ನಂದಿನಿ ಹಾಲಿನ ದರ ಹೆಚ್ಚಳದ ಅಧಿಕೃತ ಅದೇಶ ಪ್ರಕಟ, ಆ.1 ರಿಂದ ಯಾವ ಹಾಲಿಗೆ ಎಷ್ಟೆಷ್ಟು?
ಆಗಸ್ಟ್ 1 ರಿಂದ ರಾಜ್ಯದಲ್ಲಿ ಹಾಲಿನ ದರ ಹೆಚ್ಚಳವಾಗುತ್ತಿದೆ. ಈ ಕುರಿತು ಅಧಿಕೃತ ಅದೇಶವನ್ನು ಸರ್ಕಾರ ಪ್ರಕಟಿಸಿದೆ. ಹಾಲು ಹಾಗೂ ಹಾಲಿನ ಉತ್ಪನ್ನಗಳ ಮೇಲಿನ ದರ ಏರಿಕೆಯನ್ನು ಉಲ್ಲೇಖಿಸಿದ ಆದೇಶದ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು(ಜು.31) ಹಲವು ಸುತ್ತಿನ ಚರ್ಚೆ, ಪರ ವಿರೋಧಗಳ ನಡುವೆ ಕರ್ನಾಟಕ ಸರ್ಕಾರ ಹಾಲಿನ ದರ ಏರಿಕೆ ಮಾಡಿದೆ. ನಾಳೆಯಿಂದ ಹಾಲಿನ ದರ ಹೆಚ್ಚಳವಾಗುತ್ತಿದೆ. ಈ ಕುರಿತು ರಾಜ್ಯ ಸರ್ಕಾರ ಅಧಿಕೃತ ಅದೇಶ ಹೊರಡಿಸಿದೆ. ಸತತ ಮಳೆ, ಮೇವಿನ ಕೊರತೆ, ಚರ್ಮ ರೋಗ, ನಿರ್ವಹಣಾ ವೆಚ್ಚ ಸೇರಿದಂತೆ ಹಲವು ಕಾರಣಗಳಿಂದ ರಾಜ್ಯದಲ್ಲಿ ಹಾಲಿನ ದರವನ್ನು ಏರಿಕೆ ಮಾಡಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಈ ಸಮಸ್ಯೆಗಳಿಂದ ರಾಜ್ಯದಲ್ಲಿ ಪ್ರತಿ ದಿನ 10 ಲಕ್ಷ ಲೀಟರ್ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ನೇರವಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ ಹಾಲು ಉತ್ಪಾದಕರನ್ನು ಉತ್ತೇಜಿಸುವ ನಿಟ್ಟಿನಲ್ಲಿ ದರ ಪರಿಷ್ಕರಿಸಲಾಗಿದೆ ಎಂದು ಆದೇಶದಲ್ಲಿ ಹೇಳಿದ್ದಾರೆ.
ಆಗಸ್ಟ್ 1 ರಿಂದ ಪರಿಷ್ಕೃತ ಜಾರಿಯಾಗುತ್ತಿದೆ. ನಂದಿನಿಯ ಎಲ್ಲಾ ಮಾದರಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಮಾಡಲಾಗಿದೆ. ಪ್ರತಿ ಲೀಟರ್ಗೆ 3 ರೂಪಾಯಿಯಂತೆ ಏರಿಕೆ ಮಾಡಲಾಗಿದೆ. ಇತರ ಪ್ರಮುಖ ಬ್ರ್ಯಾಂಡ್ಗಳ ಹಾಲಿನ ದರಕ್ಕೆ ಹೋಲಿಸಿದರೆ ಕರ್ನಾಟಕದಲ್ಲೂ ಈಗಲೂ ಅಗ್ಗದಲ್ಲೇ ಹಾಲು ಲಭ್ಯವಿದೆ ಎಂದು ಆದೇಶದಲ್ಲಿ ಹೇಳಿದ್ದಾರೆ. ಪರಿಷ್ಕೃತ ದರ ಪಟ್ಟಿ ಇಲ್ಲಿದೆ.
ತಿರುಪತಿ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ: ಕಾರಣ ಬಿಚ್ಚಿಟ್ಟ ಕೆಎಂಎಫ್
- ಟೋನ್ಡ್ ಹಾಲು(ನೀಲಿ ಪೊಟ್ಟಣ)ದ ಸದ್ಯದ ಬೆಲೆ ಪ್ರತಿ ಲೀಟರ್ಗೆ 39 ರೂಪಾಯಿ, ಪರಿಷ್ಕೃತ ದರ 42 ರೂಪಾಯಿ
- ಹೋಮೋಜಿನೈಸ್ಡ್ ಟೋನ್ಡ್ ಹಾಲಿನ ಸದ್ಯದ ಬೆಲೆ ಪ್ರತಿ ಲೀಟರ್ಗೆ 40 ರೂಪಾಯಿ, ಪರಿಷ್ಕೃತ ದರ 43 ರೂಪಾಯಿ
- ಹಸುವಿನ ಹಾಲು(ಹಸಿರು ಪೊಟ್ಟ)ದ ಸದ್ಯದ ಬೆಲೆ ಪ್ರತಿ ಲೀಟರ್ಗೆ 43 ರೂಪಾಯಿ, ಪರಿಷ್ಕೃತ ದರ 46 ರೂಪಾಯಿ
- ಶುಭಂ(ಕೇಸರಿ ಪೊಟ್ಟಣ) ಸ್ಪೆಷಲ್ ಹಾಲಿನ ಸದ್ಯದ ಬೆಲೆ ಪ್ರತಿ ಲೀಟರ್ಗೆ 45 ರೂಪಾಯಿ, ಪರಿಷ್ಕತ ದರ 48 ರೂಪಾಯಿ
- ಪ್ರತಿ ಕೆಜಿ ಮೊಸರಿಗೆ ಸದ್ಯದ ಬೆಲೆ 47 ರೂಪಾಯಿ, ಪರಿಷ್ಕೃತ ದರ 50 ರೂಪಾಯಿ
- ಪ್ರತಿ 200 ಮಿಲಿ ಮಜ್ಜಿಗೆ ಪೊಟ್ಟಣಕ್ಕೆ ಸದ್ಯದ ಬೆಲೆ 8, ಪರಿಷ್ಕೃತ ದರ 9 ರೂಪಾಯಿ
ಹಾಲಿನ ದರ ಪ್ರತಿ ಲೀಟರ್ಗೆ 3 ರೂಪಾಯಿಯಂತೆ ಹೆಚ್ಚಿಸಿದರೂ ಇತರ ರಾಜ್ಯಗಳ ಪ್ರತಿಷ್ಠಿತ ಬ್ರ್ಯಾಂಡ್ ಹಾಲಿನ ದರಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಅಗ್ಗವಾಗಿದೆ. ಕರ್ನಾಟಕದಲ್ಲಿ ನಂದಿನ ಹಾಲಿಗೆ ಪರಿಷ್ಕೃತ ದರ 42 ರೂಪಾಯಿ ಇದ್ದರೆ, ಕೇರಳದಲ್ಲಿನ ಬ್ರ್ಯಾಂಡ್ ಹಾಲಿಗೆ ಲೀಟರ್ಗೆ 50 ರೂಪಾಯಿ, ಇನ್ನು ದೆಹಲಿಯಲ್ಲಿ 54 ರೂಪಾಯಿ, ಗುಜರಾತ್ನಲ್ಲಿ 54 ರೂಪಾಯಿ, ಮಹಾರಾಷ್ಟ್ರದಲ್ಲಿ 54 ರೂಪಾಯಿ, ಹಾಗೂ ಆಂಧ್ರ ಪ್ರದೇಶದಲ್ಲಿ 56 ರೂಪಾಯಿ ಇದೆ ಎಂದು ಆದೇಶದಲ್ಲಿ ಹೇಳಿದ್ದಾರೆ.
ಹೈನುಗಾರಿಕೆ ನಂಬಿದರೆ ಆರ್ಥಿಕ ಸುಭದ್ರತೆ
ಆ.1ರಿಂದ ಜಾರಿಗೆ ಬರುವಂತೆ ನಂದಿನಿ ಹಾಲಿನ ಮಾರಾಟ ದರವನ್ನು .3 ಹೆಚ್ಚಳ ಮಾಡಲಾಗಿದ್ದು, ಹೆಚ್ಚುವರಿ ಮಾಡಿದ ದರದ ಸಂಪೂರ್ಣ ಮೊತ್ತವನ್ನು ನೇರವಾಗಿ ಹಾಲು ಉತ್ಪಾದಕರಿಗೇ ವರ್ಗಾಯಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಎಸ್.ಭೀಮಾನಾಯ್ಕ ಹೇಳಿದ್ದಾರೆ. ಕಳೆದ 2022ರ ಸಾಲಿನಲ್ಲಿ ಸುರಿದ ಸತತ ಮಳೆಯಿಂದ ಮೇವಿನ ಸಮಸ್ಯೆ ತಲೆದೋರಿತು. ಜಾನುವಾರುಗಳಿಗೆ ಚರ್ಮಗಂಟು ರೋಗ ಕಂಡು ಬಂತು. ಪಶು ಆಹಾರದ ಬೆಲೆಯೂ ಹೆಚ್ಚಾಯಿತು. ಇದರಿಂದ ಹಾಲು ಉತ್ಪಾಕರು ತೀವ್ರ ಸಂಕಷ್ಟಕ್ಕೀಡಾದರು. ಇದರಿಂದ ರಾಜ್ಯದಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಜನ ಹೈನೋದ್ಯಮದಿಂದ ವಿಮುಖಗೊಂಡರು. ಹೀಗಾಗಿ ಕಳೆದ ವರ್ಷ 94 ಲಕ್ಷ ಲೀಟರ್ ಇದ್ದ ಹಾಲು ಉತ್ಪಾದನೆ 84 ಲಕ್ಷ ಲೀಟರ್ಗೆ ಇಳಿಕೆಯಾಗಿದೆ ಎಂದು ವಿವರಿಸಿದರು.