Asianet Suvarna News Asianet Suvarna News

Banks Privatization: ಖಾಸಗೀಕರಣ ವಿರುದ್ಧ ಮೋದಿಗೆ ಸಿದ್ದು ಪತ್ರ

*   ನೌಕರರು, ಠೇವಣಿದಾರರಲ್ಲಿ ಆತಂಕ
*   ಸರ್ಕಾರಿ ಬ್ಯಾಂಕ್‌ಗಳಲ್ಲಿನ ಹೂಡಿಕೆ ಹಿಂತೆಗೆತ ನಿಲ್ಲಿಸಲು ಆಗ್ರಹ
*   ಕೇಂದ್ರದ ನಿರ್ಧಾರದಿಂದ ಸಾವಿರಾರು ಕನ್ನಡಿಗರ ಉದ್ಯೋಗ ನಷ್ಟ 
 

Siddaramaiah Letter to PM Narendra Modi For Banks Privatization grg
Author
Bengaluru, First Published Feb 25, 2022, 4:31 AM IST

ಬೆಂಗಳೂರು(ಫೆ.25):  ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ ಬಂಡವಾಳ ಹಿಂಪಡೆಯುತ್ತಿರುವುದು ಹಾಗೂ ಖಾಸಗೀಕರಣದಿಂದ(Privatization) ಆಗುವ ಅನಾಹುತಗಳ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಆತಂಕ ವ್ಯಕ್ತಪಡಿಸಿದ್ದು, ಈ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಗೆ(Narendra Modi) ಪತ್ರ ಬರೆದು ಬ್ಯಾಂಕ್‌ಗಳಿಂದ ಹೂಡಿಕೆ ಹಿಂತೆಗೆದುಕೊಳ್ಳುವುದು ಆತಂಕಕಾರಿ ಹಾಗೂ ಅನಾಹುತಕಾರಿ ಎಂದು ಕಿಡಿಕಾರಿದ್ದಾರೆ.

ಆರ್ಥಿಕತೆ ಚೇತರಿಕೆ ಹೆಸರಿನಲ್ಲಿ ಬ್ಯಾಂಕ್‌ಗಳಿಂದ(Bank) ಹೂಡಿಕೆ ಹಿಂತೆಗೆದುಕೊಳ್ಳಲು ಸರ್ಕಾರ ತರಾತುರಿ ಮಾಡುತ್ತಿದೆ. ಇದು ಆಧಾರರಹಿತ ಆರ್ಥಿಕ ವಿಧಾನವಾಗಿದ್ದು ಆರ್ಥಿಕ ತಜ್ಞರು, ಬ್ಯಾಂಕಿಂಗ್‌ ವಲಯದ(Banking Sector) ತಜ್ಞರು ಇದೊಂದು ಅನಾಹುತಕಾರಿ ತೀರ್ಮಾನ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೂಡಲೇ ಕೇಂದ್ರ ಸರ್ಕಾರ(Central Government) ಈ ತೀರ್ಮಾನದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಕಾಂಗ್ರೆಸಿಗರ ಒಳ ಬೇಗುದಿ ತಣಿಸಲು ರಾಹುಲ್‌ ಸಭೆ: ಸಿದ್ದು, ಡಿಕೆಶಿ ಸೇರಿ 15 ನಾಯಕರ ದಂಡು ದಿಲ್ಲಿಗೆ!

ಕೇಂದ್ರ ಸರ್ಕಾರ ಕಳೆದ ಎಂಟು ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು(Economy) ಹಾಳುಗೆಡವಿದೆ. ಆದಾಯ ಹೆಚ್ಚಿಸುವಲ್ಲಿ ವಿಫಲವಾಗಿ ಬಂಡವಾಳ ಹಿಂತೆಗೆತದ ಯೋಜನೆಗೆ ಬ್ಯಾಂಕಿಂಗ್‌ ವಲಯವನ್ನು ಗುರಿ ಮಾಡುತ್ತಿದೆ. ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಘೋಷಣೆಯಿಂದ ದೇಶಾದ್ಯಂತ ಆತಂಕ ಸೃಷ್ಟಿಯಾಗಿದೆ. ಬ್ಯಾಂಕ್‌ ಉದ್ಯೋಗಿಗಳು ಹಾಗೂ ಠೇವಣಿದಾರರು ಮತ್ತು ಜನಸಾಮಾನ್ಯರೂ ಆತಂಕಗೊಂಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸಾವಿರಾರು ಕನ್ನಡಿಗರ ಉದ್ಯೋಗ ನಷ್ಟ:

ಖಾಸಗಿ ಹಣಕಾಸು ಸಂಸ್ಥೆಗಳ ದುರಾಸೆ ಮತ್ತು ದೌರ್ಜನ್ಯದಿಂದ ಜನಸಾಮಾನ್ಯರನ್ನು ರಕ್ಷಿಸುವಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆ ಪರಿಣಾಮಕಾರಿಯಾಗಿದೆ. ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ, ಉದ್ಯಮಗಳಿಗೆ ಸಾಲ ಸೌಲಭ್ಯವನ್ನು ಒದಗಿಸುವುದು ಮತ್ತು ಕೃಷಿಕರ ಮನೆ ಬಾಗಿಲಿಗೂ ಸಾಲ ಸೌಲಭ್ಯಗಳನ್ನು ತಲುಪಿಸುವುದು ಬ್ಯಾಂಕ್‌ಗಳ ರಾಷ್ಟ್ರೀಕರಣದಿಂದ ಸಾಧ್ಯವಾಗಿತ್ತು. 1992ರ ವೇಳೆಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ದೇಶದ ಮೂಲೆ ಮೂಲೆಗೂ ವ್ಯಾಪಿಸಿ 65 ಸಾವಿರ ಶಾಖೆಗಳನ್ನು ತೆರೆದಿದ್ದವು. ಆದರೆ ಕಳೆದ 10 ವರ್ಷದಲ್ಲಿ 10 ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ ಘೋಷಿಸಲಾಗಿದೆ. ಕನ್ನಡಿಗರ ಪಾಲಿನ ಸಾವಿರಾರು ಉದ್ಯೋಗ ಕಳೆಯಲಾಗಿದೆ. ಇದೀಗ ವಿಲೀನ ಪ್ರಕ್ರಿಯೆ ಮೂಲಕ ಅರ್ಧ ಮುಗಿಸಿ, ಉಳಿದರ್ಧವನ್ನು ಖಾಸಗೀಕರಿಸಲು ಹೊರಟಿದ್ದೀರಿ ಎಂದು ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾರೆ.

ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸರ್ಕಾರವೇ ಹಲವಾರು ಮಂದಿ ವಂಚಕರು ಸಾವಿರಾರು ಕೋಟಿ ರು.ಗಳನ್ನು ಬ್ಯಾಂಕ್‌ಗಳಿಗೆ ವಂಚಿಸಿ ದೇಶ ತೊರೆದು ಪರಾರಿಯಾಗಿ ತಲೆಮರೆಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ದೇಶಕ್ಕೆ ವಂಚಿಸಿ ದೇಶ ತೊರೆದ ಒಬ್ಬೇ ಒಬ್ಬ ದೊಡ್ಡ ವಂಚಕನನ್ನೂ ಬಂಧಿಸಿ ವಾಪಸ್‌ ಕರೆತರಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ. ಹೀಗಿದ್ದರೂ ಬಂಡವಾಳ ಹಿಂಪಡೆದು ಖಾಸಗಿಯವರಿಗೆ ಮಾರಾಟ ಮಾಡಲು ಹುನ್ನಾರ ನಡೆಸಿದೆ. ಸಾರ್ವಜನಿಕ ಬ್ಯಾಂಕ್‌ಗಳ ಖಾಸಗೀಕರಣದ ಹಿಂದೆ ಮೇಲ್ಜಾತಿಗಳ, ಶ್ರೀಮಂತ ವರ್ಗ, ಕಾರ್ಪೊರೇಟ್‌ ಶ್ರೀಮಂತರ ಹಿತಾಸಕ್ತಿ ಕಾಯುವ, ಕಾರ್ಪೊರೇಟ್‌ ವಂಚಕರಿಗೆ ಅನುಕೂಲ ಮಾಡಿಕೊಡುವ ಹುನ್ನಾರ ಅಡಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Harsha Murder case ಹರ್ಷಾ ಕೊಲೆ ಹಿಂದೆ PFI, SDPI ಕೈವಾಡವಿದ್ದರೆ ಬ್ಯಾನ್ ಮಾಡಿ, ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ!

ಜಾತಿ ಗಣತಿ ಅಂಗೀಕರಿಸಿ ಮುಂದಿನ ಚುನಾವಣೆ ನಡೆಸಿ

ಬೆಂಗಳೂರು:  ಸುಪ್ರೀಂಕೋರ್ಟ್‌ (Supreme Court) ಆದೇಶದಿಂದ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳ ನ್ಯಾಯಯುತ ರಾಜಕೀಯ ಮೀಸಲಾತಿಗೆ ಅಪಾಯ ಎದುರಾಗಲಿದೆ. ಇದನ್ನು ತಪ್ಪಿಸಲು ಸರ್ಕಾರ ಕೂಡಲೇ ಪ್ರತಿಪಕ್ಷಗಳ ಜತೆ ಚರ್ಚೆ ನಡೆಸಿ ನಮ್ಮ ಅವಧಿಯಲ್ಲಿ ನಡೆಸಿದ್ದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಜನಗಣತಿ (caste census) ವರದಿ ಆಧಾರದ ಮೇಲೆ ಮೀಸಲಾತಿ ನೀಡಿ ಚುನಾವಣೆ (Election) ನಡೆಸುತ್ತೇವೆ ಎಂದು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮೀಸಲಾತಿ ಕುರಿತು ಸುಪ್ರೀಂಕೋರ್ಟ್‌ ನೀಡಿರುವ ಆದೇಶವನ್ನು ತಾಲ್ಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ ಚುನಾವಣೆ ಮುಂದೂಡಲು  ನೆಪ ಮಾಡಿಕೊಳ್ಳಬಾರದು. ಬದಲಿಗೆ ಕೂಡಲೇ ಪ್ರತಿಪಕ್ಷ ನಾಯಕರು, ಕಾನೂನು ತಜ್ಞರ ಸಭೆ ಕರೆದು ಬಿಕ್ಕಟ್ಟು ಬಗೆಹರಿಸಿ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
 

Follow Us:
Download App:
  • android
  • ios