ಜಮೀರ್‌ ಅಹಮದ್‌ ಖಾನ್‌ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ದಾಳಿ ರಾಜಕೀಯ ಪ್ರೇರಿತ ಐಟಿ- ಇ.ಡಿ. ದಾಳಿಗಳು ಬಿಜೆಪಿ ನಾಯಕರ ಮೇಲೆ ಏಕೆ ಆಗಲ್ಲ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು (ಆ.08): ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ದಾಳಿ ರಾಜಕೀಯ ಪ್ರೇರಿತ. ಐಟಿ- ಇ.ಡಿ. ದಾಳಿಗಳು ಬಿಜೆಪಿ ನಾಯಕರ ಮೇಲೆ ಏಕೆ ಆಗಲ್ಲ? ಬಿಜೆಪಿ ನಾಯಕರೆಲ್ಲಾ ಬಿಪಿಎಲ್‌ ಕಾರ್ಡುದಾರರೇ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

Add Asianetnews Kannada as a Preferred SourcegooglePreferred

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಐಟಿ ದಾಳಿಯಾದ ಬಳಿಕ ಅವರ ಶಿಫಾರಸು ಪ್ರಕಾರ ಇ.ಡಿ.ಯವರು ದಾಳಿ ಮಾಡುತ್ತಾರೆ. ಅದು ಆದಾಯ ಮೀರಿ ಆಸ್ತಿ ಗಳಿಸಿದ್ದರೆ, ಅಕ್ರಮವಾಗಿ ಹಣ ವರ್ಗಾವಣೆ ಅಥವಾ ದುರುಪಯೋಗವಾಗಿದ್ದರೆ ಮಾತ್ರ. ಆದರೆ, ಜಮೀರ್‌ ಅಹಮದ್‌ ಅವರ ಮನೆಯ ಮೇಲೆ ಇ.ಡಿಯವರು ಏಕಾಏಕಿ ದಾಳಿ ನಡೆಸಿದ್ದಾರೆ. ಇದು ರಾಜಕೀಯ ಪ್ರೇರಿತ ಹಾಗೂ ಇದರ ಹಿಂದೆ ದುರುದ್ದೇಶ ಅಡಗಿದೆ ಎಂದರು.

ಜಮೀರ್ ಭವ್ಯ ಬಂಗಲೆಯ ಮೌಲ್ಯ ಎಷ್ಟು ? ನೂರಾರು ಕೋಟಿ ಒಡೆಯನಾಗಿದ್ದೇಗೆ? ಫುಲ್ ಡಿಟೇಲ್ಸ್

ಜಮೀರ್‌ ಅಹಮದ್‌ ಅವರು ಮನೆ ಕಟ್ಟಿಸಿದ್ದಾರೆ ಅಷ್ಟೇ. ಹಣ ದುರುಪಯೋಗ ಅಥವಾ ಅಕ್ರಮ ವರ್ಗಾವಣೆ ಆಗಿಲ್ಲ. ಈ ದಾಳಿಗಳು ಬಿಜೆಪಿಯವರ ಮೇಲೆ ಏಕೆ ನಡೆಯುವುದಿಲ್ಲ. ಅವರೆಲ್ಲ ಬಡವರೇ, ಬಿಪಿಎಲ್ ಕಾರ್ಡುದಾರರೇ ? ಕಾಂಗ್ರೆಸ್ಸಿಗರನ್ನೇ ಗುರಿಯಾಗಿಸಿ ಇಂತಹ ದಾಳಿಗಳನ್ನು ಸಂಘಟಿಸುವುದು ಏಕೆ ಎಂದು ಪ್ರಶ್ನಿಸಿದರು.

ಜಮೀರ್‌ ಅಹಮದ್‌ ಖಾನ್‌ ಅವರು ನನ್ನ ಆಪ್ತರು. ಅದೇ ರೀತಿ ಹಲವಾರು ಮಂದಿ ನನಗೆ ಆಪ್ತರಿದ್ದಾರೆ. ಕೇವಲ ಕಾಂಗ್ರೆಸ್‌ ಮಾತ್ರವಲ್ಲ, ಬಿಜೆಪಿಯಲ್ಲೂ ಇದ್ದಾರೆ. ಆದರೆ ಸ್ನೇಹವೇ ಬೇರೆ, ರಾಜಕೀಯವೇ ಬೇರೆ ಎಂದು ಹೇಳಿದರು.