ಲಿ ಬಂದು ತಮಿಳು ಮಾತನಾಡಿದರೆ ನಾವು ಅವರದೇ ಭಾಷೆಲಿ ಮಾತನಾಡುತ್ತೇವೆ. ತೆಲಗು ಮಾತಾಡಿದರೆ ನಾವೂ ಕೂಡ ತೆಲಗು ಮಾತನಾಡುತ್ತೇವೆ. ಇನ್ನು ನಮಗೆ ಇಂಗ್ಲಿಷ್ ಬರದೇ ಇದ್ದರೂ ಇಂಗ್ಲಿಷ್ ಮಾತಾಡ್ತೇವೆ. ಬೇರೆ ಭಾಷೆ ಮಾತಾಡಬೇಡಿ ಎನ್ನಲ್ಲ‌, ಆದರೆ ಎಲ್ಲರೂ ಮೊದಲು ಕನ್ನಡ ಮಾತಾಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ : ಯಶ್ ಕನ್ನಡ ಪ್ರೇಮಕ್ಕೆ ಫ್ಯಾನ್ಸ್ ಫಿದಾ; ಹೊಸ ಕಾರಿನ ಮೇಲೆ ಕನ್ನಡದಲ್ಲೇ ಸಹಿ ಹಾಕಿದ ರಾಕಿಂಗ್ ಸ್ಟಾರ್!

ನಾವೆಲ್ಲಾ ಶಪತ ಮಾಡಬೇಕು. ಕನ್ನಡ ಪ್ರಾಚೀನ ಭಾಷೆ. ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಭಾಷೆ. ಇದು ಶಾಸ್ತ್ರೀಯ ಭಾಷೆ. ಆದರೆ, ಕೇಂದ್ರ ಸರ್ಕಾರ ಕನ್ನಡ ಭಾಷೆ ಅಭಿವೃದ್ಧಿಗೆ ಅನುದಾನ ನೀಡ್ತಾ ಇಲ್ಲ. ಅದನ್ನು ನಾನು ಈಗ ಮಾತಾಡಲ್ಲ. ಇಂತ ಸ್ಥಾನಮಾನ‌ ಇರುವ ಭಾಷೆ ಕನ್ನಡ. ನಾವು ಮಾಡಬೇಕಿರೋದು, ಕನ್ನಡ ಕಲಿಸುವಮತ್ತು ಕನ್ನಡದಲ್ಲಿ ವ್ಯವಹರಿಸುವ ಕಾರ್ಯವನ್ನು ಮಾಡಬೇಕು. ಕರ್ನಾಟಕದಲ್ಲಿ ಕಡ್ಡಾಯವಾಗಿ ಕನ್ನಡವೇ ವ್ಯಾವಹಾರಿಕ ಭಾಷೆ ಆಗಿರಬೇಕು ಎಂದು ಹೇಳಿದರು.

ಇನ್ನು ವಾಟಾಳ್ ನಾಗರಾಜ್ ಅವರು ಪೊಲೀಸರಿಗೆ ಅನೇಕ ಬಾರಿ ಅತಿಥಿಯಾಗಿದ್ದಾರೆ. ಅವರು ಯಾವಾಗಲೂ ಹೋರಾಟ ಮಾಡಿಕೊಂಡು ಬಂದರೇ ವಿನಹ ಅಧಿಕಾರ ಬಯಿಸಿದವರಲ್ಲ. ನಾನು ಯಾವಾಗಲೂ ಅವರನ್ನು ನಾಯಕರು ಅಂತಾ ಕರೆಯೋದು. ಜನರು ತೀರ್ಮಾನ ಮಾಡಬೇಕು ಯಾರು ನಾಯಕರಾಗಬೇಕು ಯಾರು ನಾಯಕರಾಗಬಾರದು ಅಂತಾ. ಜನರು ಅವರನ್ನು ನಾಯಕರು ಎಂದು ಒಪ್ಪಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ಅಪೋಲೋ ಬದಲು ಬಿಜಿಎಸ್ ಆಸ್ಪತ್ರೆಗೆ ಬಂದ ದರ್ಶನ್; ಅಭಿಮಾನಿಗಳಿಗೆ ತೀವ್ರ ನಿರಾಸೆ!