Asianet Suvarna News Asianet Suvarna News

ಸಿದ್ದು ಕಾಲದ ಹಗರಣ ಲೋಕಾಯುಕ್ತಕ್ಕೆ: ಸಿಎಂ ಬೊಮ್ಮಾಯಿ

ನಾವು ದಾಖಲೆಗಳ ಸಮೇತ ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಅವರ ಭ್ರಷ್ಟಾಚಾರದ ವಿವರವನ್ನು ನೀಡಿದ್ದೇವೆ. ಎಸಿಬಿ ರಚನೆ ಮಾಡಿದ್ದು, ಸಿದ್ದರಾಮಯ್ಯ ತಮ್ಮ ಹಗರಣವನ್ನು ಮುಚ್ಚಿಕೊಳ್ಳಲು ಮತ್ತು ಇದೇ ಕಾರಣಕ್ಕೆ ಲೋಕಾಯುಕ್ತ ಸಂಸ್ಥೆಯ ಬಲವನ್ನು ಕುಗ್ಗಿಸಿದರು. ಈಗ ಸಿದ್ದರಾಮಯ್ಯ ಅವರ ಎಲ್ಲಾ ಕೇಸುಗಳು ಲೋಕಾಯುಕ್ತದ ಮುಂದೆ ಬರಲಿವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Siddaramaiah Tenure Scams to Lokayukta Says CM Basavaraj Bommai grg
Author
First Published Jan 1, 2023, 1:23 PM IST

ಬೆಂಗಳೂರು(ಜ.01):  ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯ ಹಗರಣಗಳು ಈಗ ಲೋಕಾಯುಕ್ತದ ಮುಂದೆ ಬರಲಿವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕತಿಳಿಸಿದ್ದಾರೆ. ಶನಿವಾರ ಬೆಂಗಳೂರು ಅರಮನೆ ಮೈದಾನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ನಗರ ವ್ಯಾಪ್ತಿಯ ಬೂತ್‌ ಮಟ್ಟದ ಅಧ್ಯಕ್ಷರು ಹಾಗೂ ಏಜೆಂಟರ ‘ಬೂತ್‌ ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ನಾವು ದಾಖಲೆಗಳ ಸಮೇತ ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಅವರ ಭ್ರಷ್ಟಾಚಾರದ ವಿವರವನ್ನು ನೀಡಿದ್ದೇವೆ. ಎಸಿಬಿ ರಚನೆ ಮಾಡಿದ್ದು, ಸಿದ್ದರಾಮಯ್ಯ ತಮ್ಮ ಹಗರಣವನ್ನು ಮುಚ್ಚಿಕೊಳ್ಳಲು ಮತ್ತು ಇದೇ ಕಾರಣಕ್ಕೆ ಲೋಕಾಯುಕ್ತ ಸಂಸ್ಥೆಯ ಬಲವನ್ನು ಕುಗ್ಗಿಸಿದರು. ಈಗ ಸಿದ್ದರಾಮಯ್ಯ ಅವರ ಎಲ್ಲಾ ಕೇಸುಗಳು ಲೋಕಾಯುಕ್ತದ ಮುಂದೆ ಬರಲಿವೆ’ ಎಂದು ಹೇಳಿದರು.

ಸಾಲಕ್ಕೆ ಸಿಎಂ ಸಮರ್ಥನೆ:

‘ಕರ್ನಾಟಕ ಪ್ರಗತಿಪರ ರಾಜ್ಯ. ಇದನ್ನು ಅತ್ಯಂತ ಹಿಂದುಳಿದ ರಾಜ್ಯವನ್ನಾಗಿ ಮಾಡುವ ಕೆಲಸವನ್ನು ಕಾಂಗ್ರೆಸ್‌ ಐದು ವರ್ಷ ಮಾಡಿತು. ಬೇರೆ ಸರ್ಕಾರಗಳು ಒಂದು ಲಕ್ಷ ಕೋಟಿ ರು. ಸಾಲ ಮಾಡಿದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷದಲ್ಲಿ ಎರಡು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಕೋವಿಡ್‌ ಇಲ್ಲದಿದ್ದರೂ ಅಷ್ಟೊಂದು ಸಾಲ ಮಾಡಲಾಗಿದೆ. ಆದರೆ, ನಮಗೆ ಸಾಲ ಹೆಚ್ಚಾಗಿ ಮಾಡಲಾಗಿದೆ ಎನ್ನುತ್ತಾರೆ. ಕೋವಿಡ್‌ ನಿರ್ವಹಣೆಯ ಜತೆಗೆ ರಾಜ್ಯದ ಆರ್ಥಿಕ ಪ್ರಗತಿಗಾಗಿ ಸಾಲ ಮಾಡಲಾಗಿದೆ’ ಎಂದು ತಮ್ಮ ಸರ್ಕಾರ ಮಾಡಿರುವ ಸಾಲವನ್ನು ಸಮರ್ಥಿಸಿಕೊಂಡರು.

2023ರಲ್ಲಿ ಬದಲಾವಣೆ ಆಗುತ್ತೆ, ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರುತ್ತೆ: ಡಿಕೆಶಿ

‘ವಿಶ್ವದ ಅತಿದೊಡ್ಡ ಪಕ್ಷ ಬಿಜೆಪಿಯಾಗಿದೆ. ಚೀನಾದ ಕಮ್ಯನಿಸ್ಟ್‌ ಪಕ್ಷಕ್ಕಿಂತ ಅತಿ ಹೆಚ್ಚು ಸದಸ್ಯರನ್ನು ಹೊಂದಿದೆ. ಕೇವಲ ಸಂಖ್ಯೆಯಲ್ಲಿ ಮಾತ್ರ ದೊಡ್ಡದಲ್ಲ, ವಿಚಾರದಲ್ಲಿಯೂ ದೊಡ್ಡದು. ದೇಶ ಮೊದಲು ಎಂಬ ಭಾವನೆಯಿಂದ ಸಾರ್ವಜನಿಕ ಬದುಕು ನಡೆಸುತ್ತಿದ್ದೇವೆ. ದೇಶಕ್ಕಾಗಿ ತ್ಯಾಗ ಮಾಡಲು ಸಿದ್ಧ ಎನ್ನುವ ದೇಶಭಕ್ತರ ಪಕ್ಷ. ಕಾಂಗ್ರೆಸ್‌ ಪಕ್ಷದವರು ಕೇವಲ ಅಧಿಕಾರಕ್ಕಾಗಿ ಇರುವ ರಾಷ್ಟ್ರೀಯ ಪಕ್ಷ. ಇದು ನಮ್ಮ ಮತ್ತು ಅವರ ನಡುವಿನ ವ್ಯತ್ಯಾಸ. ನಾವು ಭಾರತ್‌ ಮಾತಾ ಕಿ ಜೈ ಎಂದರೆ ಅವರು ಸೋನಿಯಾ ಮಾತಾ ಕಿ ಜೈ ಎನ್ನುತ್ತಾರೆ. ಅವರ ನಿಷ್ಠೆ ಇಟಲಿಯ ನಾಯಕರಿಗೆ ಇದ್ದರೆ, ನಮ ಭಕ್ತಿ ಭಾರತ ಮಾತೆಗೆ’ ಎಂದು ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಬಿಜೆಪಿಗೆ 150 ಸೀಟು- ಕಟೀಲ್‌:

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ‘ರಾಜ್ಯ ರಾಜಕೀಯದಲ್ಲಿ ಪರಿವರ್ತನೆ ಶುರುವಾಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಳಗೆ ಭಯ-ಆತಂಕ ಆರಂಭವಾಗಿದೆ. ಬಿಜೆಪಿ 150 ಸ್ಥಾನ ಪಡೆಯುವ ಸಂಕಲ್ಪ ಮಾಡಿದ್ದೇವೆ. ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಜನಸ್ಪಂದನ, ಸಹಕಾರ ಸಿಕ್ಕಿದೆ. ಹಾಸನದಲ್ಲಿಯೂ ನಮ್ಮ ಪತಾಕೆ ಹಾರಲಿದೆ. ಜನಮಾನಸದಲ್ಲಿ ಬಿಜೆಪಿ ಎದ್ದು ನಿಂತಿದೆ. ಶೇ.60ಕ್ಕೂ ಹೆಚ್ಚು ಮತಗಳಿಸುವ ಸಂಕಲ್ಪ ನಮ್ಮದಾಗಲಿದೆ. ಮನೆಮನೆಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ವಿವರಿಸುವ ಕಾರ್ಯ ಮಾಡಲಾಗುವುದು. ಇದೇ ವೇಳೆ ಸದಸ್ಯತ್ವ ಅಭಿಯಾನ ಮಾಡಬೇಕಾಗಿದ್ದು, 50 ಲಕ್ಷ ಯುವಕರನ್ನು ಸದಸ್ಯರನ್ನಾಗಿ ಮಾಡಬೇಕು’ ಎಂದು ಹೇಳಿದರು.

Follow Us:
Download App:
  • android
  • ios